ಸಂವಿಧಾನ ರಕ್ಷಣೆಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಿ: ಸೀತಾರಾಂ ಯೆಚೂರಿ
ಹೈದರಾಬಾದ್, ಸೆ. 18: ಸಂವಿಧಾನ ಹಾಗೂ ಜನರ ಹಕ್ಕುಗಳನ್ನು ರಕ್ಷಿಸಲು ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಬೇಕು ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ರವಿವಾರ ಹೇಳಿದ್ದಾರೆ. ಹೈದರಾಬಾದ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ವಿಮೋಚನೆಯಲ್ಲಿ ಬಿಜೆಪಿಯ ಯಾವುದೇ ಪಾತ್ರ ಇಲ್ಲ. ಬಿಜೆಪಿ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದೆ ಎಂದರು.
‘ಭಾರತವನ್ನು ಜಾತ್ಯತೀತ, ಪ್ರಜಾಸತ್ತಾತ್ಮಕ ಹಾಗೂ ಗಣರಾಜ್ಯವಾಗಿ ಉಳಿಸೇಕೆಂದು ಬಯಸಿದರೆ, ಭಾರತೀಯ ಸಂವಿಧಾನ ಹಾಗೂ ಜನರಿಗೆ ನೀಡಲಾದ ಹಕ್ಕುಗಳನ್ನು ರಕ್ಷಿಸಲು ಬಯಸಿದರೆ, ಆಡಳಿತಾರೂಢ ಪಕ್ಷ ರಾಜಕೀಯ ಲಾಭಕ್ಕಾಗಿ ಅಧಿಕೃತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳದಿರಲು ಬಯಸಿದರೆ ಬಿಜೆಪಿಯನ್ನು ರಾಜಕೀಯ ಅಧಿಕಾರ ಪಡೆಯುವುದರಿಂದ ದೂರವಿರಿಸಿ’ಎಂದು ಯೆಚೂರಿ ಹೇಳಿದರು.
ಸೆಪ್ಟಂಬರ್ 25 ರಂದು ನಡೆಯುವ ಇಂಡಿಯನ್ ನ್ಯಾಷನಲ್ ಲೋಕ ದಳ ರ್ಯಾಲಿ ಹಾಗೂ ವಿವಿಧ ನಾಯಕರೊಂದಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಭೆ ಜಾತ್ಯತೀತ ಪಕ್ಷಗಳನ್ನು ಸಮಾನ ಕಾರ್ಯಸೂಚಿಯ ಅಡಿಯಲ್ಲಿ ತರುವ ಪ್ರಯತ್ನವಾಗಿರಲಿದೆ ಎಂದರು.
ಬಿಜೆಪಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಇತಿಹಾಸವನ್ನು ತಿರುಚಿ ಕೋಮವಾದವನ್ನು ಪ್ರಚೋದಿಸುತ್ತಿದೆ ಎಂದು ಸೀತಾರಾಮ ಯೆಚೂರಿ ಹೇಳಿದರು.