ರೈತರನ್ನು ಬಳಸಿ ಕಪ್ಪು ಹಣ ಬಿಳುಪು?; ಬಗೆದಷ್ಟೂ ಆಳವಾಗುತ್ತಿದೆ 'ಚಿಲುಮೆ' ಹಗರಣ

ಅಜ್ಞಾತ ಮೂಲದಿಂದ ಕಲ್ಲನಾಯಕನ ಹಳ್ಳಿಯ ರೈತರ ಖಾತೆಗಳಿಗೆ ಲಕ್ಷಾಂತರ ರೂ.ವರ್ಗಾವಣೆ ►thenewsminute.com ವರದಿಯಿಂದ ಬಯಲಿಗೆ

Update: 2022-11-25 03:01 GMT

ಬೆಂಗಳೂರು, ನ.24: ಎನ್‌ಜಿಒ ಸಂಸ್ಥೆ ‘ಚಿಲುಮೆ’ಯಿಂದ ಮತದಾರರ ಮಾಹಿತಿ ಕಳವಿನ ಹಗರಣವು ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿರುವಂತೆಯೇ, ಇದಕ್ಕೆ ಸಂಬಂಧಿಸಿದಂತೆ ಶಂಕಾಸ್ಪದ ರೀತಿಯಲ್ಲಿ ಭಾರೀ ಮೊತ್ತದ ಹಣ ವರ್ಗಾವಣೆಯ ಪ್ರಕರಣವೊಂದನ್ನು thenewsminute.com ಸುದ್ದಿಜಾಲ ತಾಣ ಬಯಲಿಗೆಳೆದಿದೆ.

ಒಟ್ಟಿನಲ್ಲಿ ಚಿಲುಮೆ ಹಗರಣವು ಬಗೆದಷ್ಟೂ ಆಳವಾಗುತ್ತಿರುವುದು ಕಂಡುಬಂದಿದೆ. 2020ರಲ್ಲಿ ಕೊರೋನ ಸಾಂಕ್ರಾಮಿಕದ ಹಾವಳಿ ಉತ್ತುಂಗದಲ್ಲಿದ್ದಾಗ ಲಕ್ಷಾಂತರ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು ಹಾಗೂ ಇಡೀ ಅರ್ಥ ವ್ಯವಸ್ಥೆ ಸ್ತಬ್ಧಗೊಂಡಿತ್ತು. ಇಂತಹ ಸನ್ನಿವೇಶದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಗ್ರಾಮವಾದ ಕಲ್ಲನಾಯಕನ ಹಳ್ಳಿಯಲ್ಲಿ ರೈತರ ಗುಂಪೊಂದಕ್ಕೆ ನಿಗೂಢವಾದ ಮೂಲವೊಂದರಿಂದ ಹಣದ ಹೊಳೆಯೇ ಹರಿದುಬಂದಿತ್ತು. ಮೂರು ಕಂತುಗಳಲ್ಲಿ ಭಾರೀ ಮೊತ್ತದ ಹಣ ಅವರ ಖಾತೆಗಳಿಗೆ ಜಮೆಯಾಗಿತ್ತು. ಆದಾಗ್ಯೂ ಈ ಹಣವು ಅವರಿಗೆ ಇರಿಸಿಕೊಳ್ಳುವುದಕ್ಕಾಗಿರಲಿಲ್ಲ. ಅದನ್ನು ಅವರು ಆ ಗ್ರಾಮದ ಪ್ರಭಾವಿ ವ್ಯಕ್ತಿ, ಇದೀಗ ಪೊಲೀಸ್‌ ಕಸ್ಟಡಿಯಲ್ಲಿರುವ ಚಿಲುಮೆ ಟ್ರಸ್ಟ್‌ನ ಸಂಸ್ಥಾಪಕ ರವಿಕುಮಾರ್ ಕೃಷ್ಣಪ್ಪ ಅವರಿಗೆ ನಗದುರೂಪದಲ್ಲಿ ಹಸ್ತಾಂತರಿಸಬೇಕಿತ್ತು.

