×
Ad

ಕೋಟೇಶ್ವರ ಗ್ರಾ.ಪಂ. ಎದುರಿನ ನಿರುಪಯುಕ್ತ ಬೃಹತ್ ಟ್ಯಾಂಕ್ ತೆರವು

Update: 2022-10-11 20:15 IST

ಕುಂದಾಪುರ, ಅ.11: ಕಳೆದ ಹದಿನೈದು ವರ್ಷಗಳಿಂದ ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್‌ನ್ನು  ತೆರವುಗೊಳಿಸುವ ಕಾರ್ಯಾಚರಣೆ ಕೋಟೇಶ್ವರ ಗ್ರಾಪಂ ವತಿಯಿಂದ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಂಗಳವಾರ ನಡೆಯಿತು.

ಸತತ 9 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದಾಗಿ ಟ್ಯಾಂಕ್ ನೆಲಕ್ಕುರುಳಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಕೋಟೇಶ್ವರ ಗ್ರಾಪಂ ಎದುರಿನ ಗ್ರಾಮಲೆಕ್ಕಿಗರ ಕೊಠಡಿ ಹಿಂಭಾಗದಲ್ಲಿ ಈ ಬೃಹತ್ ನೀರಿನ ಟ್ಯಾಂಕ್ ಇದ್ದು, 1986ರಲ್ಲಿ ನಿರ್ಮಾಣವಾದ 2 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಹೆಡ್‌ಟ್ಯಾಂಕ್‌ನಲ್ಲಿ ಸೋರಿಕೆ ಕಂಡುಬಂದಿದ್ದರಿಂದ ಕಳೆದ ಹದಿನೈದು ವರ್ಷಗಳಿಂದ ಯಾವುದೇ ಉಪಯೋಗವೂ ಇಲ್ಲದೇ ಇದು ನಿರುಪಯುಕ್ತವಾಗಿತ್ತು. ಟ್ಯಾಂಕ್ ಶಿಥಿಲಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಪಂ ಕಟ್ಟಡ ಸಹಿತ ಇತರೆ ಅಂಗಡಿಗಳಿಗೆ ಅಪಾಯ ಇದ್ದ ಕಾರಣ, ಈ ಟ್ಯಾಂಕ್ ತೆರವಿನ ಬಗ್ಗೆ ಗ್ರಾಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯಿಂದ ಸಾಮರ್ಥ್ಯ ವರದಿ ಪಡೆದು ಟ್ಯಾಂಕ್ ಕೆಡವಲು ಅ.11ಮಂಗಳವಾರ ದಿನ ನಿಗದಿ ಮಾಡಿದ್ದರು.

ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಸಂಚಾರಿ ಠಾಣೆ, ಆರೋಗ್ಯ ಇಲಾಖೆ, ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಓವರ್ ಹೆಡ್ ಟ್ಯಾಂಕ್ ತೆರವು ಕಾರ್ಯಾಚರಣೆ ಸಾಂಗವಾಗಿ ನಡೆಯಿತು. ಸುರತ್ಕಲ್ ಮೂಲದ 15-20 ಮಂದಿ ತಂಡ ತೆರವು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಈ ವೇಳೆ ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಕೋಟೇಶ್ವರ ಗ್ರಾಪಂ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ, ಪಿಡಿಒ ದಿನೇಶ್ ನಾಯ್ಕ್, ಸದಸ್ಯರಾದ ಲೋಕೇಶ್ ಅಂಕದಕಟ್ಟೆ, ಸುರೇಶ್ ದೇವಾಡಿಗ, ಚಂದ್ರಮೋಹನ್, ನಾಗರಾಜ ಕಾಂಚನ್, ರಾಯ್ಸನ್ ಡಿಮೆಲ್ಲೋ, ಉದಯ್ ನಾಯಕ್, ರಾಜಶೇಖರ ಶೆಟ್ಟಿ, ರಾಜು ಮರಕಾಲ, ವಿವೇಕ್, ಸಂಚಾರಿ ಠಾಣೆ ಪಿಎಸ್‌ಐ ಸುಧಾ ಪ್ರಭು ಹಾಗೂ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು.

