2013ರ ಮುಝಫ್ಫರ್ ನಗರ ಗಲಭೆಗಳು; ಬಿಜೆಪಿ ಶಾಸಕನಿಗೆ ಎರಡು ವರ್ಷಗಳ ಜೈಲುಶಿಕ್ಷೆ
ಲಕ್ನೋ,ಅ.11: ಉತ್ತರ ಪ್ರದೇಶದ ನ್ಯಾಯಾಲಯವೊಂದು 2013ರ ಮುಝಫ್ಫರ್ ನಗರ(Muzaffar City) ಗಲಭೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ವಿಕ್ರಮ ಸೈನಿ (Vikrama Saini) ಮತ್ತು ಇತರ 11 ಜನರಿಗೆ ಮಂಗಳವಾರ ತಲಾ ಎರಡು ವರ್ಷಗಳ ಜೈಲುಶಿಕ್ಷೆ ಮತ್ತು 10,000 ರೂ.ದಂಡವನ್ನು ವಿಧಿಸಿದೆ. ಆದಾಗ್ಯೂ ವಿಚಾರಣೆ ಮುಗಿದ ಬೆನ್ನಲ್ಲೇ ಅದು ಸೈನಿಗೆ ಜಾಮೀನು ಮಂಜೂರು ಮಾಡಿದೆ. ಸಾಕ್ಷಾಧಾರಗಳ ಕೊರತೆಯಿಂದ ಪ್ರಕರಣದಲ್ಲಿಯ 15 ಆರೋಪಿಗಳನ್ನು ನ್ಯಾಯಾಲಯವು (Court) ಖುಲಾಸೆಗೊಳಿಸಿದೆ.
ಮುಝಫ್ಫರ್ ನಗರ ಜಿಲ್ಲೆಯ ಕಾವಲ್ ಗ್ರಾಮದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಸೈನಿ ಮತ್ತು ಇತರರು ಭಾಗಿಯಾಗಿದ್ದರೆಂದು ಆರೋಪಿಸಲಾಗಿತ್ತು. 2013 ಆಗಸ್ಟ್ ನಲ್ಲಿ ಮುಸ್ಲಿಮರ ಗುಂಪೊಂದರಿಂದ ಹತ್ಯೆಯಾಗಿದ್ದ ಸೋದರ ಸಂಬಂಧಿಗಳಾದ ಸಚಿನ್ ಮತ್ತು ಸೌರವ್ ಅವರ ಅಂತ್ಯಸಂಸ್ಕಾರದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿತ್ತು. ಇವರಿಬ್ಬರೂ ಗ್ರಾಮದ ಇನ್ನೋರ್ವ ಮುಸ್ಲಿಂ ವ್ಯಕ್ತಿ ಶಾನವಾಝ್ ಕುರೇಶಿಯ ಹತ್ಯೆ ಆರೋಪಿಗಳಾಗಿದ್ದರು.
ಆ ಸಂದರ್ಭದಲ್ಲಿ ಗ್ರಾಮ ಮುಖ್ಯಸ್ಥರಾಗಿದ್ದ ಸೈನಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಗುಂಪನ್ನು ಪ್ರಚೋದಿಸಿದ್ದರು ಎಂದು ಆರೋಪಿಸಲಾಗಿತ್ತು.
ಗ್ರಾಮದಲ್ಲಿಯ ಹತ್ಯೆಗಳು ಜಿಲ್ಲೆಯಲ್ಲಿ ಕೋಮು ಹಿಂಸಾಚಾರಕ್ಕೆ ಕಾರಣವಾಗಿದ್ದು,65 ಜನರು ಕೊಲ್ಲಲ್ಪಟ್ಟಿದ್ದರು ಮತ್ತು ಸಾವಿರಾರು ಮುಸ್ಲಿಂ ಕುಟುಂಬಗಳು ಸ್ಥಳಾಂತರಗೊಂಡಿದ್ದವು. ಮುಝಫ್ಫರ್ನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ಲೈಂಗಿಕ ಹಲ್ಲೆ ಮತ್ತು ದೌರ್ಜನ್ಯದ ಹಲವಾರು ಘಟನೆಗಳೂ ವರದಿಯಾಗಿದ್ದವು.
ಇದನ್ನೂಓದಿ :BJP ಜನ ಸಂಕಲ್ಪ ಯಾತ್ರೆ: ಜನತೆಗೆ ಉತ್ತರಿಸುವಂತೆ ಸಿಎಂ ಬೊಮ್ಮಾಯಿಗೆ 10 ಪ್ರಶ್ನೆ ಮುಂದಿಟ್ಟ ಸುರ್ಜೇವಾಲಾ