ಅಕ್ರಮಗಳ ಆರೋಪ ಎದುರಿಸುತ್ತಿರುವ ಕೆಎಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಸರಕಾರ

Update: 2022-09-20 03:40 GMT

ಬೆಂಗಳೂರು: ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಪರಿಹಾರ, ಅಧಿಕಾರ ವ್ಯಾಪ್ತಿ ಮೀರಿ ಖಾತೆ ಬದಲಾವಣೆ, ಅನಧಿಕೃತವಾಗಿ ಹೆಚ್ಚುವರಿ ಹೆಸರು ಸೇರ್ಪಡೆ, ನಿಯಮಬಾಹಿರವಾಗಿ ಜಮೀನು ಮಂಜೂರು,  ಸರಕಾರದ ಮಾರ್ಗಸೂಚಿ ಮತ್ತು ನಿಯಮಗಳನ್ನು ಉಲ್ಲಂಘನೆ, ದಾಖಲೆಗಳನ್ನು ಪರಿಶೀಲಿಸದೇ ನೇರವಾಗಿ ಹಕ್ಕು ಬದಲಾವಣೆ, ಸರಕಾರಿ ಜಮೀನಿಗೆ ಸಂಬಂಧಿಸಿದಂತೆ ಖಾಸಗಿ ಮತ್ತು ಸರಕಾರದ ಪರ ಒಂದೇ ದಿನ ಎರಡು ಆದೇಶ, ಮುಜುರಾಯಿ ದೇವಸ್ಥಾನಗಳ ಹಣದ ಬಗೆಗಿನ ದಾಖಲೆಗಳನ್ನು ನಿರ್ವಹಿಸದಿರುವುದು, ನಿಯಮಬಾಹಿರವಾಗಿ ಖಾತೆ ವರ್ಗಾವಣೆ ಮಾಡಿರುವುದು ಸೇರಿದಂತೆ ಇನ್ನಿತರ ಗಂಭೀರ ಆರೋಪಗಳ ಸಂಬಂಧ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಗಳ ವಿರುದ್ಧ ಸರಕಾರವು ಯಾವುದೇ ಕ್ರಮಕೈಗೊಂಡಿಲ್ಲ.

ಆಪಾದನೆಗೆ ಗುರಿಯಾಗಿರುವ ಬಹುತೇಕ ಅಧಿಕಾರಿಗಳು ತಮ್ಮ ಆರೋಪಗಳ ಸಂಬಂಧ ನೀಡಿರುವ ಪ್ರತಿರಕ್ಷಣೆಯ ಲಿಖಿತ ಹೇಳಿಕೆಗಳನ್ನಾಧರಿಸಿ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ. ಹಲವು ಅಧಿಕಾರಿಗಳಿಗೆ ಇನ್ನೂ ದೋಷಾರೋಪಣೆ ಪಟ್ಟಿ ಜಾರಿಗೊಳಿಸಿಲ್ಲ. ಕೆಲವು ಅಧಿಕಾರಿಗಳಿಗೆ ದೋಷಾರೋಪಣೆಪಟ್ಟಿ ಜಾರಿಗೊಳಿಸಲಾಗಿದ್ದರೂ ಅದಕ್ಕೆ ಆಪಾದಿತ ಅಧಿಕಾರಿಗಳಿಂದ ವಿವರಣೆ ಪಡೆಯುವುದರಲ್ಲಿಯೇ ಇಲಾಖೆಯು ಕಾಲಹರಣ ಮಾಡುತ್ತಿದೆ. ಆಪಾದಿತ ಅಧಿಕಾರಿಗಳು ಇದನ್ನೇ ಮುಂದಿರಿಸಿಕೊಂಡು ನ್ಯಾಯಾಲಯಗಳಿಂದ ತಡೆಯಾಜ್ಞೆ ತರುವ ಮೂಲಕ ಯಾವ ಶಿಸ್ತು ಕ್ರಮವೂ ಇಲ್ಲದೆಯೇ ಅಧಿಕಾರ ಅನುಭವಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

