ವಿವಿಧ ಯೋಜನೆಗಳಿಗೆ ಕೇಂದ್ರದಿಂದ 8,199 ಕೋಟಿ ರೂ. ಅನುದಾನ ಬಾಕಿ

Update: 2023-01-02 04:21 GMT

ಬೆಂಗಳೂರು: ಪ್ರಸಕ್ತ ಸಾಲಿನ ಆರ್ಥಿಕ ವರ್ಷ (2022-23) ಪೂರ್ಣಗೊಳ್ಳಲು ಇನ್ನು ಕೇವಲ ಮೂರೇ ಮೂರು ತಿಂಗಳಿದ್ದರೂ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಒಟ್ಟು ಅನುದಾನದ ಪೈಕಿ ನವೆಂಬರ್ ಅಂತ್ಯದವರೆಗೆ 8,199 ಕೋಟಿ ರೂ. ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ. ಅದೇ ರೀತಿ 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಒಟ್ಟು ಕಾರ್ಯಕ್ರಮಗಳ ಪೈಕಿ ಇನ್ನೂ 122 ಕಾರ್ಯಕ್ರಮಗಳಿಗೆ ಚಾಲನೆಯೇ ದೊರೆತಿಲ್ಲ.

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವುದಕ್ಕೆ ಸಂಬಂಧಿಸಿದಂತೆ 2022ರ ಡಿಸೆಂಬರ್ 16ರಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ಒದಗಿಸಿದ್ದಾರೆ. ಸಭೆಯ ನಡವಳಿಗಳ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.

2022-23ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಒಟ್ಟು ಅನುದಾನ 48,368 ಕೋಟಿ ರೂ. (ಪ್ರಾಥಮಿಕ ಶಿಲ್ಕು 8,487 ಕೋಟಿ ರೂ. ಒಳಗೊಂಡಂತೆ) ಪೈಕಿ 20,107 ಕೋಟಿ ರೂ.ನಲ್ಲಿ ನವೆಂಬರ್ 2022ರ ಅಂತ್ಯಕ್ಕೆ 11,908 ಕೋಟಿ ರೂ. ಬಿಡುಗಡೆಯಾಗಿದೆ.  ಇನ್ನೂ 8,199 ಕೋಟಿ ರೂ.ಗಳನ್ನು ಕೇಂದ್ರ ಸರಕಾರವು ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ನಡಾವಳಿಯಿಂದ ತಿಳಿದು ಬಂದಿದೆ.

 ಇದೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ ಒಟ್ಟು 3,000.70 ಕೋಟಿ ರೂ. ಅನುದಾನದಲ್ಲಿ ಶಿಕ್ಷಣ ಇಲಾಖೆ 443.00 ಕೋಟಿ ರೂ., ಆರೋಗ್ಯ ಇಲಾಖೆ 325.48 ಕೋಟಿ ರೂ. ಮುಂದುವರಿದ ಕಾರ್ಯಕ್ರಮಗಳಿಗೆ ಜಲಸಂಪನ್ಮೂಲ ಇಲಾಖೆ 1,200 ಕೋಟಿ, ಕೆಎಸ್‌ಆರ್‌ಟಿಸಿಗೆ 30.00 ಕೋಟಿ ರೂ., ಸಣ್ಣ ನೀರಾವರಿಗೆ 56 ಕೋಟಿ ರೂ. ಮೊತ್ತದ ಯೋಜನೆಗೆ ಕ್ರಿಯಾ ಯೋಜನೆಯನ್ನೂ ಯೋಜನಾ ಇಲಾಖೆಗೆ ಸಲ್ಲಿಸಿಲ್ಲ.

