ನಗರ ಪ್ರದೇಶದಲ್ಲಿ ಮಕ್ಕಳ ಗ್ರಾಮಸಭೆ ಯಾಕ್ಕಿಲ್ಲ?: ಮಕ್ಕಳ ಹಕ್ಕುಗಳ ಸಂಸತ್ನಲ್ಲಿ ಅಧಿಕಾರಿಗಳಿಗೆ ಪ್ರಶ್ನೆ
ಉಡುಪಿ : ಹಾಲು, ಮೊಟ್ಟೆ ಮೊದಲಾದ ಪೌಷ್ಟಿಕ ಆಹಾರ ಒಂಭತ್ತನೆ ಮತ್ತು 10ನೇ ತರಗತಿ ಮಕ್ಕಳಿಗೆ ಯಾಕೆ ನೀಡುತ್ತಿಲ್ಲ? ಗ್ರಾಮೀಣ ಭಾಗದಲ್ಲಿ ನಡೆಯುವ ಮಕ್ಕಳ ಗ್ರಾಮಸಭೆಯು ನಗರಸಭೆ, ಪುರಸಭೆ, ಪ.ಪಂ. ವ್ಯಾಪ್ತಿಯಲ್ಲಿ ಯಾಕೆ ಮಾಡುತ್ತಿಲ್ಲ? ನಗರ ಪ್ರದೇಶ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗೆ ಏಕರೂಪ ಬಸ್ ವ್ಯವಸ್ಥೆ ಕಲ್ಪಿಸಬಹುದಲ್ಲವೇ?
ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಜಿಲ್ಲಾ, ತಾಲೂಕು ಶಿಕ್ಷಣ ಶಿಕ್ಷಣ ಸಂಪನ್ಮೂಲ ಕೇಂದ್ರ, ಮಂಗಳೂರು ಪಡಿ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಬಾಳ್ಕುದ್ರು ಕೈಂಡ್ ಹಾರ್ಡ್ ಟ್ರಸ್ಟ್, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ನಲ್ಲಿ ಜಿಲ್ಲೆೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಕೇಳಿದ ಪ್ರಶ್ನೆಗಳಿವು.
ಕಡ್ಡಾಯ ಶಿಕ್ಷಣ ಹಕ್ಕು ೧೪ ವರ್ಷದಿಂದ ೧೮ ವರ್ಷಕ್ಕೆ ಏರಿಸಲು ಸಾಧ್ಯ ಇಲ್ಲವೆ? ಶಾಲೆಯಲ್ಲಿ ದೈಹಿಕ ಆರೋಗ್ಯದ ಪರೀಕ್ಷೆಯ ಜತೆಗೆ ಮಾನಸಿಕ ಆರೋಗ್ಯದ ಪರೀಕ್ಷೆ ಮಾಡುವುದಿಲ್ಲ ಏಕೆ ? ಮನೆ ಮನೆ ಕಸ ಸಂಗ್ರಹದಂತೆ ಶಾಲೆಯ ಕಸ ಸಂಗ್ರಹಕ್ಕೆ ಯಾಕೆ ಬರುತ್ತಿಲ್ಲ? ಇದನ್ನು ವಿಲೇವಾರಿ ಮಾಡುವುದು ಯಾರು? ಎಂದು ಸಂಸತ್ನಲ್ಲಿ ಮಕ್ಕಳು ಅಧಿಕಾರಿಗಳಲ್ಲಿ ಪ್ರಶ್ನೆಗಳನ್ನು ಕೇಳಿದರು.
ಹಿರಿಯ ಸಿವಿಲ್ ನ್ಯಾಾಯಾಧೀಶೆ ಹಾಗೂ ಕಾನೂನು ಸೇವಾ ಪ್ರಾಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ, ಕಾರ್ಮಿಕ ಇಲಾಖೆಯ ಅಧಿಕಾರಿ ವಿಜಯೇಂದ್ರ, ನ್ಯಾಾಯವಾದಿ ಅಮೃತ ಕಲಾ, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ, ಬಾಲಕೃಷ್ಣ ಪೂಜಾರಿ, ದಿವಾಕರ ಕುಮಾರ್ ಮೊದಲಾದವರು ಮಕ್ಕಳ ಪ್ರಶ್ನೆಗೆ ಉತ್ತರಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 50 ಕ್ಕೂ ಅಧಿಕ ಶಾಲೆಯ ವಿದ್ಯಾಾರ್ಥಿಗಳು ಭಾಗವಹಿಸಿದ್ದರು. ಸುನೀತಾ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳ ಸಂಸತ್ಗೆ ಜನಪ್ರತಿನಿಧಿಗಳ ನಿರಾಸಕ್ತಿ!
ಮಕ್ಕಳ ಸಮಸ್ಯೆಗಳನ್ನು ವ್ಯವಸ್ಥೆಯ ಗಮನಕ್ಕೆ ತರುವ ಪ್ರಮುಖ ಕಾರ್ಯ ಕ್ರಮ ಆಗಿರುವ ಮಕ್ಕಳ ಸಂಸತ್ನಲ್ಲಿ ಆಹ್ವಾನಿತ ಯಾವುದೇ ಜನಪ್ರತಿನಿಧಿಗಳು ಭಾಗವಹಿಸದೆ ನಿರಾಸಕ್ತಿ ತೋರಿಸಿದ್ದಾರೆ ಎಂದು ಸಂಘಟಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಸ್ತುವಾರಿ ಸಚಿವರಾದ ಎಸ್.ಅಂಗಾರ, ಜಿಲ್ಲೆಯ ಶಾಸಕರು, ಸಚಿವರು, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಗೈರು ಹಾಜರಾಗಿದ್ದರು. ಅದೇ ರೀತಿ ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಈ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಬೀಡಿನಗುಡ್ಡೆ ವಲಸೆ ಕಾರ್ಮಿಕರ ಮಕ್ಕಳು, ಹಾಗಾದರೆ ನಮ್ಮ ಸಮಸ್ಯೆಗಳಿಗೆ ಧ್ವನಿ ಕೊಡು ವವರು ಯಾರು ಎಂದು ಪ್ರಶ್ನಿಸಿದ್ದಾರೆ.