‘ನ್ಯೂಸ್‌ಮಿನಿಟ್’ ಹಾಗೂ ಕನ್ನಡ ಸುದ್ದಿಜಾಲತಾಣ ‘ಪ್ರತಿಧ್ವನಿ’ಯೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮತದಾರರ ಮಾಹಿತಿ ಕಳವಿನ ಹಗರಣವನ್ನು ವರದಿಮಾಡಿದ ಮಾರನೇ ದಿನವೇ ನೆಲಮಂಗಲ ತಾಲೂಕಿನಲ್ಲಿರುವ ಕಲ್ಲನಾಯಕನ ಹಳ್ಳಿ ಗ್ರಾಮದ ನಿವಾಸಿಗಳ ಗುಂಪೊಂದು ‘ದಿ ನ್ಯೂಸ್ ಮಿನಿಟ್’ನ ಕಾರ್ಯಾಲಯಕ್ಕೆ ಭೇಟಿ ನೀಡಿತ್ತು. ಕಲ್ಲನಾಯಕನಹಳ್ಳಿ ಗ್ರಾಮದ ಕನಿಷ್ಠ 100 ನಿವಾಸಿಗಳ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂ. ಜಮೆಯಾಗಿತ್ತೆಂಬ ದಂಗುಬಡಿಸುವ ಮಾಹಿತಿಯನ್ನು ಅವರು ನೀಡಿದ್ದರು. ಸ್ಥಳೀಯ ನಿವಾಸಿಗಳ ಬ್ಯಾಂಕ್ ಖಾತೆಗಳ ಮೂಲಕ ಚಿಲುಮೆಯ ವರಿಷ್ಠ ರವಿಕುಮಾರ್ ಈ ಕಪ್ಪುಹಣವನ್ನು ಬಿಳುಪುಗೊಳಿಸಿದ್ದನೆಂದು ಅವರು ಆಪಾದಿಸಿದ್ದಾರೆ.

ಈ ಆರೋಪವನ್ನು ದೃಢೀಕರಿಸಲು ನ್ಯೂಸ್ ಮಿನಿಟ್ ವರದಿಗಾರರು ಕಲ್ಲನಾಯಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ಗ್ರಾಮದ ಸುಮಾರು 10 ನಿವಾಸಿಗಳನ್ನು ಸಂಪರ್ಕಿಸಿದಾಗ, ಅಜ್ಞಾತ ಮೂಲಗಳಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಬರುತ್ತಿದ್ದುದನ್ನು ಒಪ್ಪಿಕೊಂಡರು. ರವಿಕುಮಾರ್‌ನ ಸೂಚನೆಯಂತೆಯೇ ಹಣ ಜಮೆಯಾಗಿತ್ತೆಂಬುದನ್ನು ಅವರು ಆಪಾದಿಸಿದ್ದಾರೆ. ದಿ ನ್ಯೂಸ್ ಮಿನಿಟ್ ಭೇಟಿಯಾದವರಲ್ಲಿ ಐವರು ‘ಸಿಎಸ್‌ಸಿ ಇ-ಗವರ್ನೆನ್ಸ್ ಸರ್ವಿಸಸ್ ಇನ್’ ಎಂಬ ಹೆಸರಿನ ಖಾತೆಯಿಂದ ಎನ್‌ಇಎಫ್‌ಟಿ (ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ) ಮೂಲಕ ಹಣವನ್ನು ಪಡೆದಿದ್ದರು. ಇವರ ಬ್ಯಾಂಕ್ ಖಾತೆಗಳಿಗೆ ಜಮೆಯಾದ ಮೊತ್ತವು ಒಂದೇ ಸಮನಾಗಿ ಇಲ್ಲದಿದ್ದರೂ ( ಅವು 40 ಸಾವಿರ ರೂ.ದಿಂದ 1.40 ಲಕ್ಷ ರೂ.ವರೆಗೆ), ಎಲ್ಲರಿಗೂ 2020ರ ಅಕ್ಟೋಬರ್ 27, ನವೆಂಬರ್ 12 ಹಾಗೂ ಡಿಸೆಂಬರ್ 15ರಂದು ಈ ಮೂರು ನಿರ್ದಿಷ್ಟ ದಿನಾಂಕಗಳಲ್ಲಿ ಹಣ ಜಮೆಯಾಗಿತ್ತು. ಹಣ ಠೇವಣಿಯಾದ ಕೆಲವೇ ದಿನಗಳೊಳಗೆ ಬ್ಯಾಂಕ್‌ಖಾತೆಯಿಂದ ಹಿಂಪಡೆದು (ವಿದ್‌ಡ್ರಾ), ಅದನ್ನು ತನಗೆ ನೀಡುವ ಹಾಗೆ ರವಿಕುಮಾರ್ ಏರ್ಪಾಡು ಮಾಡಿದ್ದ ಎಂದು ಅವರು ಹೇಳಿದ್ದಾರೆ. ಈ ಹಣದ ವರ್ಗಾವಣೆಗಳು ನಡೆದಿರುವ ಪಾಸ್‌ಬುಕ್‌ಗಳ ಪ್ರತಿಗಳು ಕೂಡಾ ದಿ ನ್ಯೂಸ್ ಮಿನಿಟ್‌ಗೆ ಲಭ್ಯವಾಗಿವೆ.

