ಉಡುಪಿ: ಅಖಿಲ ಭಾರತ ಅಂತರ್ ವಿವಿ ವಾಲಿಬಾಲ್ ಪಂದ್ಯಾಟ; ಚಾಂಪಿಯನ್ ಪಟ್ಟಕ್ಕೇರಿದ ಕುರುಕ್ಷೇತ್ರ ವಿವಿ
ಚೆನ್ನೈ ಎಸ್ಆರ್ಎಂ ವಿವಿ ರನ್ನರ್ ಅಪ್; ಮಂಗಳೂರು ವಿವಿಗೆ ನಾಲ್ಕನೇ ಸ್ಥಾನ
ಉಡುಪಿ: ಕಳೆದ ಬಾರಿಯ ರನ್ನರ್ ಅಪ್ ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾಲಯ ಅಖಿಲ ಭಾರತ ಅಂತರ್ ವಿವಿ ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ನೂತನ ರಾಷ್ಟ್ರೀಯ ಚಾಂಪಿಯನ್ ತಂಡವಾಗಿ ಮೂಡಿಬಂದಿದೆ.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಇಂದು ಸಂಜೆ ಕುರುಕ್ಷೇತ್ರ ವಿವಿ ತಂಡ, ಚೆನ್ನೈನ ಎಸ್ಆರ್ಎಂ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್ ಎಂಡ್ ಟೆಕ್ನಾಲಜಿ ತಂಡವನ್ನು 25-20, 25-17, 25-18ರ ಅಂತರದಿಂದ ಸುಲಭವಾಗಿ ಹಿಮ್ಮೆಟ್ಟಿಸಿ ಕಳೆದ ಬಾರಿ ಕೈತಪ್ಪಿದ ಚಾಂಪಿಯನ್ ಕಿರೀಟವನ್ನು ಈ ಬಾರಿ ಗೆದ್ದುಕೊಂಡಿತು.
ಆದರೆ ಕ್ವಾರ್ಟರ್ ಫೈನಲ್ ಹಾಗೂ ಬೆಳಗಿನ ಸೆಮಿಫೈನಲ್ ಪಂದ್ಯಗಳಿಗೆ ಹೋಲಿಸಿದರೆ ಫೈನಲ್ ನಿರಾಸೆ ಉಂಟು ಮಾಡಿತು. ಅದು ನಿರೀಕ್ಷಿತ ಮಟ್ಟಕ್ಕೇರಲು ವಿಫಲವಾಯಿತು. ಕುರುಕ್ಷೇತ್ರ ತಂಡದ ಸಂಘಟಿತ ಹೋರಾಟದ ಎದುರು ಚೆನ್ನೈ ತಂಡ ಕಳಪೆಯಾಗಿ ಆಡಿತು. ಪಂದ್ಯದ ಯಾವುದೇ ಹಂತದಲ್ಲೂ ಅದು ಎದುರಾಳಿಯ ಸಾಮರ್ಥ್ಯಕ್ಕೆ ಸವಾಲು ಎಸೆಯಲಿಲ್ಲ.
ಮಂಗಳೂರಿಗೆ ನಾಲ್ಕನೇ ಸ್ಥಾನ: ಅಪರಾಹ್ನ ಸೆಮಿಫೈನಲ್ನಲ್ಲಿ ಸೋತ ಎರಡು ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ತಂಡವಾದ ಕೇರಳದ ಕಲ್ಲಿಕೋಟೆ ವಿವಿ, ಆತಿಥೇಯ ಮಂಗಳೂರು ವಿವಿಯನ್ನು 3-1ರ ಅಂತರದಿಂದ 25-27, 25-21, 25-16, 25-22ರಿಂದ ಸೋಲಿಸಿ ಮೂರನೇ ಸ್ಥಾನಿಯಾಯಿತು. ನಿನ್ನೆ ರಾತ್ರಿ ಮದ್ರಾಸ್ ವಿವಿಯನ್ನು ಐದು ಸೆಟ್ಗಳ ಹೋರಾಟದಲ್ಲಿ ಮಣಿಸಿದ್ದ ಮಂಗಳೂರು ವಿವಿ ಇಂದು ಅದೇ ಮಟ್ಟದ ಕೆಚ್ಚೆದೆಯ ಹೋರಾಟ ನೀಡುವಲ್ಲಿ ವಿಫಲವಾಯಿತು. ಮೊದಲ ಸೆಟ್ನ್ನು 27-25ರ ಅಂತರದಿಂದ ಗೆದ್ದ ಬಳಿಕ ಮಂಗಳೂರು ವಿವಿಯ ಆಟ ಅದೇ ಟೆಂಪೋ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಎರಡನೇ ಸೆಟ್ನ್ನು ಗೆದ್ದು ಸಮಬಲ ಸ್ಥಾಪಿಸಿದ ಬಳಿಕ ಕಲ್ಲಿಕೋಟೆ ವಿವಿ ಮತ್ತೆ ಪಂದ್ಯದ ಮೇಲಿನ ತನ್ನ ಹಿಡಿತವನ್ನು ಬಿಟ್ಟುಕೊಡಲಿಲ್ಲ. ಎರಡು ಸೆಟ್ಗಳನ್ನು ಸತತವಾಗಿ ಗೆದ್ದು ಅದು ಮೂರನೇ ಸ್ಥಾನಿಯಾದರೆ, ಆತಿಥೇಯ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಚಾಂಪಿಯನ್ಗೆ ಸೋಲು: ಇದಕ್ಕೆ ಮುನ್ನ ಇಂದು ಬೆಳಗ್ಗೆ ನಡೆದ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಹಾಲಿ ರಾಷ್ಟ್ರೀಯ ವಿವಿ ಚಾಂಪಿಯನ್ ಕೇರಳದ ಕಲ್ಲಿಕೋಟೆ ವಿವಿ ಹಾಗೂ ಆತಿಥೇಯ ಮಂಗಳೂರು ವಿವಿ ತಂಡಗಳು ಪರಾಭವಗೊಂಡವು.
