ಗ್ರಹಣ ಹಿಡಿದವರು!

Update: 2022-11-07 18:21 GMT

ಮಾನ್ಯರೇ,

ಗ್ರಹಣಗಳು ಬಂತೆಂದರೆ ಅದು ಮುಗಿಯುವವರೆಗೂ ನ್ಯೂಸ್ ಚಾನಲ್‌ಗಳಿಗೆ ವಾರ ಪೂರ್ತಿ ಬರೀ ಅದರದೇ ಸುದ್ದಿ. ಕಾರ್ಯಕ್ರಮಗಳಲ್ಲಿ ಜ್ಯೋತಿಷಿಗಳನ್ನು ಕೂರಿಸಿಕೊಂಡು ಅದೇ ಚರ್ಚೆ. ದೇಶಕ್ಕೆ ಕೆಡುಕಾಗುತ್ತದೆ, ಇಂತಹ ರಾಶಿಯವರಿಗೆ ಗಂಡಾಂತರವಿದೆ, ಸುನಾಮಿ, ಅತಿವೃಷ್ಟಿ, ಭೂಕಂಪವಾಗುತ್ತದೆ ಎಂಬೆಲ್ಲಾ ಹೆದರಿಸುವ ಸುದ್ದಿಗಳೇ ಹೆಚ್ಚು. 

ತಮ್ಮ ಟಿಆರ್‌ಪಿಗೋಸ್ಕರ ಮುಗ್ಧ ಜನರನ್ನು ಘಾಸಿಗೊಳಿಸುವಂತಹ ಕೆಲಸ ನ್ಯೂಸ್‌ಚಾನೆಲ್‌ಗಳು ಏಕೆ ಮಾಡಬೇಕು? ನ್ಯೂಸ್ ಚಾನಲ್‌ಗಳೇ ಇಲ್ಲದ ಕಾಲದಲ್ಲಿ ನಮ್ಮ ತಾತ, ಮುತ್ತಾತನವರು ವರ್ಷಕ್ಕೆ ಇಂತಹ ಅನೇಕ ಗ್ರಹಣಗಳನ್ನು ಜಯಿಸಿ ನೂರಾರು ವರ್ಷ ಬಾಳಿ ಬದುಕಿದ್ದಾರೆ. ನ್ಯೂಸ್ ಚಾನಲ್‌ಗಳಲ್ಲಿ ಗ್ರಹಣಗಳ ಬಗ್ಗೆ ಪ್ರಸಾರವಾಗುವ ವಿಚಾರಗಳನ್ನು ಕೇಳಿ ಹತ್ತಾರು ವರ್ಷ ಬಾಳಿ ಬದುಕುವವನು ಕೂಡ ಹೆದರಿ ಹತ್ತೇ ದಿನಕ್ಕೆ ಸಾಯುವಂತಾಗುತ್ತಾನೆ. ಪ್ರಕೃತಿಯ ಮುಂದೆ ಯಾರೂ ಸಮಾನರಲ್ಲ, ಯಾವ ಯಾವ ಕಾಲಕ್ಕೆ ಏನೇನು ಆಗಬೇಕೊ ಅದು ಆಗಿಯೇ ತೀರುತ್ತದೆ ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಮತ್ತು ಮುಂಚಿತವಾಗಿ ಹೇಳಲೂ ಸಾಧ್ಯವಿಲ್ಲ.
 ದೃಶ್ಯ ಮಾಧ್ಯಮಗಳು ಇನ್ನಾದರೂ ಹೆದರಿಸುವಂತಹ ಕೆಲಸಗಳನ್ನು ಕೈಬಿಡಲಿ. ದೇಶದಲ್ಲಿ ಚರ್ಚಿಸುವಂತಹ ವಿಷಯಗಳು ಸಾಕಷ್ಟಿವೆ. ಅಂತಹವುಗಳನ್ನು ಚರ್ಚಿಸಿ ಸರಕಾರದ ಗಮನ ಸೆಳೆಯುವ ಮೂಲಕ ಜನತೆಗೆ ಒಳಿತು ಮಾಡಲಿ.
 

Similar News