ನಾನು ಜನರ ಮನಸ್ಸಿನಲ್ಲಿ ನೆಲೆಸಿದ್ದರೆ ಪ್ರಧಾನಿಗೂ ನನ್ನ ರಾಜಕೀಯ ಜೀವನ ಅಂತ್ಯಗೊಳಿಸಲು ಸಾಧ್ಯವಿಲ್ಲ: ಪಂಕಜಾ ಮುಂಡೆ

Update: 2022-09-28 11:33 GMT

ಮುಂಬೈ: "ನಾನು ಜನರ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ನೆಲೆಸಿದ್ದರೆ ಪ್ರಧಾನಿ ನರೇಂದ್ರ ಮೋದಿ ಕೂಡ ನನ್ನ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಸಾಧ್ಯವಿಲ್ಲ,'' ಎಂದು ಬಿಜೆಪಿ(BJP) ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ (Pankaja Munde) ಹೇಳಿದ್ದಾರೆ.

"ಕಾಂಗ್ರೆಸ್ ಪಕ್ಷದಲ್ಲಿ ವಂಶಾಡಳಿತವಿದೆ. ಮೋದೀಜಿ ಅವರು ವಂಶಾಡಳಿತಕ್ಕೆ ಅಂತ್ಯ ಹಾಡಲು ಬಯಸಿದ್ದಾರೆ... ನಾನು ರಾಜಕೀಯ ಕುಟುಂಬದಿಂದ ಬಂದವಳು, ನಾನು ಜನರ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ನೆಲೆಸಿದ್ದರೆ ಯಾರೂ ನನ್ನ ರಾಜಕೀಯ ಜೀವನವನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ,  ಮೋದೀಜಿಗೆ ಕೂಡ ಸಾಧ್ಯವಿಲ್ಲ,'' ಎಂದು ಅವರು ಮಂಗಳವಾರ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೊಗಯ್ ಎಂಬಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ನಡೆದ ಸಾರ್ವಜನಿಕ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಆಕೆಯ ಹೇಳಿಕೆ ಕುರಿತು ರಾಜ್ಯದ ಬಿಜೆಪಿ ನಾಯಕರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಆದರೆ ಹೆಸರು ಹೇಳಲಿಚ್ಛಿಸದ ಪಕ್ಷದ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿ "ಇಲ್ಲಿ ಆಕೆಯ ಹೇಳಿಕೆಯ ಸಂದರ್ಭವನ್ನು ಗಮನಿಸಬೇಕು. ಆದರೆ ಆಕೆಯಂತಹ ರಾಷ್ಟ್ರ ಮಟ್ಟದ ನಾಯಕರೊಬ್ಬರು ಭಾಷಣದಲ್ಲಿ ಪ್ರಧಾನಿ ಮೋದಿಯನ್ನು ಈ ರೀತಿ ಉಲ್ಲೇಖಿಸುವುದನ್ನು ತಪ್ಪಿಸಬಹುದಾಗಿತ್ತು,'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News