ಕಠಿಣ ಕಾರ್ಯಾಚರಣೆ.....!

ಬೃಹತ್ ಓವರ್ ಹೆಡ್ ಟ್ಯಾಂಕಿನ ಒಂದು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ, ಮತ್ತೊಂದು ಭಾಗದಲ್ಲಿ ಕೋಟೇಶ್ವರ ಪೇಟೆ ಸಂಪರ್ಕದ ಯಾವಾಗಲೂ ವಾಹನಗಳು, ಜನಸಂದಣಿ ಇರುವ ಲೋಕೋಪಯೋಗಿ ರಸ್ತೆ, ಇಕ್ಕೆಲಗಳಲ್ಲಿ ಗ್ರಾಪಂ ಕಚೇರಿ, ವಿಎ ಕಚೇರಿ, ಅಂಗಡಿಗಳು, ರಿಕ್ಷಾ ನಿಲ್ದಾಣ ಗಳಿವೆ. 

ಟ್ಯಾಂಕ್ ಸುತ್ತ 150 ಮೀಟರ್ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳನ್ನು ಮುಂಜಾಗೃತಾ ಕ್ರಮವಾಗಿ ಮುಚ್ಚುವಂತೆ ಗ್ರಾಪಂ ಮೊದಲೇ ನೋಟಿಸ್ ನೀಡಿದ್ದು, ನೀರಿನ ಟ್ಯಾಂಕನ್ನು ಹೆದ್ದಾರಿ ಕಡೆಗೆ ಬೀಳಿಸುವ ಚಿಂತನೆ ಮಾಡಲಾಗಿತ್ತು. ಬೆಳಗ್ಗೆ 7 ಗಂಟೆಯಿಂದ ಕಾರ್ಯಾಚರಣೆ ತಂಡ ಕ್ರೇನ್, ರೋಪ್ ಮೊದಲಾದ ಸಲಕರಣೆ ಬಳಸಿ ಟ್ಯಾಂಕ್ ಕೆಡವುವ ಕಾರ್ಯಕ್ಕೆ ಮುಂದಾಗಿತ್ತು. ಟ್ಯಾಂಕ್ ಅಡಿ ಭಾಗದ ಮೂರು ಪಿಲ್ಲರ್‌ಗಳನ್ನು ಒಡೆದು ಬಲಹೀನಗೊಳಿಸಿ ರೋಪ್ ಮೂಲಕ ಎಳೆದು ಬೀಳಿಸುವ ಚಿಂತನೆ ಮಾಡಲಾಗಿತ್ತು.

ಇದಕ್ಕಾಗಿ ರಾ.ಹೆದ್ದಾರಿ ಸರ್ವೀಸ್ ರಸ್ತೆ ಮತ್ತು ಒಂದು ಕಡೆ ಹೆದ್ದಾರಿಯನ್ನು ಮುಚ್ಚಿ ಇನ್ನೊಂದು ರಸ್ತೆಯಲ್ಲಿ ಎರಡು ದಿಕ್ಕಿನಲ್ಲಿ ವಾಹನ ಓಡಾಡಲು ಅನುಕೂಲ ಮಾಡಿಕೊಡಲಾಗಿತ್ತು. ಟ್ಯಾಂಕ್ ಧರೆಗೆ ಉರುಳುತ್ತಿದ್ದಂತೆಯೇ ಸಂಪೂರ್ಣ ಧೂಳುಮಯ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ರಾ. ಹೆದ್ದಾರಿ ಮೇಲ್ಭಾಗದಲ್ಲಿದ್ದ ಅವಶೇಷಗಳನ್ನು ತೆರವು ಮಾಡಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸರ್ವೀಸ್ ರಸ್ತೆ ಬುಧವಾರ ಮಧ್ಯಾಹ್ನದ ಬಳಿಕ ಸಂಚಾರಕ್ಕೆ ಮುಕ್ತವಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News