ಕಲ್ಲಿಕೋಟೆ ವಿವಿ ಕಳೆದ ವರ್ಷ ಫೈನಲ್ನಲ್ಲಿ ತಾನೇ ಸೋಲಿಸಿದ್ದ ಕುರುಕ್ಷೇತ್ರ ವಿವಿ ಕೈಯಲ್ಲಿ 3-2 ಅಂತರದಿಂದ ಸೋಲು ಅನುಭವಿಸಿತು. ರೋಮಾಂಚಕಾರಿಯಾಗಿ ಸಾಗಿದ ಪಂದ್ಯವನ್ನು ಕುರುಕ್ಷೇತ್ರ ವಿವಿ 25-22, 25-27 25-15, 18-24, 15-7ರ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ ಕಳೆದ ಬಾರಿ ಫೈನಲ್ನಲ್ಲಿ ಅನುಭವಿಸಿದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.
ಎರಡನೇ ಸೆಮಿಫೈನಲ್ನಲ್ಲಿ ಆತಿಥೇಯ ಮಂಗಳೂರು ವಿವಿ, ಚೆನ್ನೈನ ಬಲಿಷ್ಠ ಎಸ್ಆರ್ಎಂ ವಿವಿಯಿಂದ 3-0 ನೇರ ಸೆಟ್ಗಳ ಅಂತರದಿಂದ ಪರಾಭವಗೊಂಡಿತು. ಎಸ್ಆರ್ಎಂ ವಿವಿ ಪಂದ್ಯವನ್ನು 25-22, 25-22, 25-20ರ ಅಂತರದಿಂದ ಜಯಿಸಿತು.
ಸಮಾರೋಪ: ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅದಮಾರು ಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ವಿಜೇತರಿಗೆ ಬಹುಮಾನ ವಿತರಿಸಿದರು.
ಶಾಸಕ ಕೆ.ರಘುಪತಿ ಭಟ್, ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್., ಗುರ್ಮೆ ಸುರೇಶ್ ಶೆಟ್ಟಿ, ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಸಿ.ಎಸ್.ಚಂದ್ರಶೇಖರ್, ಮಂಗಳೂರು ವಿವಿಯ ಡಾ.ಕಿಶೋರ್ ಕುಮಾರ್, ಡಾ. ಜೆರಾಲ್ಡ್ ಸಂತೋಷ ಡಿಸೋಜ, ಪಿಪಿಸಿ ಕಾಲೇಜಿನ ಸುಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು.
ಸೂರ್ಯಾಂಶ್ ಟೂರ್ನಿಯ ಬೆಸ್ಟ್ ಪ್ಲೆಯರ್
ಟೂರ್ನಿಯ ವೈಯಕ್ತಿಕ ಪ್ರಶಸ್ತಿಗಳಲ್ಲಿ ಚಾಂಪಿಯನ್ ಕುರುಕ್ಷೇತ್ರ ಹೆಚ್ಚಿನ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಕುರುಕ್ಷೇತ್ರದ ಸೂರ್ಯಾಂಶ್ ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಬಾಜನರಾದರು.
ಕುರುಕ್ಷೇತ್ರ ವಿವಿ ತಂಡದ ಸವಾನ್ ಅತ್ಯುತ್ತಮ ಆಕ್ರಮಣಕಾರಿ ಆಟಗಾರ, ಅದೇ ತಂಡದ ಸಮೀರ್ ಬೆಸ್ಟ್ ಸೆಟ್ಟರ್, ಕಲ್ಲಿಕೋಟೆ ವಿವಿಯ ಅರುಣ್ ಬೆಸ್ಟ್ ಯೂನಿವರ್ಸಲ್ ಪ್ಲೇಯರ್, ರನ್ನರ್ಅಪ್ ಎಸ್ಆರ್ಎಂ ಚೆನ್ನೈನ ಶ್ರೀಕಾಂತ್ ಬೆಸ್ಟ್ ಲಿಬ್ರೊ ಹಾಗೂ ಅದೇ ತಂಡದ ಉಡುಪಿ ಮೂಲದ ಸೃಜನ್ ಶೆಟ್ಟಿ ಬೆಸ್ಟ್ ಬ್ಲಾಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡರು.