×
Ad

ಉಡುಪಿ ಪ್ರೇಕ್ಷಕರಿಗೆ ಶ್ರೇಷ್ಠ ವಾಲಿಬಾಲ್ ಪ್ರದರ್ಶನದ ರಸದೌತಣ: ಗೆದ್ದ ಮಂಗಳೂರು ವಿವಿ ಕ್ವಾ. ಫೈನಲ್ ಗೆ

ಅಖಿಲ ಭಾರತ ಅಂತರ ವಿವಿ ಪುರುಷರ ವಾಲಿಬಾಲ್

Update: 2023-01-06 22:17 IST

ಉಡುಪಿ: ನಗರದ ಪೂರ್ಣಪ್ರಜ್ಞ ಕಾಲೇಜು ಅಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಡೆದಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಉಡುಪಿಯ ಕ್ರೀಡಾಪ್ರೇಮಿಗಳಿಗೆ ಉನ್ನತ ದರ್ಜೆಯ ವಾಲಿಬಾಲ್ ಪ್ರದರ್ಶನದ ರಸದೌತಣ ದೊರೆಯುತಿದ್ದು, ಇಂದು ಆತಿಥೇಯ ಮಂಗಳೂರು ವಿವಿ ತಂಡ, ಜಿದ್ದಾಜಿದ್ದಿನ ಸೆಣಸಾಟದಲ್ಲಿ ಮೇಲುಗೈ ಸಾಧಿಸುವ ಮೂಲಕ ಅಗ್ರಸ್ಥಾನದೊಂದಿಗೆ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಶುಕ್ರವಾರ ಸಂಜೆ ‘ಸಿ’ ಗುಂಪಿನ ತನ್ನ ಅಂತಿಮ ಲೀಗ್ ಪಂದ್ಯವನ್ನು ಚಂಡೀಗಢದ ಪಂಜಾಬ್ ವಿವಿ ವಿರುದ್ಧ ಆಡಿದ ಮಂಗಳೂರು ವಿವಿ ತಂಡ,  ಸುಮಾರು ಮೂರು ಗಂಟೆಗೂ ಅಧಿಕ ಸಮಯ ನಡೆದ ಹೋರಾಟದಲ್ಲಿ ಎದುರಾಳಿಯನ್ನು 25-27, 24-26, 25-20, 25-21, 15-12ರ ಅಂತರದಿಂದ ಅತ್ಯಂತ ರೋಮಾಂಚಕಾರಿಯಾಗಿ ಸೋಲಿಸಿ ಗುಂಪಿನಲ್ಲಿ ಅಜೇಯವಾಗುಳಿಯಿತು.

ನಾಲ್ಕು ತಂಡಗಳ ಗುಂಪಿನಲ್ಲಿ ಭುವನೇಶ್ವರದ ಕೆಐಐಟಿ ಡೀಮ್ಡ್ ವಿವಿ ತಂಡ  ಬಂದಿರಲಿಲ್ಲ. ಇದರಿಂದ ನಿನ್ನೆ ಪುಣೆಯ ಪಶ್ಚಿಮ ವಲಯ ಚಾಂಪಿಯನ್ ಭಾರತಿ ವಿದ್ಯಾಪೀಠ ವಿವಿಯನ್ನು 3-1ರಿಂದ ಮಣಿಸಿದ್ದ, ದಕ್ಷಿಣ ವಲಯದ ಮೂರನೇ ಸ್ಥಾನಿ ಮಂಗಳೂರು ವಿವಿ ಇಂದು ಪಂಜಾಬ್ ತಂಡವನ್ನು 3-2ರಿಂದ ಸೋಲಿಸಿ ಅಜೇಯವಾಗುಳಿದು ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್ ಫೈನಲ್‌ಗೇರಿತು.

ಪಂಜಾಬ್ ವಿವಿಗೆ ಇದು ಎರಡನೇ ಸೋಲಾಗಿದೆ. ಈ ಮೂಲಕ ಅದು ಮುಂದಿನ ಹಂತಕ್ಕೆ ತೇರ್ಗಡೆಗೊಳ್ಳಲು ವಿಫಲವಾಗಿದ್ದು, ಗುಂಪಿನಿಂದ ಪುಣೆಯ ಭಾರತಿ ವಿವಿ ಎರಡನೇ ತಂಡವಾಗಿ ಕ್ವಾರ್ಟರ್ ಫೈನಲ್‌ಗೇರಿದೆ. ಮಂಗಳೂರು ವಿವಿ ನಾಳೆ ಸಂಜೆ 5ಗಂಟೆಗೆ ತನ್ನ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಮದ್ರಾಸ್ ವಿವಿ ವಿರುದ್ಧ ಆಡಲಿದೆ. ಭಾರತಿ ವಿವಿ, ಕುರುಕ್ಷೇತ್ರ ವಿವಿಯನ್ನು ಎದುರಿಸಲಿದೆ.

ಪಂಜಾಬ್ ವಿವಿ ಅತ್ಯುತ್ತಮವಾಗಿ ಆಟ ಪ್ರಾರಂಭಿಸಿ ನಿಕಟ ಹೋರಾಟದಲ್ಲಿ ಮೊದಲೆರಡು ಸೆಟ್‌ಗಳನ್ನು 27-25, 26-24ರಿಂದ ಗೆದ್ದುಕೊಂಡಾಗ ಅದರ ಜಯ ಖಾತ್ರಿ ಎನಿಸಿತ್ತು. ಆದರೆ ತನ್ನೂರಿನ ಪ್ರೇಕ್ಷಕರ ಪೂರ್ಣಕಂಠದ ಬೆಂಬಲ ಪಡೆದ ಮಂಗಳೂರು ವಿವಿ, ಮುಂದಿನೆರಡು ಸೆಟ್‌ಗಳಲ್ಲಿ ಅದ್ಙುತ ಚೇತರಿಕೆ ತೋರಿ 25-20, 25-21ರಿಂದ ಗೆದ್ದು ಸಮಬಲ ನಿರ್ಮಿಸಿತು.

