ಉಡುಪಿ ಜಿಲ್ಲೆಯ ಗುತ್ತಿಗೆದಾರರ 500 ಕೋ.ರೂ. ಬಾಕಿ: ಶೀಘ್ರವೇ ಹಣ ಬಿಡುಗಡೆಗೊಳಿಸಲು ಗುತ್ತಿಗೆದಾರರ ಒತ್ತಾಯ
ಉಡುಪಿ, ಸೆ.26: ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ವಿವಾದದಿಂದ ಉಡುಪಿ ಜಿಲ್ಲೆಯ 200ಕ್ಕೂ ಅಧಿಕ ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆಯಿಂದ 100 ಕೋಟಿ, ನೀರಾವರಿ ಇಲಾಖೆಯಿಂದ 150 ಕೋಟಿ ರೂ., ಬಂದರು ಮತ್ತು ಮೀನುಗಾರಿಕೆ ಇಲಾಖೆ, ವಾರಾಹಿ ಯೋಜನೆ, ನಿಗಮ ಮಂಡಳಿ ಕಾಮಗಾರಿ ಸೇರಿದಂತೆ ಬೇರೆ ಬೇರೆ ಇಲಾಖೆಯಿಂದ ಅಂದಾಜು 500 ಕೋಟಿ ರೂ. ಹಣ ಪಾವತಿಯಾಗಲು ಬಾಕಿ ಇದೆ ಎಂದು ಗುತ್ತಿಗೆದಾರರ ಮುನಿಯಾಲು ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಜಿಲ್ಲೆಯ ಸುಮಾರು 20 ಗುತ್ತಿಗೆದಾರರ ಸಮ್ಮುಖದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಜಿಲ್ಲೆಯಲ್ಲಿ ನಾವು ಕಳೆದ 25 ವರ್ಷಗಳಿಂದ ಗುತ್ತಿಗೆ ಕಾಮಗಾರಿ ಮಾಡಿಕೊಂಡು ಬರುತ್ತಿದ್ದೇವೆ. ಇಲ್ಲಿನ ಯಾವುದೇ ಪಕ್ಷದ ಜನಪ್ರತಿನಿಧಿಗಳು ಕಮಿಷನ್ ನೀಡುವಂತೆ ಪೀಡನೆ ಮಾಡಿಲ್ಲ. ನಾವು ಸರಕಾರ ನಿಯಮದ ಪ್ರಕಾರ ಪಾರದರ್ಶಕವಾಗಿ ಟೆಂಡರ್ ಪಡೆದು ಗುಣಮಟ್ಟದ ಕಾಮಗಾರಿ ಮಾಡುತ್ತಿದ್ದೇವೆ. ಈ ಕಮಿಷನ್ ವಿವಾದ ದಿಂದ ನಮಗೆ ಜನರನ್ನು ಎದುರಿಸಿ ಕಾಮಗಾರಿ ನಡೆಸಲು ಕಷ್ಟವಾಗುತ್ತಿದೆ. ಶೇ.40 ಕಮಿಷನ್ ಕೊಟ್ಟು ಕಾಮಗಾರಿ ವಹಿಸಿ ಕೊಂಡಿದ್ದೀರಾ ಎಂದು ಜನ ಕೇಳುತ್ತಿದ್ದಾರೆ. ಇದರಿಂದ ನಾವು ಮುಜುಗರಕ್ಕೆ ಒಳಗಾಗುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಬಾಕಿ ಹಣ ಪಾವತಿಯಾಗದೆ ಸಣ್ಣ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿ ದ್ದಾರೆ. ಬೇರೆ ಕಡೆ ಆಗುತ್ತಿರುವುದಕ್ಕೆ ನಮ್ಮದು ಏನು ತಕರಾರು ಇಲ್ಲ. ನಮ್ಮದು ನಮ್ಮ ಜಿಲ್ಲೆಯ ಬಗ್ಗೆ ಮಾತ್ರ ಸ್ಪಷ್ಟನೆ ನೀಡುತ್ತಿದ್ದೇವೆ. ಜನಪ್ರತಿನಿಧಿ ಗಳು ಮತ್ತು ಗುತ್ತಿಗೆದಾರರು ಒಟ್ಟಿಗೆ ಹೋದರೆ ಮಾತ್ರ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ತಿಕ್ಕಾಟ ನಡೆಯುತ್ತಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಈ ತಿಕ್ಕಾಟದಿಂದ ಹೊಸ ಗುತ್ತಿಗೆದಾರರು ಪೆಮೆಂಟ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಸರಕಾರ ಈ ಹಣ ಆದಷ್ಟು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕಮಿಷನ್ ವಿವಾದದಿಂದ ನಮ್ಮ ಬಾಕಿ ಪಾವತಿ ಸ್ಥಗಿತವಾಗಿದೆ ಎಂದು ಅನಿಸುತ್ತದೆ. ಬೇರೆ ಜಿಲ್ಲೆಯ ಬಗ್ಗೆ ನಮಗೆ ಗೊತ್ತಿಲ್ಲ. ನಮ್ಮ ಜಿಲ್ಲೆಯಲ್ಲಿ ಕಮಿಷನ್ ಇಲ್ಲ ಎಂದು ಹೇಳುತ್ತೇವೆ. ಯಾವ ಕಾರಣಕ್ಕೆ ಪೇಮಂಟ್ ಆಗುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಉಡುಪಿ ಜಿಲ್ಲೆಯ ಗುತ್ತಿಗೆದಾರರಿಗೆ ನ್ಯಾಯ ಸಿಗಬೇಕು. ಬೇಗ ಹಣ ಪಾವತಿ ಆಗಬೇಕು. ಪಕ್ಷದವರು ನಡೆಸುತ್ತಿರುವ ಅಭಿಯಾನದ ಬಗ್ಗೆ ನಾವು ಮಾತನಾಡುವುದಿಲ್ಲ. ಅದು ಅವರ ಇಚ್ಛೆಯಾ ಗಿದೆ. ಹಿಂದಿನ ಸರಕಾರ ಇರುವಾಗ ಕೂಡ ಹಣ ಬಾಕಿ ಇತ್ತು. ಆದರೆ ಬಿಡುಡಗೆ ಕೂಡ ಆಗುತ್ತಿತ್ತು. ಈಗ ಹಣ ಬಿಡುಗಡೆಯಾಗುವುದೇ ಸ್ಥಗಿತಗೊಂಡಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರಾದ ವಾದಿರಾಜ ಶೆಟ್ಟಿ, ಜೀವನ್ ಶೆಟ್ಟಿ, ಜಯರಾಮ್ ಸಾಲ್ಯಾನ್ ಬೊಳ ಮೊದಲಾದವರು ಉಪಸ್ಥಿತರಿದ್ದರು.