ರಸ್ತೆ ಗುಂಡಿ ತಪ್ಪಿಸುವ ಪ್ರಯತ್ನದಲ್ಲಿ ಅಪಘಾತಕ್ಕೀಡಾದ ರಿಷಭ್ ಪಂತ್: ಉತ್ತರಾಖಂಡ ಸಿಎಂ

Update: 2023-01-02 07:35 GMT

ಡೆಹ್ರಾಡೂನ್: ರಿಷಭ್ ಪಂತ್ (Rishabh Pant) ದಿಲ್ಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿನ ರಸ್ತೆಗುಂಡಿಯನ್ನು ತಪ್ಪಿಸಲು ಹೋಗಿ ಕಾರನ್ನು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದಾರೆ ಎಂದು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟರ್ ರಿಷಭ್ ಪಂತ್‌ರನ್ನು ರವಿವಾರ ಭೇಟಿ ಮಾಡಿದ ನಂತರ ಉತ್ತರಾಖಂಡ ಮುಖ್ಯಮಂತ್ರಿ (Uttarakhand Chief Minister) ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಯಲ್ಲಿನ ಗುಂಡಿ ಅಥವಾ ಕಪ್ಪು ಬಣ್ಣದ ಆಕೃತಿಯೊಂದನ್ನು ತಪ್ಪಿಸುವ ಪ್ರಯತ್ನದಲ್ಲಿ ರಿಷಭ್ ಪಂತ್ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ರಿಷಭ್ ಪಂತ್‌ರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ ನಂತರ, ರಿಷಭ್ ಪಂತ್ ಶುಕ್ರವಾರ ಮುಂಜಾನೆ ರಸ್ತೆ ಗುಂಡಿಯನ್ನು ತಪ್ಪಿಸುವ ಪ್ರಯತ್ನದಲ್ಲಿ ಅಪಘಾತಕ್ಕೀಡಾಗಿದ್ದಾರೆ ಎಂದು ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಒಕ್ಕೂಟದ ನಿರ್ದೇಶಕ ಶ್ಯಾಮ್ ಶರ್ಮ ಕೂಡಾ ಹೇಳಿದ್ದರು.

ಶುಕ್ರವಾರ ಮುಂಜಾನೆ 5.30ರ ವೇಳೆ ಹರಿದ್ವಾರ ಜಿಲ್ಲೆಯ ರೂರ್ಕಿ ಬಳಿ ರಿಷಭ್ ಪಂತ್ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಅಪಘಾತಕ್ಕೀಡಾಗಿ ಹೊತ್ತಿ ಉರಿದಿತ್ತು. ಈ ಭೀಕರ ಅಪಘಾತದಲ್ಲಿ ರಿಷಭ್ ಪಂತ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.

ಸದ್ಯ ರಿಷಭ್ ಪಂತ್‌ರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮದ್ಯ ಮೇಲಿನ ತೆರಿಗೆ ಅಂತ್ಯಗೊಳಿಸಿದ ದುಬೈ

Similar News