ಪ್ರೇಮಸಂಬಂಧ ಹಿನ್ನೆಲೆಯಲ್ಲಿ ಮಗಳ ಕೊಲೆ: ಆರೋಪಿಯಿಂದ ಸಾಮಾಜಿಕ ಜಾಲತಾಣದಲ್ಲಿ ತಪ್ಪೊಪ್ಪಿಗೆ

Update: 2022-11-05 02:51 GMT

ವಿಶಾಖಪಟ್ಟಣಂ: ಪ್ರೇಮಸಂಬಂಧದ ಹಿನ್ನೆಲೆಯಲ್ಲಿ ಹದಿಹರೆಯದ ಪುತ್ರಿಯನ್ನು ಕೊಲೆ ಮಾಡಿದ ತಂದೆ ಸಾಮಾಜಿಕ ಜಾಲತಾಣದಲ್ಲಿ ಈ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ಯುವತಿಯನ್ನು ಲಲಿತಾ (ಹೆಸರು ಬದಲಿಸಲಾಗಿದೆ) ಎಂದು ಪೊಲೀಸರು ಗುರುತಿಸಿದ್ದಾರೆ. ಸಂತ್ರಸ್ತೆಯ ತಂದೆ ವರಪ್ರಸಾದ್ ಆ್ಯಂಬುಲೆನ್ಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ತನ್ನ ಪುತ್ರಿ ಒಬ್ಬ ವ್ಯಕ್ತಿಯ ಜತೆಗೆ ಪ್ರೇಮಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡ ತಂದೆ ಈ ಸಂಬಂಧ ವೀಡಿಯೊ ಪೋಸ್ಟ್ ಮಾಡಿದ್ದ.

"ಆಕೆ ಇದೇ ಪ್ರದೇಶದ ವ್ಯಕ್ತಿಯೊಬ್ಬನ ಜತೆ ಪ್ರೇಮಸಂಬಂಧ ಹೊಂದಿದ್ದಳು. ನನ್ನ ಹಿರಿಯ ಪುತ್ರಿ ಈಗಾಗಲೇ ಪ್ರಿಯಕರನ ಜತೆ ಪಲಾಯನ ಮಾಡಿದ್ದಾಳೆ. ಇದೀಗ 10ನೇ ತರಗತಿಯಲ್ಲಿ ಓದುತ್ತಿರುವ ಕಿರಿಯ ಪುತ್ರಿ ಕೂಡಾ ಪ್ರೇಮಸಂಬಂಧ ಹೊಂದಿದ್ದಾಳೆ. ಆಕೆ ಕೇಳಿದ್ದೆಲ್ಲ ನಾನು ಕೊಡಿಸಿದ್ದೇನೆ. ಪ್ರಿಯಕರನ ಜತೆ ಮಾತನಾಡದಂತೆ ನಾನು ಆಕೆಗೆ ಎಚ್ಚರಿಕೆ ನೀಡಿದ್ದೆ. ಆದರೆ ಆಕೆ ಮಾತು ಕೇಳಿಲ್ಲ. ಆದ್ದರಿಂದ ಆಕೆಯನ್ನು ಕೊಲೆ ಮಾಡಿದ್ದೇನೆ" ಎಂದು ಆರೋಪಿ ತಂದೆ ಜಾಲತಾಣದಲ್ಲಿ ವಿವರ ನೀಡಿದ್ದಾನೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು, ತಂದೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ newindianexpress.com ವರದಿ ಮಾಡಿದೆ. 

Similar News