ಪಿಎಫ್ಐಯಂತಹ ಸಂಘಟನೆಗಳನ್ನು ನಿಷೇಧಿಸುವುದು ಪರಿಹಾರವಲ್ಲ: ಸೀತಾರಾಮ ಯೆಚೂರಿ
ತಿರುವನಂತಪುರ, ಸೆ. 28: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದಂತಹ ಸಂಘಟನೆಗಳನ್ನು ನಿಷೇಧಿಸುವುದು ಪರಿಹಾರವಲ್ಲ. ಅವುಗಳನ್ನು ರಾಜಕೀಯವಾಗಿ ಪತ್ಯೇಕಿಸುವುದು ಹಾಗೂ ಅವುಗಳ ಅಪರಾಧ ಚಟುವಟಿಕೆಗಳ ವಿರುದ್ಧ ದೃಢ ಆಡಳಿತಾತ್ಮಕ ಕ್ರಮ ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ ಎಂದು ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಬುಧವಾರ ಹೇಳಿದ್ದಾರೆ.
ತಮ್ಮ ಪಕ್ಷದ ನೇತೃತ್ವದ ಎಲ್ಡಿಎಫ್ ಆಡಳಿತ ಇರುವ ಕೇರಳ ‘‘ಭಯೋತ್ಪಾದನೆಯ ಹಾಟ್ಸ್ಪಾಟ್’’ ಎಂಬ ಬಿಜೆಪಿ ವರಿಷ್ಠಾ ಜೆ.ಪಿ. ನಡ್ಡಾ ಅವರ ಆರೋಪದ ವಿರುದ್ಧ ವಾಗ್ದಾಳಿ ನಡೆಸಿರುವ ಯೆಚೂರಿ, ‘‘ಪ್ರತೀಕಾರದ ಹತ್ಯೆ’’ಯನ್ನು ನಿಲ್ಲಿಸಲು ಆರೆಸ್ಸೆಸ್ ಗೆ ಸೂಚಿಸುವಂತೆ ಕೋರಿದರು. ಅಲ್ಲದೆ, ಉಗ್ರವಾದಿ ಸಂಘಟನೆಗಳ ವಿರುದ್ಧ ರಾಜ್ಯದ ಆಡಳಿತ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡುವಂತೆ ತಿಳಿಸಿದರು.
ಒಂದು ವೇಳೆ ನಡ್ಡಾ ಅವರು ಕೇರಳ ಭಯೋತ್ಪಾದನೆ ಹಾಗೂ ದುಷ್ಟ ಶಕ್ತಿಗಳ ಹಾಟ್ಸ್ಪಾಟ್ ಆಗುವುದನ್ನು ತಡೆಯಲು ಬಯಸುವುದಾದರೆ, ಕೋಮು ಧ್ರುವೀಕರಣವನ್ನು ತೀವ್ರಗೊಳಿಸುವುದು, ದ್ವೇಷ ಹರಡಿಸುವುದು ಹಾಗೂ ಬುಲ್ಡೋಜರ್ ರಾಜಕಾರಣ ಉತ್ತರವಲ್ಲ ಎಂದು ಅವರು ಹೇಳಿದ್ದಾರೆ.