ಏಕತ್ವದ ಹೇರಿಕೆ ಬಹುಜನರಿಗೆ ಮಾರಕಪ್ರಾಯ

Update: 2022-12-07 06:34 GMT

ಭಾರತವು ಪ್ರಾಚೀನ ಕಾಲದಿಂದಲೂ ಬಹುತ್ವ ಕೇಂದ್ರಿತ ದೇಶವಾಗಿದೆ. ಭಾರತದ ಪ್ರಜಾಪ್ರಭುತ್ವ ಮತ್ತು ಬಹುತ್ವಗಳಿಗೆ ಮಧ್ಯ ಏಶ್ಯದಿಂದ ಅಲೆಮಾರಿಗಳಾಗಿ ಬಂದ ಆರ್ಯರು ಹುಟ್ಟು ಹಾಕಿದ ಜಾತಿಪದ್ಧತಿ ಮತ್ತು ಸಾಂಸ್ಕೃತಿಕ ಭಯೋತ್ಪಾದನೆ ಬಹಳಷ್ಟು ಅಪಾಯಗಳನ್ನು ಉಂಟುಮಾಡಿದೆ. ದೇಶದ ಮೂಲನಿವಾಸಿಗಳು ಇಂತಹ ಪ್ರವೃತ್ತಿಗಳಿಂದ ತಮ್ಮ ಮೂಲಭೂತ ಹಕ್ಕುಗಳನ್ನು ಕಳೆದುಕೊಂಡು ರಾಷ್ಟ್ರೀಯ ಮುಖ್ಯವಾಹಿನಿಯಿಂದ ದೂರ ಸರಿದಿದ್ದಾರೆ. ಸಾಂಸ್ಕೃತಿಕ ಭಯೋತ್ಪಾದನೆಯು ದೇಶದಲ್ಲಿ ಉಗ್ರ ರಾಷ್ಟ್ರೀಯತೆಗೆ ಎಡೆಮಾಡಿಕೊಟ್ಟು ಬಹುತ್ವ ಮತ್ತು ಬಹುಜನರ ಹಿತಾಸಕ್ತಿಗಳಿಗೆ ಮಾರಕವಾಗಿದೆ. ಬ್ರಾಹ್ಮಣ್ಯ ಕೇಂದ್ರಿತ ಏಕತ್ವ ಮಹಿಳೆಯರು ಮತ್ತು ದುರ್ಬಲ ವರ್ಗಗಳ ಬದುಕು ಅತಂತ್ರವಾಗಲು ಬಹುಮುಖ್ಯ ಕಾರಣವಾಗಿದೆ. ಬುದ್ಧ ಮಾನವತಾವಾದಕ್ಕೆ ಬದ್ಧವಾದ ಪ್ರಜಾಸತ್ತೆಯನ್ನು ಭಾರತದಲ್ಲಿ ಕಟ್ಟಿ ಬಹುಜನರಿಗೆ ರಾಜ್ಯಾಧಿಕಾರವನ್ನು ನೀಡಿದ. ಚಂದ್ರಗುಪ್ತ ಮೌರ್ಯನು ಐತಿಹಾಸಿಕ ಚಕ್ರಾಧಿಪತ್ಯವನ್ನು ಬುದ್ಧನ ಮಾರ್ಗದರ್ಶನದಲ್ಲಿ ಭಾರತದಲ್ಲಿ ಸ್ಥಾಪಿಸಿ ಎಲ್ಲ ಪ್ರಜೆಗಳ ಸಮಗ್ರ ಹಾಗೂ ಒಳಗೊಳ್ಳುವ ಅಭಿವೃದ್ಧಿಗೆ ನಾಂದಿ ಹಾಡಿದ. ಅವನ ಮೊಮ್ಮಗ ಅಶೋಕ ಭರತ ಖಂಡವನ್ನು ಜಗತ್ತಿನ ಪ್ರಬಲ ದೇಶವನ್ನಾಗಿ ರೂಪಿಸಿದನು. ಭಾರತದಲ್ಲಿ ಮಾನವ ಭ್ರಾತೃತ್ವ ಮತ್ತು ಬಹುತ್ವಗಳಿಗೆ ಮೌರ್ಯರು ನೀಡಿದ ಕೊಡುಗೆ ಅನನ್ಯವಾದುದು. ಆದರೆ ಹಿಂದೂ ಸಾಮ್ರಾಜ್ಯಶಾಹಿಯ ಪ್ರವರ್ತಕರು ಏಕತ್ವವನ್ನು ದೇಶದ ಜನರ ಮೇಲೆ ಹೇರಿ ಬಹುಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡರು. ಭಾರತದಲ್ಲಿ ಬ್ರಾಹ್ಮಣಶಾಹಿ ಬಹುಸಂಖ್ಯಾತ ಶೂದ್ರರನ್ನು ಶಿಕ್ಷಣದಿಂದ ವಂಚಿಸಿ ಅವರನ್ನು ರಾಷ್ಟ್ರೀಯ ಮುಖ್ಯವಾಹಿನಿಯಿಂದ ದೂರವಿರಿಸಿದೆ. ನಮ್ಮ ದೇಶದ ಆಳುವ ವರ್ಗದ ನೀತಿ ಮತ್ತು ಕಾರ್ಯಕ್ರಮಗಳನ್ನು ತನಗಿಷ್ಟ ಬಂದಂತೆ ಬ್ರಾಹ್ಮಣಶಾಹಿ ರೂಪಿಸಿದೆ. ಇದಕ್ಕೆ ಮುಖ್ಯ ಕಾರಣ ಜಾತಿ ಹಿತಾಸಕ್ತಿ ಮತ್ತು ವರ್ಗ ಹಿತಾಸಕ್ತಿಗಳ ನಡುವಣ ಅನೈತಿಕ ಮೈತ್ರಿ. ಶೂದ್ರರು ಶಿಕ್ಷಣದಿಂದ ವಂಚಿತರಾಗಿರುವುದರಿಂದ ಅವರಿಗೆ ಬ್ರಾಹ್ಮಣಶಾಹಿಯ ಕುತಂತ್ರಗಳನ್ನು ಅರ್ಥಮಾಡಿಕೊಂಡು ರಾಜ್ಯಾಧಿಕಾರವನ್ನು ಹೋರಾಟದ ಮೂಲಕ ಪಡೆಯುವ ಶಕ್ತಿ ಗಳಿಸಿಲ್ಲವೆಂದು ಮಹಾತ್ಮಾ ಫುಲೆ ನುಡಿದಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್, ಬುದ್ಧ ಮತ್ತು ಫುಲೆಯವರನ್ನು ತಮ್ಮ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮಾರ್ಗದರ್ಶಕರನ್ನಾಗಿ ಸ್ವೀಕರಿಸಿ ಭಾರತದ ಬಹುಸಂಸ್ಕೃತಿ ಮತ್ತು ಬಹುಜನರ ಉದ್ಧಾರಕ್ಕೆ ಜೀವನ ಪರ್ಯಂತ ಹೋರಾಟ ನಡೆಸಿ ಜಗತ್ತಿನಲ್ಲಿ ಮನ್ನಣೆ ಗಳಿಸಿದ್ದಾರೆ. ಬುದ್ಧರ ನಂತರದಲ್ಲಿ ಜರುಗಿದ ಹಿಂದೂ ಸಾಮ್ರಾಜ್ಯಶಾಹಿ ಕೇಂದ್ರಿತ ಬಹುಜನ ವಿರೋಧಿ ಬೆಳವಣಿಗೆಗಳನ್ನು ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿ ಕ್ರಾಂತಿಯೆಂದು ಭಾವಿಸಿದ್ದಾರೆ.