ಎಲ್ಲಾ ಮೂರು ಸಂದರ್ಭಗಳಲ್ಲಿಯೂ ಈ ಹಣವು ಖಾತೆಗೆ ವರ್ಗಾವಣೆಗೊಂಡ ಕೆಲವೇ ದಿನಗಳೊಳಗೆ ಅದನ್ನು ವಿದ್‌ಡ್ರಾ ಮಾಡಲಾಗಿತ್ತು. ಹೀಗೆ ಕಲ್ಲ ನಾಯಕನ ಹಳ್ಳಿಯ 10 ನಿವಾಸಿಗಳ ಖಾತೆಗಳಿಗೆ ಹಣ ಜಮೆಯಾಗಿದ್ದು, ಕೆಲವೇ ದಿನಗಳೊಳಗೆ ಅದನ್ನು ರವಿಕುಮಾರ್‌ಗೆ ಹಸ್ತಾಂತರಿಸಲಾಗಿತ್ತೆಂದು ಈ ರೈತರು ತಿಳಿಸಿದ್ದಾರೆ.

ಇವರ ಖಾತೆಗಳಿಗೆ ಹಣ ಜಮೆ ಮಾಡಿದ ಸಂಸ್ಥೆ ಸಿಎಸ್‌ಸಿ ಇ-ಗವರ್ನೆನ್ಸ್ ಲಿಮಿಟೆಡ್, ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ (ಎಂಇಐಟಿವೈ) ಇಲಾಖೆಯೊಂದಿಗೆ ಸಂಯೋಜಿತವಾಗಿದೆ. ಕೇಂದ್ರ ಸರಕಾರದ ಸಾಮಾನ್ಯ ಸೇವಾಕೇಂದ್ರಗಳ ಯೋಜನೆ (ಸಿಎಸ್‌ಸಿ)ಗಳ ಅನುಷ್ಠಾನದ ಮೇಲೆ ಕಣ್ಗಾವಲಿರಿಸುವುದು ಈ ಸಂಸ್ಥೆಯ ಹೊಣೆಗಾರಿಕೆಯಾಗಿದೆ. ಇದೊಂದು ಪಬ್ಲಿಕ್ ಲಿಸ್ಟೆಡ್ ಕಂಪೆನಿಯಾಗಿದ್ದು ಅದರಲ್ಲಿ ಕೇಂದ್ರ ಸರಕಾರವು ಸಿಂಹಪಾಲನ್ನು ಹೊಂದಿದೆ.

