ಅಭಿವೃದ್ಧಿಯೋ, ಆದಿವಾಸಿ ಸಂಸ್ಕೃತಿ ಮತ್ತು ಜೀವನದ ಯೋಜಿತ ನಾಶವೋ?

Update: 2022-11-29 04:49 GMT

ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಶತಮಾನಗಳಿಂದ ಬದುಕಿದ್ದ ಬುಡಕಟ್ಟು ಸಮುದಾಯದ ಪಾಲಿಗೆ ಕುತ್ತು ಬಂದೆರಗಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ ಅಲ್ಲಿನ ಜನಸಂಖ್ಯೆಯು ಮೂರೂವರೆ ಲಕ್ಷ ದಾಟಲಿದೆ. ಅದರಲ್ಲಿ ಬರೀ ಒಂದೂವರೆ ಸಾವಿರದಷ್ಟಿರುವ ಈ ಬುಡಕಟ್ಟು ಜನರ ಬದುಕು ಮತ್ತು ಅಸ್ಮಿತೆ ಛಿದ್ರ ಛಿದ್ರವಾಗಿ ಹೋಗಲಿದೆ.

ಗ್ರೇಟ್ ನಿಕೋಬಾರ್ ದ್ವೀಪದಲ್ಲಿ 72,000 ಕೋಟಿ ರೂ.ಗಳ ಬೃಹತ್ ಯೋಜನೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸಿದ್ಧವಾಗಿದೆ. ಅಕ್ಟೋಬರ್ 27ರಂದು, ಪರಿಸರ ಸಚಿವಾಲಯವು ಯೋಜನೆಗೆ ತಾತ್ವಿಕ ಅನುಮತಿ ನೀಡಿತ್ತು. ನವೆಂಬರ್ 4ರಂದು ಅಂತಿಮ ಅನುಮತಿ ನೀಡಲಾಗಿದೆ. ಈ ಬೆಳವಣಿಗೆ ತಜ್ಞರು ಮತ್ತು ಸಂಶೋಧಕರಲ್ಲಿ ತೀವ್ರ ಆತಂಕ ಮೂಡಿಸಿದೆ. ದ್ವೀಪದಲ್ಲಿನ ಸ್ಥಳೀಯ ಸಮುದಾಯಗಳ ಭವಿಷ್ಯದ ಬಗ್ಗೆ ಅವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ದ್ವೀಪದ ಶಾಂಪನ್ ಬುಡಕಟ್ಟು ಸಮುದಾಯದವರ ಸಂಖ್ಯೆ 200ಕ್ಕಿಂತ ತುಸು ಜಾಸ್ತಿಯಿರಬಹುದು. ಇನ್ನು ನಿಕೋಬಾರಿಗಳ ಸಂಖ್ಯೆ ಒಂದು ಸಾವಿರದಷ್ಟು. ಗ್ರೇಟ್ ನಿಕೋಬಾರ್‌ನ ಒಟ್ಟು ಜನಸಂಖ್ಯೆ 8,000ಕ್ಕಿಂತ ಸ್ವಲ್ಪ ಹೆಚ್ಚೆಂಬ ಅಂದಾಜಿದೆ. ಬುಡಕಟ್ಟು ಸಮುದಾಯದವರ ಸಂಖ್ಯೆಯು ಒಟ್ಟು ಜನಸಂಖ್ಯೆಯ ಶೇ.16ರಷ್ಟು ಮಾತ್ರ. 1960ರವರೆಗೂ ಭಾರತದ ಮುಖ್ಯ ಭೂಭಾಗದಿಂದ ಇತರರನ್ನು ಕರೆತರುವವರೆಗೂ ಈ ಬುಡಕಟ್ಟು ಸಮುದಾಯದವರೇ ಗ್ರೇಟ್ ನಿಕೋಬಾರ್‌ನ ಏಕೈಕ ನಿವಾಸಿಗಳಾಗಿದ್ದರು.

