ಗುಜರಾತ್: ಅನ್ಯಧರ್ಮೀಯರಿದ್ದಾರೆ ಎಂದು ಆರೋಪಿಸಿ ಗರ್ಬಾ ಪೆಂಡಾಲ್‌ನಲ್ಲಿ ದಾಂಧಲೆ ನಡೆಸಿದ ಹಿಂದುತ್ವ ಕಾರ್ಯಕರ್ತರು

Update: 2022-10-05 02:10 GMT

ಸೂರತ್: ಗುಜರಾತ್‌ನ ಸೂರತ್ ನಗರದಲ್ಲಿ ಹಿಂದೂಯೇತರ ಜನರನ್ನು ನೇಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಹಿಂದುತ್ವವಾದಿ ಗುಂಪಿನ ಕಾರ್ಯಕರ್ತರು ಗರ್ಬಾ ಪೆಂಡಾಲ್‌ನ ಸಂಘಟಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಥಳಿಸಿ, ಸ್ಥಳವನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಅದಾಗ್ಯೂ, ʼಠಾಕೋರ್ ಜಿ ನಿ ವಾಡಿ ಗಾರ್ಬಾ ಪೆಂಡಾಲ್‌ʼದ ಸಂಘಟಕರು ದೂರು ನೀಡಲು ನಿರಾಕರಿಸಿದ್ದು, ಎರಡು ಪಕ್ಷಗಳ ನಡುವೆ ವಿಷಯವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಬಜರಂಗದಳದ ಕಾರ್ಯಕರ್ತರು ಎಂದು ಗುರುತಿಸಿಕೊಂಡ ಗುಂಪು ಸೋಮವಾರ ರಾತ್ರಿ ಸೂರತ್‌ನ ವೆಸು ಪ್ರದೇಶದಲ್ಲಿ ʼಠಾಕೋರ್ ಜಿ ನಿ ವಾಡಿ ಗರ್ಬಾ ಪೆಂಡಾಲ್‌ʼ ಗೆ ತೆರಳಿ ಸಂಘಟಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಥಳಿಸಿದೆ. ಅವರು ಸ್ಥಳದ ಒಂದು ಭಾಗವನ್ನು ಹಾನಿಗೊಳಿಸಿದ್ದಾರೆ" ಎಂದು ವಲಯ III ರ ಡಿಸಿಪಿ ಸಾಗರ್ ಬಾಗ್ಮಾರ್ ಹೇಳಿದ್ದಾರೆ.

ಪೆಂಡಾಲ್‌ನಲ್ಲಿ ಕೆಲಸ ಮಾಡುತ್ತಿರುವ ಕೆಲವರು ಬೇರೆ ಧರ್ಮಕ್ಕೆ ಸೇರಿದವರು, ಅವರನ್ನು ಹೊರಹಾಕಬೇಕು ಎಂದು ದಾಳಿಕೋರರು ಆಗ್ರಹಿಸಿರುವುದಾಗಿ ಬಾಗ್ಮಾರ್‌ ತಿಳಿಸಿದ್ದಾರೆ.

"ಪೊಲೀಸರು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ನಾವು ದೂರು ದಾಖಲಿಸಲು ಸಂಘಟಕರನ್ನು ಕರೆದಿದ್ದೇವೆ ಆದರೆ ಅವರು ನಿರಾಕರಿಸಿದರು, ಅವರು ತಮ್ಮಲ್ಲಿಯೇ ವಿಷಯವನ್ನು ಇತ್ಯರ್ಥಗೊಳಿಸಿದ್ದಾರೆ" ಎಂದು ಬಾಗ್ಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News