ರಾಜ್ಯ ವಲಯದ ಆಯವ್ಯಯ ಅಂದಾಜು 1,77,525 ಕೋಟಿ ರೂ. ನಲ್ಲಿ 93,717 ಕೋಟಿ ರೂ. ವೆಚ್ಚವಾಗಿದೆ. (ಶೇ.53), ಜಿಲ್ಲಾ ವಲಯದ ಆಯವ್ಯಯ ಅಂದಾಜು 42,786 ಕೋ.ರೂ.ಗಳಲ್ಲಿ 22,503 ಕೋಟಿ ರೂ. (ಶೇ.53) ಸೇರಿ  ಒಟ್ಟಾರೆ 1,20,224 ಕೋಟಿ ರೂ. ವೆಚ್ಚವಾಗಿದೆ.  ಅಂದರೆ 1,09,153 ಕೋಟಿ ರೂ.ಯಷ್ಟು ಅನುದಾನ ಸಿಂಗಲ್ ಡಿಡಿಒಗೆ ಹಂಚಿಕೆಯಾಗಿದ್ದು ಇದನ್ನು ಅನುಷ್ಠಾನ ಗೊಳಿಸ ಲಾಗುತ್ತಿರುವ ಜಿಲ್ಲೆಗಳಲ್ಲಿ ಹಂಚಿಕೆ ಮಾಡಿ ತತ್ಸಂಬಂಧ ಬಿಡುಗಡೆ ಹಾಗೂ ವೆಚ್ಚದ ಮಾಹಿತಿಯನ್ನು ಖಜಾನೆ-2ರಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವುದು ಗೊತ್ತಾಗಿದೆ.

 ಜಿಲ್ಲಾವಾರು ಶ್ರೇಯಾಂಕ ಮಾಹಿತಿ ಅನ್ವಯ ಕೊಡಗು, ಬಳ್ಳಾರಿ, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಗತಿ ನಿರೀಕ್ಷೆಯಂತೆ ಆಗಿಲ್ಲ. ಅಲ್ಲದೇ 2022-23ನೇ ಸಾಲಿನ ಆಯವ್ಯಯ ಘೋಷಣೆಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು/ಚಾಲನೆ ನೀಡುವ ಪೈಕಿ 122 ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ.

 ಆಹಾರ ಇಲಾಖೆಯಲ್ಲಿ 2,985.00 ಕೋಟಿ ರೂ. ಯಲ್ಲಿ ಒಟ್ಟು ಅನುದಾನದಲ್ಲಿ ಬಿಡುಗಡೆಯಾಗಿರುವ 1,419.84 ಕೋಟಿ ರೂ. ಪೈಕಿ  917 ಕೋಟಿ ರೂ. ವೆಚ್ಚವಾಗಿದೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಕೈಗಾರಿಕಾ ಘಟಕಗಳಿಗೆ ಮೌಲ್ಯಾಧಾರಿತ ತೆರಿಗೆ ಪಾವತಿಗಾಗಿ ಸಾಲದ ಕಾರ್ಯಕ್ರಮದಲ್ಲಿ 1,000 ಕೋಟಿ ರೂ.ಗಳಲ್ಲಿ 474.00 ಕೋಟಿ ರೂ. ಪ್ರಸ್ತಾವನೆ ಬಾಕಿ ಇದೆ. ಈ ಯೋಜನೆಗಳನ್ನು 2022ರ ಸೆಪ್ಟಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲೆಂದು ನಿಗದಿಗೊಳಿಸಲಾಗಿತ್ತು. ಆದರೆ ಯೋಜನೆಯು ಪೂರ್ಣಗೊಳ್ಳದ ಕಾರಣ ಈ ಯೋಜನೆಗಳನ್ನು ಪೂರ್ಣಗೊಳಿಸಲು 2 ವರ್ಷಗಳ ಕಾಲಾವಕಾಶ ಕೋರಲು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಕೋರಿರುವುದು ತಿಳಿದು ಬಂದಿದೆ.

ಶಿಕ್ಷಣ, ಕಂದಾಯ, ಗ್ರಾಮೀಣಾ ಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಆರೋಗ್ಯ ಇಲಾಖೆಗಳಲ್ಲಿ ವೇತನದ ಅನುದಾನವನ್ನು ವಿಳಂಬವಾಗಿ ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಈ ಇಲಾಖೆಗಳ ಅಧಿಕಾರಿ, ನೌಕರರು ಸರಿಯಾದ ಸಮಯದೊಳಗೆ ವೇತನ ಪಡೆಯುತ್ತಿಲ್ಲ ಎಂದು ನಡಾವಳಿಯಿಂದ ಗೊತ್ತಾಗಿದೆ.

Similar News