ಶಾಂಪನ್ ಬುಡಕಟ್ಟನ್ನು ಸರಕಾರವು ಅಳಿವಿನಂಚಿನಲ್ಲಿರುವ ಬುಡಕಟ್ಟು ಗುಂಪು ಎಂದು ಪರಿಗಣಿಸಿದೆ. ಅವರಿನ್ನೂ ಕೃಷಿಪೂರ್ವ ಮಟ್ಟದ ಜೀವನಸ್ಥಿತಿಯಲ್ಲಿಯೇ ಇರುವುದು, ಕಡಿಮೆ ಮಟ್ಟದ ಸಾಕ್ಷರತೆ ಮತ್ತು ಕ್ಷೀಣಿಸುತ್ತಿರುವ ಅಥವಾ ಸ್ಥಿರವಾಗಿರುವ ಜನಸಂಖ್ಯೆಯ ಹಿನ್ನೆಲೆಯಲ್ಲಿ ಅವರನ್ನು ಅಪಾಯದಲ್ಲಿರುವ ಸಮುದಾಯವೆಂದು ಗುರುತಿಸಲಾಗಿದೆ.

ಗ್ರೇಟ್ ನಿಕೋಬಾರ್‌ನ ಸುಮಾರು 853 ಚದರ ಕಿ.ಮೀ. ಪ್ರದೇಶವನ್ನು ಅಂಡಮಾನ್ ಮತ್ತು ನಿಕೋಬಾರ್ ಪ್ರೊಟೆಕ್ಷನ್ ಆಫ್ ಅಬೊರಿಜಿನಲ್ ಟ್ರೈಬ್ಸ್ ರೆಗ್ಯುಲೇಶನ್, 1956ರ ಅಡಿಯಲ್ಲಿ ಬುಡಕಟ್ಟು ಮೀಸಲು ಎಂದು ಗೊತ್ತುಪಡಿಸಲಾಗಿದೆ. ಇದರರ್ಥ ಈ ಭೂಮಿ ಬುಡಕಟ್ಟು ಸಮುದಾಯದ ವಿಶೇಷ ಬಳಕೆಗೆ ಮೀಸಲಾಗಿದೆ ಮತ್ತು ಇತರರು ಈ ಪ್ರದೇಶವನ್ನು ಸರಕಾರದ ಅನುಮತಿಯಿಲ್ಲದೆ ಪ್ರವೇಶಿಸುವಂತಿಲ್ಲ.

ಆದರೆ ಕುತ್ತು ಬಂದಿರುವುದೇ ಈಗ ಸರಕಾರದಿಂದ. ಸರಕಾರದ ಚಿಂತಕರ ಚಾವಡಿ ನೀತಿ ಆಯೋಗದಿಂದ ಸಿದ್ಧವಾಗಿರುವ ಗ್ರೇಟ್ ನಿಕೋಬಾರ್ ಯೋಜನೆಯು 35,000 ಕೋಟಿ ರೂ.ಗಳ ಟ್ರಾನ್ಸ್ಶಿಪ್‌ಮೆಂಟ್ ಬಂದರು, ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ವಿದ್ಯುತ್ ಸ್ಥಾವರ, ಟೌನ್‌ಶಿಪ್ ಮತ್ತು 130 ಚದರ ಕಿಮೀ ಪ್ರಾಥಮಿಕ ಅರಣ್ಯ ಸೇರಿದಂತೆ 160 ಚದರ ಕಿ.ಮೀ.ಗೂ ಹೆಚ್ಚು ಭೂಮಿಯಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ. ಈ 130 ಚದರ ಕಿ.ಮೀ. ಪ್ರಾಥಮಿಕ ಅರಣ್ಯವು 84 ಚದರ ಕಿ.ಮೀ. ಅಥವಾ ಸುಮಾರು ಶೇ.10ರಷ್ಟು ಬುಡಕಟ್ಟು ಮೀಸಲು ಪ್ರದೇಶವನ್ನೂ ಒಳಗೊಂಡಿದೆ, ಇದನ್ನು ಪರಿಸರ ಸಚಿವಾಲಯವು ಅನುಮೋದಿಸಿದ್ದು, ಭೂಸ್ವಾಧೀನಕ್ಕೆ ನಿರ್ಧರಿಸಲಾಗಿದೆ.

