ಸಚಿವ ಸಂಪುಟಕ್ಕೆಪ್ರಸ್ತಾವ ಸಲ್ಲಿಸಿದ ಕಂದಾಯ ಇಲಾಖೆ

ರಾಷ್ಟ್ರೋತ್ಥಾನಕ್ಕೆ ಗೋಮಾಳ ಮಂಜೂರು

Update: 2022-11-17 04:27 GMT

ಬೆಂಗಳೂರು, ನ.16: ರಾಷ್ಟ್ರೀಯ ನೂತನ ಶೈಕ್ಷಣಿಕ ನೀತಿಯನ್ನು ವಿಸ್ತರಿಸುವ ಹೆಸರಿನಲ್ಲಿ ಆನೇಕಲ್ ತಾಲೂಕು ಮತ್ತು ಚಿಕ್ಕಮಗಳೂರು ತಾಲೂಕಿನ ವಿವಿಧೆಡೆ ಗೋಮಾಳ, ಸರಕಾರಿ ಜಾಗಗಳ ಮಂಜೂರಾತಿಗೆ ರಾಷ್ಟ್ರೋತ್ಥಾನ ಪರಿಷತ್ ಸಲ್ಲಿಸಿರುವ ಪ್ರಸ್ತಾವವನ್ನು ಪುರಸ್ಕರಿಸಿರುವ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿದೆ.

ಸಚಿವ ಸಂಪುಟಕ್ಕೆ ಕಡತವನ್ನು ಮಂಡಿಸಿರುವ ಕಂದಾಯ ಇಲಾಖೆಯು ಕಾನೂನು ಮತ್ತು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೆ ಸರಿಸಿರುವುದು ಗೊತ್ತಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಳಿ ಹೋಬಳಿಯ ಹುಲಿಮಂಗಲ ಗ್ರಾಮದ ಸರ್ವೇ ನಂಬರ್ 155ರ ಬ್ಲಾಕ್ ನಂ ಬಿ 23ರಲ್ಲಿ 1-36 ಎಕರೆ ಜಾಗವಿರುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ಈ ಜಾಗವನ್ನು ನಮ್ಮ ಸಂಸ್ಥೆಗೆ ಮಂಜೂರು ಮಾಡಿ ನಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ಅವರು 2022ರ ಫೆ.2ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದರು. ಹಾಗೆಯೇ ರಾಷ್ಟ್ರೋತ್ಥಾನ ಪರಿಷತ್ ಈಗಾಗಲೇ ರಾಜ್ಯದ ವಿವಿಧೆಡೆ ಹೊಂದಿರುವ ಜಮೀನುಗಳ ವಿವರ ಪ್ರಸ್ತಾವದಲ್ಲಿ ನಮೂದಿಸಿರಲಿಲ್ಲ.

ಈ ಪ್ರಸ್ತಾವವನ್ನು ಪುರಸ್ಕರಿಸಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಅವರು ‘ಪ್ರಸ್ತಾಪಿತ ಜಮೀನು ಸರಕಾರಿ ಗೋಮಾಳ ಜಮೀನಾಗಿದ್ದು ಯಾವುದೇ ನೀರಿನ ಮೂಲವಾಗಿರುವುದಿಲ್ಲ ಎಂದು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದರು. ನೀರಿನ ಮೂಲವಾಗಿಲ್ಲ ಎಂಬುದನ್ನೇ ನೆಪವಾಗಿರಿಸಿಕೊಂಡಿದ್ದ ಜಿಲ್ಲಾಧಿಕಾರಿ ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನನ್ನು ಮಂಜೂರು ಮಾಡಲು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಶಿಫಾರಸು ಮಾಡಿದ್ದರು.

ಅಲ್ಲದೆ ಇದೇ ಜಮೀನನ್ನು ಮಂಜೂರು ಮಾಡುವ ಸಂಬಂಧ ತಯಾರಿಸಿದ್ದ ಚೆಕ್‌ಲಿಸ್ಟ್‌ನಲ್ಲಿ ಈ ಗ್ರಾಮದಲ್ಲಿ ಎಷ್ಟು ಜಾನುವಾರುಗಳಿವೆ ಮತ್ತು ಗೋಮಾಳ ಜಮೀನು ಮಂಜೂರು ಮಾಡುವುದರಿಂದ ಮೇವಿನ ಕೊರತೆ ಉಂಟಾಗಲಿದೆಯೇ ಎಂಬ ಕುರಿತು ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ ಎಂಬುದು ಲಭ್ಯವಿರುವ ಚೆಕ್‌ಲಿಸ್ಟ್‌ನಿಂದ ತಿಳಿದು ಬಂದಿದೆ.

