ಭೀಕರ ಅಪಘಾತದಲ್ಲಿ ಇಸ್ರೋ ಕ್ಯಾಂಟೀನಿನ ಐವರು ಗುತ್ತಿಗೆ ನೌಕರರು ಮೃತ್ಯು

Update: 2023-01-23 11:31 GMT

ಅಲಪ್ಪುಝ: ಸೋಮವಾರ ಮುಂಜಾನೆ ಕೇರಳದ ಅಲಪ್ಪುಝ ಜಿಲ್ಲೆಯ ಅಂಬಲಪುಝ ಸಮೀಪ ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ತಿರುವನಂತಪುರಂನಲ್ಲಿರುವ ಇಸ್ರೋದ (ISRO) ಕ್ಯಾಂಟೀನಿನ ಐದು ಮಂದಿ ಗುತ್ತಿಗೆ ನೌಕರರು ಸಾವನ್ನಪ್ಪಿದ್ದಾರೆ. ಅವರೆಲ್ಲರೂ  ವಿವಾಹವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಮುಂಜಾನೆ ಸುಮಾರು 1:30ರ ಹೊತ್ತಿಗೆ ಅಂಬಲಪುಝ ಮೇಲ್ಸೇತುವೆಯಲ್ಲಿ ಉದ್ಯೋಗಿಗಳಿದ್ದ ಕಾರು ಅಕ್ಕಿ ಸಾಗಾಟ ಲಾರಿಯೊಂದಕ್ಕೆ ಢಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ಐದು ಮಂದಿಯೂ ಸಾವನ್ನಪ್ಪಿದ್ದಾರೆ. ಪೊಲೀಸರು ಲಾರಿ ಚಾಲಕ ಮತ್ತು ಕ್ಲೀನರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಢಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಅದರಲ್ಲಿದ್ದವರನ್ನು ಹೊರತೆಗೆಯಲು ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಪಡಬೇಕಾಯಿತು. ಕಾರಿನಲ್ಲಿದ್ದ ನಾಲ್ಕು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಇನ್ನೊಬ್ಬಾತ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾನೆ.

ಮೃತರನ್ನು ಪ್ರಸಾದ್, ಶಾಜುದಾಸ್‌, ಸಚಿನ್‌, ಸುಮೋದ್‌ ಮತ್ತು ಅಮಲ್‌ ಎಂದು ಗುರುತಿಸಲಾಗಿದೆ.

Similar News