ಸಿಎಸ್‌ಸಿ ಯೋಜನೆಯನ್ನು ಗ್ರಾಮೀಣ ಮಟ್ಟದ ಉದ್ಯಮಶೀಲರು ಅಥವಾ ವಿಎಲ್‌ಇಗಳ ಮೂಲಕ ನಡೆಸಲಾಗುತ್ತದೆ. ಅವರು ಜನನ/ಮರಣ ಪತ್ರ ನೀಡುವಿಕೆ, ಸರಕಾರಿ ಸಮೀಕ್ಷೆಗಳನ್ನು ಹಾಗೂ ಆಧಾರ್ ನೋಂದಣಿ ಮಾಡುವುದು ಮತ್ತಿತರ ಕೆಲಸಗಳನ್ನು ನಿರ್ವಹಿಸುತ್ತಾರೆ. ಅವರ ಸೇವೆಗಳಿಗೆ ಕಮಿಶನ್ ರೂಪದಲ್ಲಿ ಹಣ ಪಾವತಿಯಾಗುತ್ತದೆ. ಆದರೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಸ್ವೀಕರಿಸಿದವರು ಯಾರೂ ಕೂಡಾ ವಿಎಲ್‌ಇಗಳಾಗಿರಲಿಲ್ಲ ಹಾಗೂ ಅವರಿಗೆ ಸಿಎಸ್‌ಸಿಎ ಜೊತೆ ಯಾವುದೇ ನಂಟಿರಲಿಲ್ಲವೆಂದು ದಿ ನ್ಯೂಸ್ ಮಿನಿಟ್ ವರದಿ ತಿಳಿಸಿದೆ.

ಹೀಗೆ ಹಣ ಜಮೆಯಾದ ವ್ಯಕ್ತಿಗಳ ನಿವಾಸಕ್ಕೆ ರವಿಕುಮಾರ್‌ಗೆ ನಿಕಟವಾಗಿರುವ ಕೆಲವು ವ್ಯಕ್ತಿಗಳು ಆಗಮಿಸಿ ನಮ್ಮ ಪಾಸ್ ಬುಕ್‌ಗಳನ್ನು ಸಂಗ್ರಹಿಸಿದರು ಮತ್ತು ಅವರು ಇತರ ಯಾವುದೇ ದಾಖಲೆಗಳನ್ನು ಪಡೆದುಕೊಳ್ಳಲಿಲ್ಲವೆಂದು ಗ್ರಾಮದ ನಿವಾಸಿಯೊಬ್ಬರು ತಿಳಿಸಿದ್ದಾರೆ

ತಾವು ಈ ಹಣವನ್ನು ವಿದ್‌ಡ್ರಾ ಮಾಡಿ, ಅದನ್ನು ರವಿಕುಮಾರ್‌ಗೆ ನೇರವಾಗಿ ಇಲ್ಲವೇ ಅವರ ವ್ಯಕ್ತಿಗಳ ಮೂಲಕ ಹಸ್ತಾಂತರಿಸಿರುವುದಾಗಿ ಈ ಎಲ್ಲಾ ನಿವಾಸಿಗಳು ತಿಳಿಸಿದ್ದಾರೆ.

ತಮಗೆ ರವಿಕುಮಾರ್ ಜೊತೆಗೆ ಈ ಹಿಂದೆ ಉತ್ತಮ ಬಾಂಧವ್ಯವಿತ್ತು. ಆದರೆ 2020 ರ ಡಿಸೆಂಬರ್‌ನಲ್ಲಿ ನಡೆದ ಗ್ರಾಮಪಂಚಾಯತ್ ಚುನಾವಣೆಯ ಬಳಿಕ ತಮ್ಮ ನಡುವೆ ಒಡಕು ಉಂಟಾಗಿತ್ತು ಎಂದು ಈ ನಿವಾಸಿಗಳು ಹೇಳಿದ್ದಾರೆ. ತನ್ನ ಅಭ್ಯರ್ಥಿಯನ್ನು ಬೆಂಬಲಿಸಿದ ಜನರಿಗೆ ಆತ ನೆರವಾಗತೊಡಗಿದ್ದ ಹಾಗೂ ಬೆಂಬಲಿಸದೇ ಇದ್ದವರಿಗೆ ತೊಂದರೆ ನೀಡತೊಡಗಿದ್ದ ಎಂದು ಸ್ಥಳೀಯ ನಿವಾಸಿಯೊಬ್ಬರು ನ್ಯೂಸ್ ಮಿನಿಟ್‌ಗೆ ತಿಳಿಸಿದ್ದಾರೆ.