ನಿರ್ಣಾಯಕ ಅಂತಿಮ ಸೆಟ್‌ನಲ್ಲಂತೂ ವಿಜಯಲಕ್ಷ್ಮೀ ಚಂಚಲಚಿತ್ತೆ ಯಂತೆ ಅತ್ತಿಂದಿತ್ತ ಚಲಿಸಿ ನೋಡುಗರನ್ನು ಆಸನದ ತುದಿಯಲ್ಲಿ ಕೂರಿಸಿತು. ಪ್ರತಿ ಅಂಕಕ್ಕೂ ಎರಡೂ ತಂಡಗಳು ಮೇಲಾಟ ನಡೆಸಿದವು. 9-10ರ ಹಿನ್ನಡೆಯಲ್ಲಿದ್ದ ಮಂಗಳೂರು ವಿವಿ ಮುಂದಿನ ಆರು ಅಂಕಗಳನ್ನು ಅದ್ಭುತ ರೀತಿಯಲ್ಲಿ ಪಡೆದು ವಿದ್ಯಾರ್ಥಿಗಳ ಹರ್ಷೋದ್ಗಾರಗಳ ಮಧ್ಯೆ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಎ ಗುಂಪಿನಲ್ಲಿ ಹಾಲಿ ರನ್ನರ್‌ಅಪ್ ಕುರುಕ್ಷೇತ್ರ ವಿವಿ ಇಂದು ಚೆನ್ನೈನ ಮದರಾಸು ವಿವಿಯನ್ನು 3-1 (31-29, 25-20, 16-25, 25-12)ರ ಅಂತರದಿಂದ ಸೋಲಿಸಿ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ಗೇರಿತು. ಈ ಪಂದ್ಯವನ್ನು ಸೋತರೂ ಮದರಾಸು ವಿವಿ ಗುಂಪಿನ ಎರಡನೇ ಸ್ಥಾನದೊಂದಿಗೆ ಕ್ವಾರ್ಟರ್‌ಫೈನಲ್‌ನಲ್ಲಿ ಆಡುವ ಅರ್ಹತೆ ಪಡೆಯಿತು.

ಉಳಿದಂತೆ ದಿನದ ಪಂದ್ಯಗಳಲ್ಲಿ ಜೈಪುರದ ರಾಜಾಸ್ತಾನ ವಿವಿ, ಕೊಲ್ಕತ್ತಾದ  ಅದಮಾಸ್ ವಿವಿಯನ್ನು 22-25, 25-21,25-19, 25-22ರ ಅಂತರ ದಿಂದ ಸೋಲಿಸಿದರೆ, ಅಮೃತಸರದ ಗುರುನಾನಕ್ ದೇವ್ ವಿವಿ, ಹನುಮಾನಗಢದ ಶ್ರೀಕುಶಾಲದಾಸ್ ವಿವಿಯನ್ನು 25-20, 30-28, 25-22ರ ಅಂತರದಿಂದ ಪರಾಭವಗೊಳಿಸಿತು.

ದಿನದ ನಾಲ್ಕನೇ ಪಂದ್ಯದಲ್ಲಿ ದಕ್ಷಿಣ ವಲಯ ಚಾಂಪಿಯನ್ ತಂಡ ಚೆನ್ನೈನ ಎಸ್‌ಆರ್‌ಎಂ ವಿವಿ ತಂಡ ಬಿ ಗುಂಪಿನಲ್ಲಿ ವಾರಾಣಸಿಯ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ ತಂಡವನ್ನು 3-0 ಅಂತರದಿಂದ ಸೋಲಿಸಿ ಅಗ್ರಸ್ಥಾನ ಪಡೆದು ಕ್ವಾರ್ಟರ್‌ಫೈನಲ್‌ಗೇರಿತು. ಸೋತ ವಾರಾಣಸಿ ತಂಡ ಸಹ ಎರಡನೇ ಸ್ಥಾನ ಪಡೆದು ಗುಂಪಿನಿಂದ ತೇರ್ಗಡೆಗೊಂಡಿತು.

ಮತ್ತೊಂದು ಪಂದ್ಯದಲ್ಲಿ ಔರಂಗಬಾದ್‌ನ ಡಾ.ಬಿಎಎಂ ವಿವಿ, ಹಿಮಾಚಲ ಪ್ರದೇಶ ವಿವಿಯನ್ನು 25-22, 25-19 ಹಾಗೂ 25-19ರಿಂದ ಸೋಲಿಸಿತು.
ಹಾಲಿ ಚಾಂಪಿಯನ್ ಕಲ್ಲಿಕೋಟೆ ವಿವಿ ಸಹ ಕ್ವಾರ್ಟರ್‌ಫೈನಲ್‌ಗೇರಿದ್ದು, ವಾರಾಣಸಿ ತಂಡವನ್ನು ಎದುರಿಸಲಿದೆ. ಚೆನ್ನೈ ಎಸ್‌ಆರ್‌ಎಂ ತಂಡ, ಔರಂಗಬಾದ್ ವಿವಿಯನ್ನು ಎದುರಿ ಆಡಲಿದೆ.

Similar News