ಕುಂದಾಪುರ: ಆಗುಂಬೆ ಘಾಟಿಯಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆಯ ಕಾರು ಅಪಘಾತ

Update: 2022-11-19 04:15 GMT

ಕುಂದಾಪುರ:  ಕುಂದಾಪುರದಿಂದ ಹಾಸನಕ್ಕೆ ತೆರಳುತ್ತಿದ್ದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಅವರ ಕಾರು ಆಗುಂಬೆಯಲ್ಲಿ ಅಪಘಾತಕ್ಕೀಡಾದ ಘಟನೆ ಗುರುವಾರ ರಾತ್ರಿ ನಡೆದಿದೆ.

ಕಾರು 50 ಅಡಿಗಿಂತ ಹೆಚ್ಚು ಕೆಳಗಿಳಿದಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಕುಂದಾಪುರದಲ್ಲಿ ನಡೆದ 15ನ್ಯ ರಾಜ್ಯ ಸಮ್ಮೇಳನ ಮುಗಿಸಿ ಅವರು ಆಗುಂಬೆ ಘಾಟಿ ಮೂಲಕ ಹಾಸನ ಕಡೆಗೆ ತೆರಳುತ್ತಿದ್ದರು. ಕಾರನ್ನು ಧರ್ಮೇಶ್ ಎಂಬವರು ಚಲಾಯಿಸುತ್ತಿದ್ದರು. ಆಗುಂಬೆ ಘಾಟಿ ಕಳೆದು ಜಯಪುರದಿಂದ ಆಲ್ಲೂರಿಗೆ ಐದು ಕಿಮೀ ದೂರ ಇರುವ ವೇಳೆ ರಾತ್ರಿ ಸುಮಾರು 10.30ರ ವೇಳೆಗೆ ಕಾರು ಪ್ರಪಾತದೆಡೆಗೆ ಹೋಗಿದೆ. ಸುಮಾರು 50 ಅಡಿ ಕೆಳಗಿಳಿದಿದ್ದು ಮಾಹಿತಿ ನೀಡಲು ಅಲ್ಲಿ ನೆಟ್‌ವರ್ಕ್ ಕೂಡಾ ಇಲ್ಲದ ಕಾರಣ ಪರದಾಟ ನಡೆಸಬೇಕಾಯಿತು.

ಇನ್ನು ಕಾರು ಕೆಳಗಿಳಿದು ಅಲ್ಲೇ ನಿಂತುಕೊಂಡಿದ್ದು, ಸ್ವಲ್ಪ ಭಾರ ಬಿದ್ದರೂ ಭದ್ರಾ ನದಿಗೆ ಬೀಳುವ ಭೀತಿ ಎದುರಾಗಿತ್ತು. ಬಳಿಕ ಅದೇ ಕಾರ್ಯಕ್ರಮ ಮುಗಿಸಿ ಆ ರಸ್ತೆಯಾಗಿ ತೆರಳುತ್ತಿದ್ದ ಸುಕುಮಾರ್ ಎಂಬವರನ್ನು ಕೂಗಿ ಕರೆದ ಬಳಿಕ ಅಪಾಯದಿಂದ ಪಾರಾದರು ಎಂದು ತಿಳಿದು ಬಂದಿದೆ.

Similar News