ಅಲ್ಲದೆ ತನಗೆ ಪ್ರಭಾವಿ ಸಚಿವರೊಬ್ಬರ ಜೊತೆ ನಂಟಿರುವ ಬಗ್ಗೆಯೂ ಆತ ಗ್ರಾಮಸ್ಥರಲ್ಲಿ ಹೇಳಿಕೊಳ್ಳುತ್ತಿದ್ದೆಂದು ಕಲ್ಲನಾಯಕನ ಹಳ್ಳಿ ನಿವಾಸಿಗಳು ಹೇಳಿದ್ದಾರೆ.


ಚಿಲುಮೆ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಬ್ಯಾಲೆನ್ಸ್ ಶೀಟ್‌ಗಳು ನ್ಯೂಸ್ ಮಿನಿಟ್‌ಗೆ ಲಭ್ಯವಾಗಿವೆ. 2021ರಲ್ಲಿ ಸಿಎಸ್‌ಇ ಇ-ಗವರ್ನೆನ್ಸ್ ಸಂಸ್ಥೆಯಿಂದ ಚಿಲುಮೆ ಕಂಪೆನಿಗೆ 15 ಲಕ್ಷ ರೂ. ವ್ಯಾಪಾರ ಸ್ವೀಕೃತಿ (ಟ್ರೇಡ್ ರಿಸಿವೇಬಲ್ಸ್) ಎಂಬುದಾಗಿ ನಮೂದಿತವಾಗಿ ದಾಖಲಿಸಲ್ಪಟ್ಟಿತ್ತು. 2022ರಲ್ಲಿಯೂ 1.5 ಲಕ್ಷ ರೂ. ಸಿಎಸ್‌ಸಿ ಇ-ಗವರ್ನೆನ್ಸ್ ಮೂಲಕ ಪಾವತಿಯಾಗಿರುವುದು ಚಿಲುಮೆಯ ಬ್ಯಾಲೆನ್ಸ್ ಶೀಟ್‌ನಲ್ಲಿ ಕಂಡುಬಂದಿದೆ.

ರೈತ ಚೆಲ್ಲಯ್ಯ (ಹೆಸರು ಬದಲಾಯಿಸ ಲಾಗಿದೆ)ನ ಖಾತೆಗಳಿಗೆ ನೆಫ್ಟ್ ಮೂಲಕ ಮೂರು ಕಂತುಗಳಲ್ಲಿ ಸಿಎಸ್‌ಸಿ ಇ-ಗವರ್ನೆನ್ಸ್ ಸಂಸ್ಥೆಯಿಂದ ಹಣ ಪಾವತಿಯಾಗಿತ್ತು. ಮೊದಲ ಕಂತಿನಲ್ಲಿ 2020ರ ಅಕ್ಟೋಬರ್ 27ರಂದು ಆತನ ಬ್ಯಾಂಕ್ ಖಾತೆಗೆ 44,245 ರೂ. ಪಾವತಿಯಾಗಿತ್ತು. ಎರಡನೇ ಕಂತಿನಲ್ಲಿ 2020ರ ನವೆಂಬರ್ 12ರಂದು ಆತನ ಖಾತೆಗೆ 1,31,284 ರೂ. ಪಾವತಿಯಾಗಿತ್ತು. ಮೂರನೇ ಕಂತಿನಲ್ಲಿ 2020ರ ಡಿಸೆಂಬರ್ 15ರಂದು ಆತನ ಖಾ  ತೆಗೆ 50,352 ರೂ. ಜಮೆಯಾಗಿತ್ತು.

Similar News