ಉಡುಪಿ | ಜನನ ಮರಣ ತಂತ್ರಾಂಶದಲ್ಲಿ ನಿಖರ ಮಾಹಿತಿ ದಾಖಲಿಸಿ: ಎಡಿಸಿ
ಉಡುಪಿ: ಜನನ- ಮರಣ ದಾಖಲೆಗಳನ್ನು ತಂತ್ರಾಂಶದಲ್ಲಿ ದಾಖಲಿಸುವ ಸಂದರ್ಭದಲ್ಲಿ ಮಾಹಿತಿಗಳನ್ನು ಪೂರ್ಣವಾಗಿ ಪರಿಶೀಲಿಸಿ, ನಿಖರವಾದ ಮಾಹಿತಿ ಅಳವಡಿಸುವುದರೊಂದಿಗೆ ತಿದ್ದುಪಡಿಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಸೂಚಿಸಿದ್ದಾರೆ.
ಶುಕ್ರವಾರ ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮರಣ ನೋಂದಣಿ ಕುರಿತ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇ-ಜನ್ಮ ತಂತ್ರಾಂಶದಲ್ಲಿ ಜನನ ಮತ್ತು ಮರಣ ಘಟನೆಗಳ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಘಟನೆಗಳನ್ನು ದಾಖಲಿಸಿ, ನೋಂದಣಾ ಧಿಕಾರಿಗಳು ಡಿಜಿಟಲ್ ಕೀ ಮೂಲಕ ನೋಂದಣಿಯನ್ನು ಅಂಗೀಕರಿಸ ಲಾಗುತ್ತಿದ್ದು ಈ ಕುರಿತ ಪ್ರಗತಿಯನ್ನು ಅಪರ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
2015ರಿಂದ ಇ-ಜನ್ಮ ತಂತ್ರಾಂಶದಲ್ಲಿ ಜನನ ಮರಣ ಘಟನೆ ದಾಖಲಾ ಗುತ್ತಿದ್ದು, ಅದಕ್ಕಿಂತ ಹಿಂದಿನ ದಾಖಲೆಗಳನ್ನು ಸಹ ತಂತ್ರಾಂಶದಲ್ಲಿ ಕೇಂದ್ರೀಕರಿಸಲು ಪ್ರಸ್ತುತ ಕ್ರಮ ವಹಿಸಲಾಗುತ್ತಿದೆ. ಈ ಡಿಜಿಟಲೀಕರಣ ಕಾರ್ಯವನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಾಧಾಕೃಷ್ಣ ಅಡಿಗ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.