ನಿತೀಶ್ ಅವರನ್ನು ಹೊಗಳಿದ ಬಿಹಾರ ಬಿಜೆಪಿ ಉಪಾಧ್ಯಕ್ಷ ಪಕ್ಷದಿಂದ ಉಚ್ಚಾಟನೆ

Update: 2022-12-31 02:45 GMT

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹೊಗಳಿದ ಕಾರಣಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ರಜೀಬ್ ರಾಜನ್ ಅವರನ್ನು "ಶಿಸ್ತು ಉಲ್ಲಂಘಿಸಿದ ಮತ್ತು ವೈರುದ್ಧ್ಯ ಹೇಳಿಕೆ ನೀಡಿದ ಆರೋಪದಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿದೆ. ಬಿಹಾರದಲ್ಲಿ ಪಾನ ನಿಷೇಧದ ಸಂಬಂಧ ನಡೆಯುತ್ತಿರುವ ಜಟಾಪಟಿಯಲ್ಲಿ ಬಿಜೆಪಿ ಉಪಾಧ್ಯಕ್ಷರು ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ತಮ್ಮನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂಬ ಹೇಳಿಕೆಯನ್ನು ರಾಜನ್ ನಿರಾಕರಿಸಿದ್ದು, ಪಕ್ಷ ಉಚ್ಚಾಟನೆ ಆದೇಶ ನೀಡುವ ಮುನ್ನ ತಾವೇ ಪಕ್ಷ ತೊರೆದಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಏಳು ವರ್ಷಗಳಿಂದ ಬಿಜೆಪಿಯಲ್ಲಿರುವ ರಾಜನ್ ಇದೀಗ ಮಾತೃಪಕ್ಷವಾದ ಸಂಯುಕ್ತ ಜನತಾದಳಕ್ಕೆ ವಾಪಸ್ಸಾಗಲಿದ್ದಾರೆ.

ರಾಜನ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಹೇಳಿದ್ದಾರೆ. ನಿಮ್ಮ ಮಾತು ರಾಜ್ಯ ಉಪಾಧ್ಯಕ್ಷರು ಹೇಳುವ ಮಾತಲ್ಲ. ಇದರಿಂದ ಪಕ್ಷದ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಜೈಸ್ವಾಲ್ ಅವರ ಆದೇಶದಲ್ಲಿ ವಿವರಿಸಲಾಗಿದೆ.

ಆದರೆ ತಾವು ಅಮಾನತು ಆದೇಶ ಹೊರಡಿಸುವ ಮುನ್ನವೇ ಪಕ್ಷ ತೊರೆದಿರುವುದಾಗಿ ರಾಜನ್ ಸ್ಪಷ್ಟಪಡಿಸಿದ್ದಾರೆ. ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ ಎರಡು ಗಂಟೆ ಬಳಿಕ ಅಮಾನತು ಆದೇಶ ಹೊರಡಿಸಲಾಗಿದೆ.

Similar News