ಸರ್ವರನ್ನೂ ಅಪ್ಪಿಕೊಳ್ಳುವ, ರಕ್ಷಿಸುವ ಮತ್ತು ಉದ್ಧರಿಸುವ ಪ್ರಕೃತಿಧರ್ಮವೇ ಸಹಜಧರ್ಮ, ಮನುಸ್ಮತಿಯೆಂಬ ಗ್ರಂಥ ಅಸಮಾನತೆಯನ್ನು ಪ್ರಧಾನವಾಗಿ ಪೋಷಿಸಿ ಬ್ರಾಹ್ಮಣೇತರರನ್ನು ಧಾರ್ಮಿಕ ವ್ಯವಸ್ಥೆಯ ಗುಲಾಮರನ್ನಾಗಿಸುವ ಹುನ್ನಾರಗಳ ಸರಮಾಲೆಯೇ ಆಗಿದೆ. ಭಾರತದಲ್ಲಿ 1925ರಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಿನಲ್ಲಿ ವೈದಿಕ ದೇಶವನ್ನು ನಿರ್ಮಿಸಿ ಬಹುಜನ ಮೂಲನಿವಾಸಿಗಳನ್ನು ಗುಲಾಮಗಿರಿಗೆ ದಬ್ಬುವ ಗೌಪ್ಯ ಕಾರ್ಯಸೂಚಿ ಹೊಂದಿದೆ. ಯೂರೋಪಿನಲ್ಲಿ ನಡೆದ ಪ್ರಜಾಸತ್ತಾತ್ಮಕ ಕ್ರಾಂತಿ ಮತ್ತು ಸಾಮಾಜಿಕ ಪರಿವರ್ತನೆಗಳನ್ನು ವಿರೋಧಿಸುವ ಯೆಹೂದಿಗಳೇ ಭಾರತದ ಸಂಘ ಪರಿವಾರಿಗಳಿಗೆ ಮೂಲ ನೆಲೆ. ಬಾಲಗಂಗಾಧರ ತಿಲಕ್, ಮದನ ಮೋಹನ ಮಾಳವಿಯ, ಲಾಲಾ ಲಜಪತರಾಯ್, ಸಾವರ್ಕರ್, ಹೆಡ್ಗೆವಾರ್ ಮೊದಲಾದವರು ಸ್ವಾತಂತ್ರ್ಯ ಪೂರ್ವದಲ್ಲಿ ವೈದಿಕರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಸಂಘ ಪರಿವಾರವನ್ನು ಬೆಳೆಸಿ ಬಹುಜನರ ಪ್ರಕೃತಿದತ್ತ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಸಿದ್ದಾರೆ.


ಹಿಂದುತ್ವವನ್ನು ಪ್ರತಿಪಾದಿಸುವ ವೈದಿಕಶಾಹಿ ಬಹುಸಂಖ್ಯಾತ ಮೂಲನಿವಾಸಿಗಳನ್ನು ಜಾತಿಗಳ ಹೆಸರಿನಲ್ಲಿ ವಿಭಜಿಸಿ ಭಾರತಕ್ಕೆ ಬಹುತ್ವ ಕೇಂದ್ರಿತ ರಾಜ್ಯಧರ್ಮವನ್ನು ದುರುದ್ದೇಶಪೂರ್ವಕವಾಗಿ ನಿರಾಕರಿಸಿದೆ. ಸಂಕೋಲೆಗಳು ಮತ್ತು ಶೋಷಣಾ ಪ್ರವೃತ್ತಿಗಳನ್ನು ಒಪ್ಪಿಕೊಳ್ಳುವ ಅಸಹಾಯಕ ಪ್ರಜೆಗಳನ್ನು ರೂಪಿಸುವುದೇ ವೈದಿಕಶಾಹಿಯ ಪ್ರಾತಿನಿಧಿಕ ಸಂಸ್ಥೆಯಾದ ಆರೆಸ್ಸೆಸ್‌ನ ಪರಮಗುರಿಯಾಗಿದೆ. ವೈದಿಕಶಾಹಿ ಹಲವಾರು ಹುನ್ನಾರಗಳ ಮೂಲಕ ಬಹುತ್ವ ಕೇಂದ್ರಿತ ರಾಷ್ಟ್ರೀಯತೆಯನ್ನು ಧ್ವಂಸ ಮಾಡಿ ಏಕತ್ವ ಕೇಂದ್ರಿತ ಹಿಂದೂ ಧಾರ್ಮಿಕ ವ್ಯವಸ್ಥೆಯನ್ನು ಭಾರತದಲ್ಲಿ ಸಾಂಸ್ಥೀಕರಣಗೊಳಿಸಿತು. ಬ್ರಿಟಿಷರ ಆಳ್ವಿಕೆಯಲ್ಲಿ ವೈದಿಕರ ನೇತೃತ್ವದ ಹಿಂದೂ ಧಾರ್ಮಿಕ ವ್ಯವಸ್ಥೆ ಗಟ್ಟಿಯಾಗಿ ಬೆಳೆಯಿತು. ಬ್ರಿಟಿಷರಿಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿ ಆರ್ಥಿಕವಾಗಿ ಲಾಭ ಪಡೆಯುವುದು ಪ್ರಮುಖ ಆದ್ಯತೆಯಾಗಿತ್ತೇ ವಿನಹ ಸ್ಥಳೀಯ ಧಾರ್ಮಿಕ ವ್ಯವಸ್ಥೆ ಸುಧಾರಣೆಗೆ ಅವರು ಹೆಚ್ಚಿನ ಆದ್ಯತೆ ನೀಡಲಿಲ್ಲ. ಆಧುನಿಕ ಭಾರತದಲ್ಲಿ ದಲಿತ ಹಾಗೂ ಶೋಷಿತ ಸಮುದಾಯಗಳು ನಿರ್ವಹಿಸುತ್ತಿರುವ ದೈಹಿಕ ಶ್ರಮವೇ ಇಂದು ನಮ್ಮ ಸಮಾಜವನ್ನು ಸುಸ್ಥಿತಿಯಲ್ಲಿಟ್ಟಿವೆ ಎನ್ನುವುದು ಚಾರಿತ್ರಿಕ ಸತ್ಯ. ಮಹಾರಾಷ್ಟ್ರದ ಜ್ಯೋತಿಬಾ ಫುಲೆ, ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ, ಕೇರಳದ ನಾರಾಯಣಗುರು ಮೊದಲಾದವರು ಜಾತಿ ವ್ಯವಸ್ಥೆಯ ವಿರುದ್ಧ ಪ್ರಬಲ ಹೋರಾಟ ನಡೆಸಿ ಬಹುತ್ವ ಮತ್ತು ಬಹುಜನರ ರಕ್ಷಣೆಗೆ ಭೂಮಿಕೆಯನ್ನು ಸಿದ್ಧಪಡಿಸಿದ್ದಾರೆ. ವಾಸ್ತವ ಸನ್ನಿವೇಶದಲ್ಲಿ ಮನುಸ್ಮತಿ ಅಸ್ವೀಕಾರಾರ್ಹವಾಗಿದ್ದರೂ ಭಾರತದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರಕಾರವನ್ನು ನಿಯಂತ್ರಿಸುತ್ತಿರುವ ಹಿಂದುತ್ವವಾದಿಗಳು ಮನುಸ್ಮತಿಯನ್ನು ಪುನಃ ಹೇರಿ ಮೂಲನಿವಾಸಿಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ.

1950 ಮತ್ತು 60ರ ದಶಕಗಳಲ್ಲಿ ನೆಹರೂ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಸರಕಾರ ಆಧುನಿಕತೆಯೆಡೆಗೆ ದೇಶವನ್ನು ಮುನ್ನಡೆಸಿದರೆ, ಸಂಘ ಪರಿವಾರಿಗಳು ಸನಾತನವಾದಿ ಕರ್ಮಟ ತತ್ವಗಳ ಆಧಾರದ ಮೇಲೆ ಹಿಂದುತ್ವವನ್ನು ಉತ್ತೇಜಿಸಿದರು. ಅಂದು ಜನಸಂಘ ಹಿಂದುತ್ವವಾದಿಗಳಿಗೆ ಪ್ರಮುಖ ವೇದಿಕೆಯಾಗಿ ರೂಪುಗೊಂಡಿತ್ತು. ಸ್ವಾತಂತ್ರ್ಯಾನಂತರದಲ್ಲಿ ವೈದಿಕರು ಬೆಳೆಸಿದ ಏಕತ್ವ ಪ್ರಧಾನ ಹಿಂದೂ ಸಂಸ್ಕೃತಿ ಸಂವಿಧಾನಾತ್ಮಕ ಆಶಯಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಬಹಿಷ್ಕೃತ ಅಸ್ಪಶ್ಯರು ಮತ್ತು ದಮನಿತ ಶೂದ್ರ ಜನಾಂಗಗಳು ಬುದ್ಧಮಾರ್ಗವನ್ನು ಅನುಸರಿಸಿ ಜಾತಿವಿನಾಶ ಚಳವಳಿಯಿಂದಲೇ ಭಾರತದ ಬಹುತ್ವ ಮತ್ತು ಪ್ರಜಾಸತ್ತೆಗಳನ್ನು ಸುಸ್ಥಿರಗೊಳಿಸಬೇಕೆಂದು ಬಹುಜನರ ನಾಯಕ ಅಂಬೇಡ್ಕರ್ ಆಶಿಸಿದ್ದರು. ಭಾರತದ ಬಹುಸಂಖ್ಯಾತ ಮೂಲನಿವಾಸಿಗಳು ಕೃಷಿ ಸಂಸ್ಕೃತಿ, ಕಾಯಕ ಸಂಸ್ಕೃತಿ ಮತ್ತು ಬಹುತ್ವ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತಾರೆ. ಇವರೆಲ್ಲರೂ ಹಿಂದೂ ಸಾಮ್ರಾಜ್ಯಶಾಹಿಯ ಬಲಿಪಶುಗಳಾಗಿ ತಮ್ಮ ಮೂಲಭೂತ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಭಾರತೀಯ ಸಂವಿಧಾನ ಬಹುತ್ವ ರಕ್ಷಣೆ, ಸಾಮಾಜಿಕ ನ್ಯಾಯವಿತರಣೆ, ಜಾತ್ಯತೀತತೆ, ಒಳಗೊಳ್ಳುವ ಅಭಿವೃದ್ಧಿ ಮೊದಲಾದವುಗಳಿಗೆ ಪೂರಕವಾದ ಹಲವಾರು ವಿಧಿ-ವಿಧಾನಗಳನ್ನು ಒಳಗೊಂಡಿದೆ. ಪ್ರಸಕ್ತ ಸಂದರ್ಭದಲ್ಲಿ ಭಾರತೀಯ ಪ್ರಜಾಸತ್ತೆಯನ್ನು ಕಾರ್ಪೊರೇಟ್ ಶಕ್ತಿಗಳು ಮತ್ತು ವೈದಿಕಶಾಹಿ ತಮ್ಮ ವಶಕ್ಕೆ ತೆಗೆದುಕೊಂಡು ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ನಿಷ್ಕ್ರಿಯಗೊಳಿಸಿವೆ. ರಾಷ್ಟ್ರವಾದದ ಪ್ರತಿಪಾದನೆ ಮಾಡುವ ಹಿಂದುತ್ವ ಸಂಘಟನೆಗಳು ಸಾಂಸ್ಕೃತಿಕ ಭಯೋತ್ಪಾದನೆಯಲ್ಲಿ ತೊಡಗಿ ಬಹುತ್ವಕ್ಕೆ ಹಲವಾರು ಅಡೆತಡೆಗಳನ್ನು ಸೃಷ್ಟಿಮಾಡಿವೆ. ಇವತ್ತಿನ ಭಾರತದ ಹಿಂದುತ್ವ ರಾಜಕಾರಣ ದೇಶವನ್ನು ಅರಾಜಕತೆಯೆಡೆಗೆ ತಳ್ಳುತ್ತಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದುತ್ವವಾದಿಗಳ ಪ್ರಾಬಲ್ಯ ಕಾಲಕ್ರಮೇಣ ಹೆಚ್ಚಿ ದೇಶದ ರಾಜಕಾರಣವನ್ನು ಧಾರ್ಮಿಕ ನಾಯಕರು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿದೆ. ಬಹುಜನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತಂತ್ರಗೊಳಿಸುವ ಹಿಂದುತ್ವ ಭಾರತಕ್ಕೆ ಅಪಾಯಕಾರಿ. ಧಾರ್ಮಿಕ ನಾಯಕರು ಮೇಲ್ವರ್ಗದ ಯುವಕ-ಯುವತಿಯರಿಗೆ ಪ್ರಜಾಪ್ರಭುತ್ವದ ಸಿದ್ಧಾಂತದಂತೆ ಮನುಷ್ಯದೀಕ್ಷೆ ಕೊಡುವುದು ಅವಶ್ಯವಿದೆ. ಭಾರತ ಮಾತೆ ಎಂದರೆ ಕಲ್ಲು-ಮಣ್ಣುಗಳ ತಾಣವಲ್ಲ. ಭಾರತ ಮಾತೆ ಎಂದರೆ ಈ ದೇಶದ ಬಹುತ್ವ ಮತ್ತು ಸಂವಿಧಾನ. ಇಂತಹ ತಾಯಿಯನ್ನು ಬದಲಾಯಿಸಲು ಹೊರಟಿರುವ ಏಕತ್ವವಾದಿಗಳ ವಿರುದ್ಧ ಪ್ರಬಲ ಪ್ರಜಾಸತ್ತಾತ್ಮಕ ಹೋರಾಟವನ್ನು ರೂಪಿಸುವುದು ಇಂದು ಅನಿವಾರ್ಯವಾಗಿದೆ

Similar News