ರಾಜಕಾರಣಿಗಳು ಕೂಡಾ ಉಚಿತ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ: ಪ್ರಧಾನಿಯ ಟೀಕೆಗೆ ಕೇಜ್ರಿವಾಲ್ ಕಿಡಿ
ಹೊಸದಿಲ್ಲಿ,ಆ.21: ‘ಉಚಿತಕೊಡುಗೆಗಳ ಸಂಸ್ಕೃತಿ ’ ಬಗ್ಗೆ ಟೀಕಿಸಿದ್ದಕ್ಕಾಗಿ ಪ್ರಧಾನಿಯವರ ವಿರುದ್ಧ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಅವರು ರವಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಪ್ರಧಾನಿ ಅವಾಸ ಯೋಜನೆ (ಪಿಎಂಎವೈ)ಯಡಿ ನಿರ್ಮಿಸಲಾದ ಮನೆಗಳ ಗೃಹಪ್ರವೇಶ ಕಾರ್ಯಕ್ರಮವನ್ನು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಿದ ನರೇಂದ್ರ ಮೋದಿಯವರು ದಿಲ್ಲಿ ಸರಕಾರದ ಉಚಿತಕೊಡುಗೆಗಳನ್ನು ಟೀಕಿಸಿರುವ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಅರವಿಂದ ಕೇಜ್ರಿವಾಲ್ ಹರಿಯಬಿಟ್ಟಿದ್ದಾರೆ. ‘‘ ‘‘ರಾಜಕಾರಣಿಗಳು ಕೂಡಾ ಹಲವಾರು ಸೌಕರ್ಯಗಳನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಎಷ್ಟು ಮಂದಿ ಶ್ರೀಮಂತ ವ್ಯಕ್ತಿಗಳ ಬ್ಯಾಂಕ್ಸಾಲ ಮನ್ನಾ ಆಗಿದೆ? . ಉಚಿತಕೊಡುಗೆಗಳನ್ನು ರೇವಡಿ (ಪುಗಸಟ್ಟೆ) ಎಂದು ಕರೆದು ಸಾರ್ವಜನಿಕರನ್ನು ಅಪಮಾನಿಸದಿರಿ ’’ ಎಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ.
ಹಣದುಬ್ಬರದ ಬಗ್ಗೆ ಸಾರ್ವಜನಿಕರು ಚಿಂತಾಕ್ರಾಂತರಾಗಿರುವ ಈ ಸಮಯದಲ್ಲಿ ಅವರು ಉಚಿತ ವಾಗಿ ಶಿಕ್ಷಣ, ಚಿಕಿತ್ಸೆ ಹಾಗೂ ಔಷಧಿ ಹಾಗೂ ವಿದ್ಯುತ್ತನ್ನು ಯಾಕೆ ಪಡೆಯಕೂಡದು ಎಂದು ಪ್ರಶ್ನಿಸಿದ್ದಾರೆ. ಪ್ರಧಾನಮಂತ್ರಿ ಅವಾಸ್ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಭಾಷಣ ಮಾಡುತ್ತಾ, ‘‘ ತನ್ನಿಂದ ಸಂಗ್ರಹಿಸಲಾದ ಹಣವನ್ನು ಉಚಿತಕೊಡುಗೆಗಳ ವಿತರಣೆಗೆ ಖರ್ಚು ಮಾಡುವುದನ್ನು ಕಂಡಾಗ, ಆತನಿಗೆ ತೀರಾ ನೋವಾಗುತ್ತದೆ’’ ಎಂದು ಹೇಳಿದ್ದರು. ಆದಾಗ್ಯೂ ಸಮಾಜದ ಒಂದು ದೊಡ್ಡ ವರ್ಗವು ಈ ದೇಶದಿಂದ ಉಚಿತಕೊಡುಗೆಗಳನ್ನು ತೊಲಗಿಸುವ ದೃಢಸಂಕಲ್ಪ ಮಾಡಿರುವುದು ತನಗೆ ಸಂತಸ ತಂದಿದೆ ಎಂದು ಅವರು ಹೇಳಿದ್ದರು.