ಕುಂದಾಪುರ: ಕೊಡ್ಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುಕುಲದಿಂದ ನೂತನ ಶಾಲಾ ಕಟ್ಟಡ ಕೊಡುಗೆ
ಕುಂದಾಪುರ: ಜ್ಞಾನ ದೇಗುಲವಾದ ಕನ್ನಡ ಮಾಧ್ಯಮ ಸಂಸ್ಥೆಗಳು ಕಳೆಗುಂದುತ್ತಿರುವುದು ಬೇಸರದ ವಿಚಾರ. ಕನ್ನಡ ಶಾಲೆಗಳ ಉಳಿವು ಇಂದಿನ ಆಗತ್ಯ ವಿಚಾರಗಳಲ್ಲೊಂದಾಗಿದೆ. ಸರಕಾರಗಳು ಇರುವ ಶಾಲೆಗಳನ್ನು ಉಳಿಸಿಕೊಂಡು ಅದನ್ನು ಉನ್ನತೀಕರಣಗೊಳಿಸಬೇಕಾದ ಅನಿವಾರ್ಯತೆ ಯಿದೆ. ಆದರೆ ತರಗತಿಗೊಬ್ಬರು ಶಿಕ್ಷಕರನ್ನು ನೀಡುವ ಯೋಗ್ಯತೆಯಿಲ್ಲದ ಸರಕಾರದಿಂದ ಪ್ರಗತಿ ಹೇಗೆ ಸಾಧ್ಯ ಎಂದು ಮೂಡಬಿದಿರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರವರ್ತಕ ಡಾ.ಎಂ. ಮೋಹನ್ ಆಳ್ವ ಪ್ರಶ್ನಿಸಿದ್ದಾರೆ.
ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿ ಇವರಿಂದ ದತ್ತು ಸ್ವೀಕೃತವಾದ ಕುಂದಾಪುರ ತಾಲೂಕಿನ ಕೊಡ್ಲಾಡಿ ಬಾಂಡ್ಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುಕುಲ ಸಂಸ್ಥೆಯಿಂದ ಕೊಡುಗೆಯಾಗಿ ನೀಡಿದ ನೂತನ ಶಾಲಾ ಕಟ್ಟಡ ‘ಕದಂಬ’ವನ್ನು ಜ.7ರಂದು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು.
ನಮ್ಮ ಪೂರ್ವಜರು ಶೈಕ್ಷಣಿಕ ಚಿಂತನೆಯೊಂದಿಗೆ ಕಟ್ಟಿದ ಕನ್ನಡ ಶಾಲೆಗಳನ್ನು ಕಾಲಕಾಲಕ್ಕೆ ಸರಿಯಾಗಿ ಉನ್ನತೀಕರಣಗೊಳಿಸಬೇಕು.ಸಮಾಜದ ಪರಿಕಲ್ಪನೆ ಕೇವಲ ಸರಕಾರಕ್ಕೆ ಮಾತ್ರವಲ್ಲ, ಎಲ್ಲಾ ಸ್ತರದ ಜನರಲ್ಲಿರಬೇಕು. ಸಂಘ ಜೀವಿಯಾದ ಮಾನವನು ಸಮಾಜದಿಂದ ಸಂಪತ್ತು ಪಡೆಯುವ ಕಾರಣ ಬದ್ದತೆ ಇರಬೇಕು ಎಂದರು.
ಗುರುಕುಲ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಕೆ.ಸಿ ರಾಜೇಶ್ ಪ್ರಸ್ತಾವನೆಯ ಮಾತುಗಳನ್ನಾಡಿ, ಗುರುಕುಲ ಎನ್ನುವ ಭವ್ಯ ಪರಂಪರೆಯನ್ನು ಮುಂದುವರಿಸಬೇಕು. ಶಾಲೆ ಹಾಗೂ ಶಿಕ್ಷಣ ಸಂಸ್ಥೆ ಪ್ರಕೃತಿ ಮಡಿಲಿನಲ್ಲಿ ಸೊಗಸಾಗಿ ನಿಲ್ಲಬೇಕು ಎಂಬ ದೂರದೃಷ್ಟಿ ಚಿಂತನೆಯೊಂದಿಗೆ ಗುರುಕುಲ ವಿದ್ಯಾಸಂಸ್ಥೆ ಹುಟ್ಟಿಕೊಂಡಿದ್ದು, ಇದರ ಜಂಟಿ ಕಾರ್ಯನಿರ್ವಾಹಕ ದಂಪತಿಗಳಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಶೆಟ್ಟಿ ತಮ್ಮ ಹುಟ್ಟೂರಿನ ಸರಕಾರಿ ಶಾಲೆ ಅಭಿವೃದ್ಧಿ ಬಗ್ಗೆ ನಿರ್ಧರಿಸಿ, ಈ ಕನ್ನಡ ಶಾಲೆಯನ್ನು ಉಳಿಸಿಕೊಂಡು, ಪ್ರಬುದ್ದತೆಗಾಗಿ ಇಂಗ್ಲೀಷ್ ಪಾಠಶಾಲೆ ತೆರಯಲು ಚಿಂತನೆಯೊಂದಿಗೆ ದತ್ತು ಸ್ವೀಕರಿಸಿದ್ದಾರೆ ಎಂದರು.
ಮಂಗಳೂರಿನ ಡಾ.ವಾದಿರಾಜ ಗೋಪಾಡಿ ಮಾತನಾಡಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ನಿವೃತ್ತ ಮುಖ್ಯೋಪಾಧ್ಯಾಯ ಸಂತೋಷ ಕುಮಾರ ಶೆಟ್ಟಿ ಅಂಪಾರು ಅವರನ್ನು ಸನ್ಮಾನಿಸಲಾಯಿತು.
ಕುಂದಾಪುರದ ಬಾಂಡ್ಯಾ ಎಜ್ಯುಕೇಶನಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಿರಿಯರಾದ ಬಾಂಡ್ಯ ಸುಬ್ಬಣ್ಣ ಶೆಟ್ಟಿ, ವಕ್ವಾಡಿ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯ ನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಅನುಪಮಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಗುರುಕುಲ ಪಬ್ಲಿಕ್ ಶಾಲೆಯ ಸಂಯೋಜಕಿ ವಿಶಾಲಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೊಡ್ಲಾಡಿ ಬಾಂಡ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸಂತೋಷ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಹಶಿಕ್ಷಕಿ ಆಶ್ರಿತಾ ವಂದಿಸಿದರು.