ಶಂಕರನಾರಾಯಣ; ಮನೆಗೆ ನುಗ್ಗಿ ಸೊತ್ತು ಕಳವು
Update: 2022-09-18 14:53 GMT
ಶಂಕರನಾರಾಯಣ, ಸೆ.18: ಶಂಕರನಾರಾಯಣ ಗ್ರಾಮದ ಲಕ್ಕೊಳ್ಳಿ ಎಂಬಲ್ಲಿ ಸೆ.16ರಂದು ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ನಾಗೇಂದ್ರ ಪ್ರಸಾದ್ ಎಂಬವರು ಕುಟುಂಬ ಸಮೇತ ದೇವಸ್ಥಾನಕ್ಕೆ ಪೂಜೆ ಮಾಡಿಸಲು ಹೋಗಿದ್ದ ವೇಳೆ ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು, ಕಪಾಟಿನಲ್ಲಿಟ್ಟಿದ್ದ 50,000ರೂ. ನಗದು, ಚಿನ್ನದ ಒಂದು ಜೊತೆ ಓಲೆ, ಬೆಳ್ಳಿಯ ಅರತಿ ತಟ್ಟೆ, ಒಂದು ಜೊತೆ ಬೆಳ್ಳಿಯ ಕುಂಕುಮ ಹಾಕುವ ಭರಣಿ, ಕಾಲು ಗೆಜ್ಜೆ, ಬೆಳ್ಳಿಯ ಬ್ರಾಸ್ಲೈಟ್, ಬೆಳ್ಳಿಯ ಲೋಟ ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 61,250 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.