ಮಣಿಪಾಲ: ಈಶ್ವರನಗರದ ಮನೆಗೆ ಬೆಂಕಿ; ಅಪಾರ ನಷ್ಟ
Update: 2022-10-12 15:23 IST
ಮಣಿಪಾಲ, ಅ.12: ಈಶ್ವರನಗರ ಸಮೀಪದ ವಿವೇಕಾನಂದ ನಗರದಲ್ಲಿರುವ ಮನೆಯೊಂದರಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ವಿವೇಕಾನಂದ ನಗರದ ರಿಕ್ಷಾ ಚಾಲಕ ರವಿರಾಜ್ ಎಂಬವರ ಪತ್ನಿ ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ ಗಮನಿಸಿದ ನೆರೆಹೊರೆಯವರು ಬೆಂಕಿ ನಂದಿಸಲು ಯತ್ನಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.
ಬೆಂಕಿ ಅವಘಡದಿಂದ ಬಟ್ಟೆಬರೆ, ಟಿವಿ, ಸೋಫಾ ಸೆಟ್, ಫನಿರ್ಚರ್, ಫ್ಯಾನ್, ಫ್ರಿಜ್ ಸೇರಿದಂತೆ ಬಹುತೇಕ ಪೀಠೋಪಕರಣಗಳು ಹಾಗೂ 20 ಸಾವಿರ ರೂ. ನಗದು ಸುಟ್ಟು ಹೋಗಿದ್ದು, ಒಟ್ಟು 2ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.