ನ.7: ಉಡುಪಿ ಜಿಲ್ಲೆಯ ಪತ್ರಿಕಾರಂಗದ ಆರು ಸಾಧಕ ಶ್ರೇಷ್ಠರ ಸಂಸ್ಮರಣೆ
ಉಡುಪಿ, ನ.5: ಜಿಲ್ಲೆಯಲ್ಲಿ ಅರಳಿ ನಾಡಿನ ವಿವಿಧೆಡೆ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಆರು ಮಂದಿ ಹಿರಿಯ ಪತ್ರಕರ್ತರ ಜನ್ಮಶತಮಾನೋತ್ತರ ಸಂಸ್ಮರಣೆ ಕಾರ್ಯಕ್ರಮವೊಂದನ್ನು ನ.7ರ ಸೋಮವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ.
ಎಂಜಿಎಂ ಕಾಲೇಜಿನ ಸಹಯೋಗದೊಂದಿಗೆ ಮಣಿಪಾಲ ಮೀಡಿಯಾ ನೆಟ್ವರ್ಕ್ ಕಾರ್ಯಕ್ರಮವನ್ನು ಆಯೋಜಿಸಿದೆ. ಬೆಳಗ್ಗೆ 10ರಿಂದ ಪತ್ರಿಕಾ ರಂಗದ ಆರು ಮಂದಿ ಧೀಮಂತ ಸಾಧಕರ ಶತಮಾನೋತ್ತರ ಸಂಸ್ಮರಣೆ ಹಾಗೂ ವಿಚಾರ ಸಂಕಿರಣ ನಡೆದರೆ, ಅಪರಾಹ್ನ 1:00ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಪಂ ಸಿಇಒ ಪ್ರಸನ್ನ ಎಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಗಣಕ ಲಿಪಿ ತಜ್ಞ ಪ್ರೊ.ಕೆ.ಪಿ.ರಾವ್ ಅಧ್ಯಕ್ಷತೆ ವಹಿಸುವರು.
ಬಳಿಕ ಜಿಲ್ಲೆಯ ಮೂಲದ ಪತ್ರಕರ್ತರಾಗಿದ್ದ ಎಸ್.ಯು.ಪಣಿಯಾಡಿ (1897-1959), ಎಂ.ವಿ.ಹೆಗ್ಡೆ (1914-1984), ಪಾ.ವೆಂ.ಆಚಾರ್ಯ (1915- 1992), ಕಮಾಲ್ ಹೈದರ್ (1916-1998), ಬನ್ನಂಜೆ ರಾಮಾಚಾರ್ಯ (1917-2010), ಬೈಕಾಡಿ ಕೃಷ್ಣಯ್ಯ (1918-1992) ಅವರ ಸಂಸ್ಮರಣೆಯನ್ನು ಕ್ರಮವಾಗಿ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ, ಡಾ.ಅನಿಲ್ಕುಮಾರ್ ಶೆಟ್ಟಿ ಕೋಟ, ಛಾಯಾ ಉಪಾಧ್ಯ ಬೆಂಗಳೂರು, ಪ್ರೊ.ಕೆ.ಪಿ.ರಾವ್ ಮಣಿಪಾಲ, ಡಾ.ಶ್ರೀಕಾಂತ ಸಿದ್ಧಾಪುರ ಉಡುಪಿ ಹಾಗೂ ಬೆಳಗೋಡು ರಮೇಶ ಭಟ್ ಉಡುಪಿ ಇವರು ನಡೆಸುವರು.
ಅಪರಾಹ್ನ 1:00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಗಳಾಗಿದ್ದು, ಸಚಿವ ರಾದ ಎಸ್.ಅಂಗಾರ, ವಿ.ಸುನಿಲ್ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ರಘುಪತಿ ಭಟ್ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತೆ ಡಾ.ಸಂಧ್ಯಾ ಎಸ್. ಪೈ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಧಕ ಶ್ರೇಷ್ಠರ ಕಿರುಪರಿಚಯ
1937ರಲ್ಲಿ ಎಸ್.ಯು.ಪಣಿಯಾಡಿ ಮಣಿಪಾಲದಲ್ಲಿ ಮುದ್ರಾಣಾಲಯ ವನ್ನು ಸ್ಥಾಪಿಸಿ ‘ಅಂತರಂಗ’ ವಾರಪತ್ರಿಕೆಯನ್ನು ಆರಂಭಿಸಿದಾಗ ಪಣಿಯಾಡಿ ಅವರೇ ಪ್ರಧಾನ ಸಂಪಾದಕರಾಗಿದ್ದರು. ಕಮಾಲ್ ಹೈದರ್ ವ್ಯವಸ್ಥಾಪಕ ಸಂಪಾದಕರಾಗಿ, ಮಟ್ಟಾರ್ ವಿಟ್ಠಲ್ ಹೆಗ್ಡೆ (ಎಂ.ವಿ.ಹೆಗ್ಡೆ), ಪಾಡಿಗಾರು ವೆಂಕಟರಮಣ ಆಚಾರ್ಯ (ಪಾ.ವೆಂ.ಆಚಾರ್ಯ), ಬನ್ನಂಜೆ ರಾಮಾಚಾರ್ಯರು ಉಪಸಂಪಾದಕರಾಗಿ, ಬೈಕಾಡಿ ಕೃಷ್ಣಯ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದರು.
ಬಳಿಕ ಪಣಿಯಾಡಿಯವರು ಚೆನ್ನೈಗೆ ಹೋದರೆ, ಕಮಾಲ್ ಹೈದರ್ ಕೋಲ್ಕತ್ತ ದಲ್ಲಿ ಕೆಲಕಾಲ ಪತ್ರಕರ್ತರಾಗಿ ದುಡಿದು ದೇಶ ವಿಭಜನೆಗೆ ಮುನ್ನ (1946) ಲಾಹೋರ್ಗೆ ತೆರಳಿ ಅಲ್ಲಿ ಪಾಕಿಸ್ತಾನ ಟೈಮ್ಸ್ ದೈನಿಕ, ಬಿಬಿಸಿ, ಎನ್ಬಿಸಿ ಟಿವಿಗಳಲ್ಲಿ ಹಿರಿಯ ಹುದ್ದೆಗಳನ್ನು ಹೊಂದಿದ್ದರು. ಎಂ.ವಿ.ಹೆಗ್ಡೆ ಮಂಗಳೂರಿನ ‘ನವಭಾರತ’ ಪತ್ರಿಕೆ ಸೇರಿ ಅದರ ಸಂಪಾದಕರಾದರು. ಪಾ.ವೆಂ.ಆಚಾರ್ಯರು ಹುಬ್ಬಳ್ಳಿಯಲ್ಲಿ ಕಸ್ತೂರಿ ಮಾಸಪತ್ರಿಕೆಯನ್ನು ಕಟ್ಟಿ ಬೆಳೆಸಿದರು. ಬನ್ನಂಜೆ ರಾಮಾಚಾರ್ಯರು 1970ರಲ್ಲಿ ಉದಯವಾಣಿ ಆರಂಭವಾದಾಗ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದರು. ಕೃಷ್ಣಯ್ಯನವರು ಅಂದಿನಿಂದ ಕೊನೆಯವರೆಗೂ ಮಣಿಪಾಲ ಪ್ರೆಸ್ ವ್ಯವಸ್ಥಾಪಕರಾಗಿ ಪತ್ರಿಕೆಯನ್ನು ರೂಪಿಸುವಲ್ಲಿ ಸೇವೆ ಸಲ್ಲಿಸಿದರು.