ಮುಂದಿನ ಮೂರು ದಶಕಗಳಲ್ಲಿ ಪರಿಸರ ಸೂಕ್ಷ್ಮ ದ್ವೀಪದ ಜನಸಂಖ್ಯೆಯನ್ನು ಈಗ ಇರುವ 8 ಸಾವಿರದಿಂದ 3.5 ಲಕ್ಷದಷ್ಟು ಹೆಚ್ಚಿಸಲು ಯೋಜನೆಯು ಪ್ರಯತ್ನಿಸುತ್ತದೆ. ಅಂದರೆ ಈ ಹೆಚ್ಚಳವು ಶೇ. 4000ಕ್ಕಿಂತ ಅಧಿಕವಾಗಿದೆ. ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಂಪೂರ್ಣ ಜನಸಂಖ್ಯೆಗಿಂತ ಸ್ವಲ್ಪಕಡಿಮೆ. 2011ರ ಜನಗಣತಿಯ ಪ್ರಕಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಜನಸಂಖ್ಯೆ 3.8 ಲಕ್ಷ.

ಬೃಹತ್ ಯೋಜನೆ ಮತ್ತು ದ್ವೀಪದ ಜನಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾವವು ಆದಿವಾಸಿ ಸಂಸ್ಕೃತಿ ಮತ್ತು ಜೀವನದ ಯೋಜಿತ ವಿನಾಶ ಎಂಬುದು ತಜ್ಞರ ಎಚ್ಚರಿಕೆಯಾಗಿದೆ. ಇಂಥದೊಂದು ಅಭಿವೃದ್ಧಿ ಯೋಜನೆಯ ಪರಿಣಾಮವಾಗಿ ಆ ಸಮುದಾಯಗಳು ಮತ್ತು ಅವರ ಅಸ್ಮಿತೆ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯ ತಲೆದೋರಲಿದೆ. ಈ ಯೋಜನೆಯು ಪರಿಸರದ ಮೇಲಷ್ಟೇ ಅಲ್ಲದೆ, ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿಯೂ ದೊಡ್ಡಮಟ್ಟದ ಕರಾಳ ಪರಿಣಾಮವನ್ನು ಉಂಟುಮಾಡಲಿದೆ ಎಂಬುದು ಅವರ ಆತಂಕ.

ತಜ್ಞರು ಹೇಳುವ ಪ್ರಕಾರ, ಪರಿಸರ ಪ್ರಭಾವ ಮೌಲ್ಯಮಾಪನ ವರದಿಯು ಬುಡಕಟ್ಟು ಸಮುದಾಯಗಳ ಕುರಿತ ದೋಷಪೂರಿತ ತಿಳುವಳಿಕೆಯುಳ್ಳದ್ದಾಗಿದೆ ಮತ್ತು ಅಸಮರ್ಪಕತೆಯಿಂದ ಕೂಡಿದೆ. ಮೊದಲು ಸಲ್ಲಿಕೆಯಾಗಿದ್ದ ವರದಿಯಲ್ಲಿ, ಈ ಯೋಜನೆಯು ಹೇಗೆ ಶಾಂಪನ್ ಸಮುದಾಯಕ್ಕೆ ಅಗತ್ಯವಿರುವ ಅರಣ್ಯ ಸಂಪನ್ಮೂಲಗಳ ಅವನತಿ, ರೋಗಗಳಿಗೆ ಒಡ್ಡಿಕೊಳ್ಳುವ ಅಪಾಯ ಮತ್ತು ಹೊರಗಿನವರ ಬರುವಿಕೆಯಿಂದ, ಹೊರಗಿನವರ ಸಂಸ್ಕೃತಿಯಿಂದ ಬುಡಕಟ್ಟು ಸಮುದಾಯಗಳ ಸ್ಥಳ ಬಾಂಧವ್ಯ ಮತ್ತು ಸ್ಥಳದ ಗುರುತು ಎಲ್ಲವೂ ಬಾಧಿತವಾಗಲು ಕಾರಣವಾಗಬಹುದು ಎಂಬುದನ್ನು ಒತ್ತಿ ಹೇಳಿತ್ತು. ಆದರೆ ಅದಕ್ಕೆ ಪ್ರತಿಯಾಗಿ ಸಲ್ಲಿಸಲಾಗಿರುವ ಅಂತಿಮ ವರದಿಯು ಈ ಎಲ್ಲ ಸೂಕ್ಷ್ಮಗಳನ್ನೂ ನಿರ್ಲಕ್ಷಿಸಿದೆ.