 "the-file.in" ಆದರೂ ರಾಷ್ಟ್ರೋತ್ಥಾನ ಪರಿಷತ್ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಅವರು 2022ರ ಏಪ್ರಿಲ್ 30ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯು ಲಭ್ಯವಾಗಿದೆ. ರಾಷ್ಟ್ರೋತ್ಥಾನ ಪರಿಷತ್ ಪ್ರಸ್ತಾಪಿಸಿರುವ ಗೋಮಾಳ ಸರ್ವೇ ನಂಬರ್ 155ರಲ್ಲಿನ ಜಮೀನುಗಳಿಗೆ ಸಂಬಂಧಿಸಿದಂತೆ ವಿಧಾನಮಂಡಲದ ಅರ್ಜಿಗಳ ಸಮಿತಿ ಮುಂದೆ ವಿಚಾರಣೆಯಲ್ಲಿದೆ. ಈ ಅರ್ಜಿಯು ಇನ್ನೂ ಇತ್ಯರ್ಥಗೊಳಿಸಿಲ್ಲ. ಸದ್ಯ ವಿಚಾರಣೆ ಹಂತದಲ್ಲಿದ್ದರೂ ಬೆಂಗಳೂರು ನಗರ ಜಿಲ್ಲಾಧಿಕಾರಿಯು ರಾಷ್ಟ್ರೋತ್ಥಾನ ಪರಿಷತ್ ಸಲ್ಲಿಸಿದ್ದ ಪ್ರಸ್ತಾವವನ್ನು ಸ್ವೀಕರಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಜಿಲ್ಲಾಧಿಕಾರಿ ಪತ್ರದಲ್ಲೇನಿದೆ?: ಆನೇಕಲ್ ತಾಲೂಕು ಜಿಗಣಿ ಹೋಬಳಿಯ ಹುಲಿಮಂಗಲ ಗ್ರಾಮದ ಸರ್ವೇ ನಂಬರ್ 155 ಮೂಲತಃ ಸರಕಾರಿ ಗೋಮಾಳ ಜಮೀನಾಗಿದ್ದು ಮೂಲ ವಿಸ್ತೀರ್ಣ 185-04 ಎಕರೆ ಜಮೀನಿನ ಪೈಕಿ ಈ ಹಿಂದೆ ಪೋಡಿ ದುರಸ್ತಿ ಆಗಿ ಉಳಿಕೆ ಆಕಾರ್ ಬಂದ್‌ನಂತೆ 68-30 ಎಕರೆ ಇದೆ. ಈ ಸರ್ವೇ ನಂಬರ್‌ನ ಜಮೀನುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಮಂಡಲದ ಅರ್ಜಿ ಸಮಿತಿಯ ವಿಚಾರಣೆ ಹಂತದಲ್ಲಿದೆ. ಇದು ಇತ್ಯರ್ಥಕ್ಕೆ ಬಾಕಿ ಇದೆ. ಈ ಜಮೀನಿನ ಸರಕಾರಿ ಮಾರ್ಗಸೂಚಿ ದರ ಎಕರೆಯೊಂದಕ್ಕೆ 95 ಲಕ್ಷ ರೂ., ಮಾರುಕಟ್ಟೆ ಮೌಲ್ಯ ಎಕರೆಗೆ 2.50 ಕೋಟಿ ರೂ. ಇದೆ ಎಂದು ಕಂದಾಯ ಇಲಾಖೆಯ ಸರಕಾರದ ಪ್ರ.ಕಾರ್ಯದರ್ಶಿ ಗಮನಕ್ಕೆ ತಂದಿರುವುದು ಪತ್ರದಿಂದ ಗೊತ್ತಾಗಿದೆ.

   ಅದೇ ರೀತಿ ಚಿಕ್ಕಮಗಳೂರು ಕಸಬಾ ಹೋಬಳಿಯ ಹಿರೇಮಗಳೂರು ಗ್ರಾಮದಲ್ಲಿಯೂ ಅಂದಾಜು 6 ಎಕರೆ ವಿಸ್ತೀರ್ಣದ ಗೋಮಾಳವನ್ನು ಮಂಜೂರು ಮಾಡಲು ಕಂದಾಯ ಇಲಾಖೆಯು ಕಡತವನ್ನು ಸಚಿವ ಸಂಪುಟದ ಮುಂದಿರಿಸಿದೆ ಎಂದು ಗೊತ್ತಾಗಿದೆ. ರಾಷ್ಟ್ರೀಯ ನೂತನ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಮುಂದಿರಿಸಿಕೊಂಡು ಶೈಕ್ಷಣಿಕ ಕೇಂದ್ರಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಗೋಮಾಳ ಜಮೀನು ಮಂಜೂರಿಗಾಗಿ ವಿವಿಧ ಜಿಲ್ಲಾಧಿಕಾರಿಗಳ ಬಳಿ ಇರುವ ಪ್ರಸ್ತಾವಗಳನ್ನು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಸಿಎಂ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಒತ್ತಡ ಹೇರುತ್ತಿದ್ದಾರೆಂದು ಇಲಾಖೆಯ ಮೂಲಗಳು ತಿಳಿಸಿವೆ. ಈ ಸಂಬಂಧ ಎನ್.ಮಂಜುನಾಥ್ ಪ್ರಸಾದ್ ಅವರು 2022ರ ಏಪ್ರಿಲ್ 21ರಂದು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿದ್ದರು. ರಾಷ್ಟ್ರೋತ್ಥಾನ ಪರಿಷತ್‌ನ ವಿವಿಧ ಪ್ರಸ್ತಾವಗಳು ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಬಾಕಿ ಇದ್ದು ಸದರಿ ಪ್ರಸ್ತಾವಗಳನ್ನು ಕೂಡಲೇ ಜಿಲ್ಲಾಧಿಕಾರಿಯವರಿಂದ ಪಡೆದು ತುರ್ತಾಗಿ ಪಡೆದು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಸಿಎಂ ನಿರ್ದೇಶಿಸಿದ್ದಾರೆಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

Similar News