ತಮಿಳುನಾಡು ವಿಧಾನಸಭೆಯಿಂದ ಹೊರನಡೆದ ರಾಜ್ಯಪಾಲ: ಚೆನ್ನೈನಲ್ಲಿ ಪ್ರತ್ಯಕ್ಷವಾದ #GetOutRavi ಭಿತ್ತಿಪತ್ರಗಳು

Update: 2023-01-10 10:51 GMT

ಚೆನ್ನೈ: ಸೋಮವಾರ ತಮಿಳುನಾಡು  (Tamil Nadu) ವಿಧಾನಸಭೆ ಅಧಿವೇಶನದಿಂದ ರಾಜ್ಯಪಾಲ ಆರ್.ಎನ್.ರವಿ ನಿರ್ಗಮಿಸಿದ ಮರುದಿನವೇ ಚೆನ್ನೈನಲ್ಲಿ #GetOutRavi ಎಂಬ ಹ್ಯಾಶ್‌ಟ್ಯಾಗ್ ಹೊಂದಿರುವ ಭಿತ್ತಿಪತ್ರಗಳು ಕಾಣಿಸಿಕೊಂಡಿವೆ. ಈ ಭಿತ್ತಿಪತ್ರಗಳು ಮುಖ್ಯಮಂತ್ರಿ ಎಂ.ಕೆ‌.ಸ್ಟಾಲಿನ್ (Chief Minister MK Stalin), ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಹಾಗೂ ಇನ್ನಿತರ ಡಿಎಂಕೆ ಪಕ್ಷದ ನಾಯಕರ ಭಾವಚಿತ್ರಗಳನ್ನು ಒಳಗೊಂಡಿವೆ. ಡಿಎಂಕೆ ಪಕ್ಷದ ವತಿಯಿಂದ ಅಂಟಿಸಲಾಗಿರುವ ಈ ಭಿತ್ತಿಪತ್ರದಲ್ಲಿ #GetOutRavi ಹ್ಯಾಶ್‌ಟ್ಯಾಗ್ ಅನ್ನು ಶುರು ಮಾಡಿ, ಅದನ್ನು ನಂ. 1 ಹ್ಯಾಶ್‌ಟ್ಯಾಗ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಲಾಗಿದೆ ಎಂದು thenewsminute.com ವರದಿ ಮಾಡಿದೆ.

ವಿಧಾನಸಭೆಯನ್ನುದ್ದೇಶಿ ಸಾಂಪ್ರದಾಯಿಕ ರಾಜ್ಯಪಾಲರ ಭಾಷಣವನ್ನು ಓದಿದ್ದ ರಾಜ್ಯಪಾಲ ಆರ್.ಎನ್.ರವಿ (RNRavi), ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಆ ಭಾಷಣದಲ್ಲಿನ ಒಂದು ಭಾಗವನ್ನು ಕೈಬಿಟ್ಟು, ತಮ್ಮದೇ ಆದ ವಿಷಯ ಸೇರಿಸಿಕೊಂಡಿದ್ದರಿಂದಾಗಿ ಮುಖ್ಯಮಂತ್ರಿ ಎಂ.ಕೆ‌.ಸ್ಟಾಲಿನ್ ಮತ್ತು ರಾಜ್ಯಪಾಲ ಆರ್.ಎನ್.ರವಿ ನಡುವಿನ ವಿರಸ ಮತ್ತಷ್ಟು ತಾರಕಕ್ಕೇರಿದೆ. ಹೀಗಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿಧಾನಸಭೆಯ ಸಂಪ್ರದಾಯ ಉಲ್ಲಂಘಿಸಿರುವ ನೆಲೆಯಲ್ಲಿ ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ಖಂಡನಾ ನಿರ್ಣಯವೊಂದನ್ನು ಅಂಗೀಕರಿಸಿದ್ದು, ಸರ್ಕಾರ ಸಿದ್ಧಪಡಿಸಿದ ಭಾಷಣ ಮಾತ್ರ ಊರ್ಜಿತ ಎಂದು ಘೋಷಿಸಿದ್ದಾರೆ.

ರಾಜ್ಯಪಾಲರ ಭಾಷಣದಲ್ಲಿ ಒಳಗೊಂಡಿದ್ದ ಅಂಬೇಡ್ಕರ್, ದ್ರಾವಿಡ ಮಾದರಿಯ ಆಡಳಿತ ಹಾಗೂ ತಮಿಳುನಾಡಿನ ಕಾನೂನು ಸುವ್ಯವಸ್ಥೆ ಕುರಿತು ಉಲ್ಲೇಖಿಸಲಾಗಿದ್ದ ಸಾಲುಗಳನ್ನು ಭಾಷಣದಿಂದ ಕೈಬಿಟ್ಟ ರಾಜ್ಯಪಾಲರ ನಡೆಯನ್ನು ಡಿಎಂಕೆ ಸರ್ಕಾರ ಖಂಡಿಸಿದೆ. ರಾಜ್ಯಪಾಲರ ವಿರುದ್ಧದ ಖಂಡನಾ ನಿರ್ಣಯಕ್ಕೆ ವಿಧಾನಸಭೆ ಅನುಮೋದನೆ ನೀಡಿದ ಬೆನ್ನಿಗೇ ಸಾಂಪ್ರದಾಯಿಕ ರಾಷ್ಟ್ರಗೀತೆ ಶುರುವಾಗುವ ಮುನ್ನವೇ ರಾಜ್ಯಪಾಲರು ಅಧಿವೇಶನದಿಂದ ನಿರ್ಗಮಿಸಿದರು.

ಡಿಎಂಕೆ ಸರ್ಕಾರ ಹಾಗೂ ರಾಜ್ಯಪಾಲ ಆರ್.ಎನ್.ರವಿ ನಡುವಿನ ಸಂಘರ್ಷ ಕಳೆದ ಕೆಲವು ತಿಂಗಳಿನಿಂದ ಮುಂದುವರಿದಿದ್ದು, ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ರಾಜ್ಯಪಾಲ ಆರ್.ಎನ್.ರವಿ, "ತಮಿಳುನಾಡು ಬದಲು ತಮಿಳಗಂ ಪದ ಬಳಕೆ ಹೆಚ್ಚು ಸೂಕ್ತ" ಎಂದು ಸಲಹೆ ನೀಡುವ ಮೂಲಕ ಡಿಎಂಕೆ ಸರ್ಕಾರ ಹಾಗೂ ತಮ್ಮ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ನಡೆಯಲು ಕಾರಣರಾಗಿದ್ದರು.

ಇದರ ಬೆನ್ನಿಗೇ ವಿಧಾನಸಭೆಯಲ್ಲಿ ಜರುಗಿದ ಘಟನೆಯು ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಮತ್ತು #GetOutRavi, #GetOutRNRavi ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಟ್ರೆಂಡ್ ಮಾಡಿ, ರಾಜ್ಯಪಾಲ ಹುದ್ದೆಯಿಂದ ನಿರ್ಗಮಿಸುವಂತೆ ರಾಜ್ಯಪಾಲ ಆರ್.ಎನ್‌.ರವಿಯನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚಳಿಯಲ್ಲೂ ಟೀ ಶರ್ಟ್ ಧರಿಸಲು ನಿರ್ಧರಿಸಿರುವುದಕ್ಕೆ ಕಾರಣ ತಿಳಿಸಿದ ರಾಹುಲ್ ಗಾಂಧಿ

Similar News