ಉದಾಹರಣೆಗೆ, ಬುಡಕಟ್ಟು ಮೀಸಲು ಪ್ರದೇಶವನ್ನು 751 ಚದರ ಕಿ.ಮೀ. ಎಂದು ದಾಖಲಿಸಲಾಗಿದೆ, ಆದರೆ ದ್ವೀಪದ ಆಡಳಿತವು 2018ರಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಈ ಪ್ರದೇಶವು 853 ಚದರ ಕಿ.ಮೀ. ಆಗಿದೆ. ಅಲ್ಲದೆ ಬುಡಕಟ್ಟು ಸಮುದಾಯದ ಹೆಸರನ್ನು ತಪ್ಪಾಗಿ ಉಲ್ಲೇಖಿಸುವ ಮೂಲಕ, ಅದು ನ್ಯಾನ್‌ಕೌರಿ ದ್ವೀಪಗಳ ಗುಂಪನ್ನು ವಿವರಿಸುತ್ತದೆ. ಇದಕ್ಕೂ ಗ್ರೇಟ್ ನಿಕೋಬಾರ್ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ತಜ್ಞರ ಆಕ್ಷೇಪ. ಅಲ್ಲದೆ ಗ್ರೇಟ್ ನಿಕೋಬಾರ್‌ನಲ್ಲಿ ಆದಿವಾಸಿಗಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಪರಿಣತರು ವಾದಿಸುತ್ತಿದ್ದಾರೆ. 

ಈ ಯೋಜನೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನೂ ಉಲ್ಲಂಘಿಸುತ್ತದೆ ಎಂಬುದು ಅವರ ಅಭಿಪ್ರಾಯ. ಅರಣ್ಯ, ಭೂಮಿ ಮತ್ತು ನೀರಿನ ಮೇಲಿನ ಹಕ್ಕುಗಳಲ್ಲಿನ ಹಸ್ತಕ್ಷೇಪ ಮತ್ತು ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದನ್ನೂ ದೌರ್ಜನ್ಯವೆಂದೇ ಈ ಕಾಯ್ದೆಯು ಗುರುತಿಸುತ್ತದೆ. ಆದರೆ ಸ್ಥಳೀಯ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಸರಕಾರಿ ಸಂಸ್ಥೆಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿವೆ ಎಂಬ ಆರೋಪವಿದೆ. 