೫ ವರ್ಷಗಳಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನದಲ್ಲಿ ಗ್ರೂಪ್ ಎ ಅಧಿಕಾರಿಗಳ ವಿರುದ್ಧ ಒಟ್ಟು ೧೬೨ ಪ್ರಕರಣಗಳಲ್ಲಿ ಶಿಸ್ತು ಕ್ರಮ ಜರುಗಿಸಲಾಗಿತ್ತು. ಈ ಪೈಕಿ ಇನ್ನೂ ೭೦ ಪ್ರಕರಣಗಳು ತೀರ್ಮಾನವಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಪರಿಷತ್‌ಗೆ ಅಧಿಕಾರಿಗಳ ಸಮಗ್ರ ವಿವರಣೆಗಳನ್ನು ಒದಗಿಸಿದ್ದಾರೆ. ಇದರ ಪ್ರತಿಯು ‘‘the-file.in’’ಗೆ ಲಭ್ಯವಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದ ಇಂದಿನ ಕಾರ್ಯದರ್ಶಿ ಕೆ.ಆರ್.ಸುಂದರ್ (ಈಗ ನಿವೃತ್ತ), ಬೆಂಗಳೂರು ನಗರ ಜಿಲ್ಲೆಯ ಹಿಂದಿನ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ನೀಲಾ ಮಂಜುನಾಥ್, ಮಂಡ್ಯ ಜಿಲ್ಲೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಸಿ.ಪಿ.ಶೈಲಜಾ ಮತ್ತು ಆರ್.ಲತಾ ಮತ್ತಿತರರ ಅಧಿಕಾರಿಗಳ, ಕೆಎಎಸ್ (ಆಯ್ಕೆ ಶ್ರೇಣಿ) ನಿವೃತ್ತ ಅಧಿಕಾರಿ ಜಿ.ವಿ.ಸೀನಪ್ಪ, ಕೆಎಎಸ್ (ಎಸ್‌ಟಿಎಸ್) ನಿವೃತ್ತ ಅಧಿಕಾರಿ ನಾಗಾನಾಯಕ್, ಕೆಎಎಸ್ ಅಧಿಕಾರಿ ಸಿ.ಮಂಜುನಾಥ್, ಎಚ್.ಎಸ್.ಸತೀಶ್‌ಬಾಬು, ಸಿ.ಗಂಗಾಧರಯ್ಯ, ಬಿ.ಆರ್.ದಯಾನಂದ್, ಎಸ್.ಎಂ.ಶಿವಕುಮಾರ್, ಕೆಎಎಸ್ (ಆಯ್ಕೆ ಶ್ರೇಣಿ) ದಯಾನಂದ ಭಂಡಾರಿ, ಕೆಎಎಸ್ (ಹಿರಿಯ ಶ್ರೇಣಿ) ಜಿ.ವಿ.ನಾಗರಾಜು, ಕೆಎಎಸ್ ಅಧಿಕಾರಿ ಎನ್.ವೆಂಕಟಾಚಲಪತಿ, ಕೆಎಎಸ್ ನಿವೃತ್ತ ಅಧಿಕಾರಿ ಎಸ್.ರಾಜಾರಾಂ, ಕೆಎಎಸ್ ಅಧಿಕಾರಿ ಜಿ.ಆರ್.ಹರಿಶಿಲ್ಪ, ಕೆಎಎಸ್ ಅಧಿಕಾರಿಗಳಾದ ಜಿ.ವಿ.ಸೀನಪ್ಪ, ಜಿ.ಸಿ.ಅನಿಲ್‌ಕುಮಾರ್, ಇ.ರಾಧಾಕೃಷ್ಣ, ಮುಹಮ್ಮದ್ ಖಲೀಮವುಲ್ಲಾ, ನಾಗಾನಾಯಕ್, ಎಸ್.ಎನ್.ಗಂಗಾಧರಯ್ಯ, ಕೆಎಎಸ್ ಅಧಿಕಾರಿ ಜಗದೀಶ್ ಕೆ.ನಾಯಕ್, ಕೆಎಎಸ್ ಅಧಿಕಾರಿ ಪಿ.ಜಯಮಾಧವ, ಕೆಎಎಸ್ ಅಧಿಕಾರಿ ಡಿ.ಬಿ.ನಟೇಶ್, ಕೆಎಎಸ್ ನಿವೃತ್ತ  ಅಧಿಕಾರಿ ಸಿ.ನಾಗಯ್ಯ, ಕೆಎಎಸ್ (ಹಿರಿಯ ಶ್ರೇಣಿ) ಎನ್.ಮಹೇಶ್‌ಬಾಬು, ಕೆಎಎಸ್ ಅಧಿಕಾರಿ ಸಿರಸಗಿ ನಾಗಪ್ಪ (ನಿವೃತ್ತ), ಕೆಎಎಸ್ (ಕಿರಿಯ ಶ್ರೇಣಿ) ಅಧಿಕಾರಿ ಒ.ಕಿಶನ್ ಚಂದ್, ಕೆಎಎಸ್ ಅಧಿಕಾರಿ ನಂಜುಂಡೇಗೌಡ, ಕೆಎಎಸ್ (ಆಯ್ಕೆ ಶ್ರೇಣಿ) ಅಧಿಕಾರಿ ಬಿ.ಆರ್.ಪೂರ್ಣಿಮಾ, ಎಸ್.ರಂಗಪ್ಪ, ಶಾಂತಾ ಎಸ್.ಹುಲ್ಮನಿ, ಎಂ.ದಾಸೇಗೌಡ, ಕೆಎಎಸ್ ಅಧಿಕಾರಿ ಶಂಕರಪ್ಪ, ಕೆಎಎಸ್ ಅಧಿಕಾರಿ ವಿ.ಪ್ರಸನ್ನ, ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿ ಎಂ.ಸತೀಶ್‌ಕುಮಾರ್, ಶ್ರೀಹರ್ಷ ಎಸ್.ಶೆಟ್ಟಿ, ಆರ್.ವೆಂಕಟೇಶ್, ಕೆಎಎಸ್ ಅಧಿಕಾರಿ ಶಶಿಧರ ಬಗಲಿ, ಎಸ್.ಎಸ್.ಸೋಮಾಣಳ, ಸಿದ್ದುಪರಪ್ಪಹುಲ್ಲೋಳ್ಳಿ, ಪದ್ಮಬಸವಂತಪ್ಪ, ಮುಹಮ್ಮದ್ ಎನ್.ಝುಬೇರ್, ರಾಜಮ್ಮ ಎ.ಚೌಡಾರೆಡ್ಡಿ, ವಿ.ಜಿ.ದಿವಾಕರ್, ಬಿ.ವಿ.ವಾಸಂತಿ ಅಮರ್, ಕೆಎಎಸ್ ಅಧಿಕಾರಿ ಬಿ.ಆರ್.ಹರೀಶ್, ನಾಗರಾಜ್ ಆರ್.ಸಿಂಗ್ರೇರ್, ಪಿ.ಎಸ್.ಮಂಜುನಾಥ್, ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಕೆಎಎಸ್ ಅಧಿಕಾರಿ ರಾಜಶ್ರೀ ಜೈನಾಪುರ, ಕುಸುಮಕುಮಾರಿ, ಕೆಎಎಸ್ ಅಧಿಕಾರಿ ಎಸ್.ಎಸ್.ಮಧುಕೇಶ್ವರ್, ಎಚ್.ಎಸ್.ಅರುಣಪ್ರಭಾ, ಕೆ.ರಂಗನಾಥ್, ವೈ.ಎಂ.ರಾಮಚಂದ್ರಮೂರ್ತಿ ಮತ್ತಿತರರು ಆರೋಪ ಎದುರಿಸುತ್ತಿದ್ದ ಅಧಿಕಾರಿಗಳು.

ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ

‘ಶಿಸ್ತು ಕ್ರಮ ಪ್ರಾರಂಭವಾದ ನಂತರದಲ್ಲಿ ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ತಂದಿದ್ದಾರೆ ಹಾಗೂ ಪ್ರತಿರಕ್ಷಣಾ ಹೇಳಿಕೆ ಸಲ್ಲಿಕೆ, ವಿಚಾರಣೆ ವರದಿ ಸಲ್ಲಿಕೆ ನಂತರ ಆಡಳಿತ ಇಲಾಖೆಯ ಸ್ಪಷ್ಟೀಕರಣ ಮತ್ತು ಅಭಿಪ್ರಾಯ ಕೋರಿರುವ ಪ್ರಕರಣಗಳಲ್ಲಿ ಆಡಳಿತ ಇಲಾಖೆಯ ಮಾಹಿತಿ ಪಡೆದು ಅಭಿಪ್ರಾಯ ವರದಿ ನೀಡಬೇಕಾದ ಪ್ರಕರಣಗಳಲ್ಲಿ ಆಡಳಿತಾತ್ಮಕವಾಗಿ ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ಒದಗಿಸಿದ್ದಾರೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News