ವೋಟ್ ಬ್ಯಾಂಕ್ ರಾಜಕೀಯದಿಂದಾಗಿ ಹೈದರಾಬಾದ್ ವಿಮೋಚನಾ ದಿನ ಆಚರಿಸಲು ಯಾರೂ ಧೈರ್ಯ ಮಾಡಲಿಲ್ಲ: ಅಮಿತ್ ಶಾ

Update: 2022-09-17 09:18 GMT
Photo:PTI

ಹೈದರಾಬಾದ್: ಹೈದರಾಬಾದ್ ವಿಮೋಚನೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಶ್ರೇಯಸ್ಸನ್ನು ಸಲ್ಲಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ವೋಟ್ ಬ್ಯಾಂಕ್ ರಾಜಕೀಯ ಹಾಗೂ  ರಝಾಕರ ಭಯದಿಂದ ಈ ದಿನವನ್ನು ಆಚರಿಸಲು ಹಿಂದೆ ಸರಿದವರ ವಿರುದ್ಧ ವಾಗ್ದಾಳಿ ನಡೆಸಿದರು.

ಶನಿವಾರ ಹೈದರಾಬಾದ್ ವಿಮೋಚನಾ ದಿನದ ಕಾರ್ಯಕ್ರಮದಲ್ಲಿ ಶಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಇತರರು ಭಾಗವಹಿಸಿದ್ದರು.

ಸರ್ದಾರ್ ಪಟೇಲ್ ಇಲ್ಲದಿರುತ್ತಿದ್ದರೆ ಹೈದರಾಬಾದ್ ವಿಮೋಚನೆಗೆ ಇನ್ನಷ್ಟು ವರ್ಷಗಳು ಬೇಕಾಗುತ್ತಿತ್ತು ಹಾಗೂ  ನಿಜಾಮ್ ಆಳ್ವಿಕೆಯ ಸಶಸ್ತ್ರ ಬೆಂಬಲಿಗರಾದ ರಝಾಕರಗಳನ್ನು  ಸೋಲಿಸಿದ ಹೊರತು ಅಖಂಡ ಭಾರತದ ಕನಸು ನನಸಾಗುವುದಿಲ್ಲ ಎಂದು ಅವರು ತಿಳಿದಿದ್ದರು.

"ಇಷ್ಟು ವರ್ಷಗಳ ನಂತರ ಹೈದರಾಬಾದ್ ವಿಮೋಚನಾ ದಿನಾಚರಣೆಯನ್ನು ಸರ್ಕಾರದ ಸಹಭಾಗಿತ್ವದಲ್ಲಿ ಆಚರಿಸಬೇಕು ಎಂಬ ಆಸೆ ಈ ನೆಲದಲ್ಲಿ ಮೂಡಿತ್ತು. ಆದರೆ ದುರದೃಷ್ಟವಶಾತ್, 75 ವರ್ಷಗಳು ಮುಗಿದಿವೆ ಮತ್ತು ಈ ಸ್ಥಳವನ್ನು ಆಳಿದವರು ವೋಟ್ ಬ್ಯಾಂಕ್ ರಾಜಕೀಯದಿಂದಾಗಿ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲು ಧೈರ್ಯ ಮಾಡಲಿಲ್ಲ" ಎಂದು ಶಾ ಹೇಳಿದರು.

"ಚುನಾವಣೆ, ಆಂದೋಲನಗಳಲ್ಲಿ ವಿಮೋಚನಾ ದಿನವನ್ನು ಆಚರಿಸುವುದಾಗಿ ಅನೇಕ ಜನರು ಭರವಸೆ ನೀಡಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬಂದಾಗ, ರಝಾಕರ ಭಯದಿಂದ ಅವರು ಹಿಂದೆ ಸರಿದರು" ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News