ಸರಕಾರಿ ಮನೋಧರ್ಮದ ಯಾರಿಗೂ ಈ ಅಳಿದುಹೋಗುವ ಹಾದಿಯಲ್ಲಿರುವ ಬುಡಕಟ್ಟಿನ ಬದುಕುಗಳ ಬಗ್ಗೆ ಕಾಳಜಿಯಿಲ್ಲ, ಕಳವಳವಿಲ್ಲ. ಅಲ್ಲಿ ಅವರಿಗೆಲ್ಲ ಕಾಣಿಸುವುದು ಬೃಹತ್ ಯೋಜನೆಯೊಂದೇ. ಅಭಿವೃದ್ಧಿಯೆಂಬ ದೈತ್ಯರೂಪಿಯಡಿಯಲ್ಲಿನ ಸಾಂಸ್ಕೃತಿಕ ಸಂಕಟಗಳು ಮೇಲೆ ಹೊಳೆಯುವ ಜಗತ್ತಿಗೆ ಗೋಚರಿಸದೇ ಹೋಗುತ್ತವೆ.

ಇವುಗಳ ನೆಲೆಗೂ ಬಂದಿದೆ ಅಪಾಯ!

ಗ್ರೇಟ್ ನಿಕೋಬಾರ್ ದ್ವೀಪವು ನಿಕೋಬಾರ್ ದ್ವೀಪಗಳ ಮಳೆಕಾಡುಗಳ ಪರಿಸರ ಪ್ರದೇಶದ ಭಾಗ. ಸಸ್ಯ ಸಮುದಾಯಗಳಲ್ಲಿ ಮ್ಯಾಂಗ್ರೋವ್‌ಗಳು ಮತ್ತು ಕಡಲತೀರದ ಸಮೀಪವಿರುವ ಕರಾವಳಿ ಕಾಡುಗಳು ಮತ್ತು ಒಳಭಾಗದಲ್ಲಿ ನಿತ್ಯಹರಿದ್ವರ್ಣ ಮತ್ತು ಪತನಶೀಲ ಕಾಡುಗಳು ಇದರಲ್ಲಿ ಸೇರಿವೆ.

ಈ ದ್ವೀಪದ ಬಹುಪಾಲು ಭಾಗ ಒಂದು ಅನನ್ಯ ಜೈವಿಕ ಮಂಡಲವೇ ಆಗಿದೆ. ನಿಕೋಬಾರ್ ಸ್ಕ್ರಬ್‌ಫೌಲ್ ಎಂಬ ವಿಶಿಷ್ಟ ಜಾತಿಯ ಪಕ್ಷಿ, ಈಶಾನ್ಯ ಏಶ್ಯದ ಪುಟ್ಟ ಹಕ್ಕಿಯ ಸಂತತಿಯಾದ ಎಡಿಬಲ್ ನೆಸ್ಟ್ ಸ್ವಿಫ್ಟ್ಲೆಟ್ ಸೇರಿದಂತೆ ಹಲವಾರು ಬಗೆಯ ಪಕ್ಷಿಗಳೂ ಮತ್ತು ವಿಶಿಷ್ಟ ಬಗೆಯ ಸ್ಥಳೀಯ ಜಾತಿಯ ಸಸ್ಯಗಳೂ ಈ ದ್ವೀಪದಲ್ಲಿವೆ. 

ಉದ್ದನೆಯ ಬಾಲದ ಮಕಾಕ್, ಉಪ್ಪುನೀರಿನ ಮೊಸಳೆ, ದೈತ್ಯ ಚರ್ಮದ ಬೆನ್ನಿನ ಸಮುದ್ರ ಆಮೆ, ಮಲಯನ್ ಬಾಕ್ಸ್ ಆಮೆ, ನಿಕೋಬಾರ್ ಟ್ರೀ ಶ್ರೂ, ಜಾಲರಿ ಹೆಬ್ಬಾವು ಮೊದಲಾದ ವಿಶೇಷ ಜಾತಿಯ ಜೀವಗಳು ಇಲ್ಲಿವೆ. ಇವೆಲ್ಲದರ ನೆಲೆಯೂ ಗ್ರೇಟ್ ನಿಕೋಬಾರ್ ಯೋಜನೆಯಿಂದ ಬಾಧಿತವಾಗದೆ ಇರದು.

Similar News