ಉಡುಪಿ: ಜ.26ರಂದು ದಸಂಸದಿಂದ ‘ಭಾರತ ಸಂವಿಧಾನ ಮತ್ತು ಧರ್ಮ ರಾಜಕಾರಣ’ ವಿಚಾರಸಂಕಿರಣ

Update: 2023-01-23 15:53 GMT

ಉಡುಪಿ: ಭಾರತ ಗಣರಾಜ್ಯೋತ್ಸವದ ಪ್ರಯುಕ್ತ ಜ.26ರಂದು ಗುರುವಾರ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ, ‘ಭಾರತದ ಸಂವಿಧಾನ ಮತ್ತು ಧರ್ಮ ರಾಜಕಾರಣ’ ವಿಷಯದ ಕುರಿತು ವಿಚಾರಸಂಕಿರಣವೊಂದನ್ನು ಆಯೋಜಿಸಲಿದೆ ಎಂದು ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ಸಂಕಿರಣ ಜ.26ರ ಬೆಳಗ್ಗೆ 10:00ಗಂಟೆಗೆ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನ ಡಾನ್‌ಬಾಸ್ಕೋ ಸಭಾಂಗಣದಲ್ಲಿ ನಡೆಯಲಿದೆ ಎಂದರು.

ಕರಾವಳಿ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋಮು ವೈಷಮ್ಯ, ಯುವ ಜನರಿಗೆ ಸಂವಿಧಾನದ ಆಶಯಗಳ ಬಗ್ಗೆ ಇರುವ ತಪ್ಪು ತಿಳುವಳಿಕೆ ಹೋಗಲಾಡಿಸಲು ಮತ್ತು ಜನತೆಗೆ ಪ್ರಜಾಪ್ರಭುತ್ವದ ನೈಜ ಸ್ಪೂರ್ತಿಯ ಬಗ್ಗೆ  ಸೂಕ್ತ ತಿಳಿವಳಿಕೆ ನೀಡುವ ಉದ್ದೇಶದಿಂದ ಈ ವಿಚಾರ ಸಂಕಿರಣವನ್ನು ಹಮ್ಮಿ ಕೊಳ್ಳಲಾಗಿದೆ ಎಂದವರು ವಿವರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ನ್ಯಾಯವಾದಿಗಳಾದ ಡಾ.ಸಿ.ಎಸ್.ದ್ವಾರಕನಾಥ್, ವಿಚಾರವನ್ನು ಮಂಡಿಸಲಿದ್ದಾರೆ. ಬಳಿಕ ಸಂವಾದ ಹಾಗೂ ಚರ್ಚೆ ನಡೆಯಲಿದೆ ಎಂದೂ ಗಿಳಿಯಾರು ತಿಳಿಸಿದರು.

ನ್ಯಾಯವಾದಿಯೂ ಆಗಿರುವ ಟಿ.ಮಂಜುನಾಥ ಗಿಳಿಯಾರು ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಸಂಕಿರಣದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲದಾಸ್ ಬನ್ನಂಜೆ, ಉಡುಪಿ ಮದರ್ ಆಪ್ ಸಾರೋಸ್ ಚರ್ಚ್‌ನ ಧರ್ಮಗುರುಗಳಾದ ವಂ. ಚಾರ್ಲ್ಸ್ ಮಿನೇಜಸ್, ಕರ್ನಾಟಕ-ಕೇರಳ ಕೊರಗ ಒಕ್ಕೂಟದ ಸುಶೀಲ ನಾಡ, ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸಿನ್ ಮಲ್ಪೆ, ಪ್ರಗತಿಪರ ಚಿಂತಕ ಪ್ರೊ.ಫಣಿರಾಜ್, ಕಾರ್ಕಳದ ಖ್ಯಾತ ನೇತ್ರತಜ್ಞ ಡಾ.ಪ್ರೇಮದಾಸ್, ದಲಿತ ಹೋರಾಟಗಾರ ನಾರಾಯಣ ಮಣೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಉಡುಪಿ ಬೌದ್ಧ ಮಹಾಸಭಾದ ಶಂಭು ಮಾಸ್ತರ್, ಹೋರಾಟಗಾರರಾದ ಶೇಖರ ಹೆಜಮಾಡಿ, ಹರೀಶ್ ಸಾಲ್ಯಾನ್, ವಾಸುದೇವ ಮುದೂರು, ವಸಂತಿ, ರಮೇಶ್ ಕೆಳಾರ್ಕಳಬೆಟ್ಟು, ವಿಶ್ವನಾಥ್ ಬೆಳ್ಳಂಪಳ್ಳಿ ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಐಕ್ಯ ಹೋರಾಟ ಸಮಿತಿಯ ಜಿಲ್ಲಾ  ಸಂಚಾಲಕರಾದ ಸುಂದರ ಮಾಸ್ತರ್, ವಾಸುದೇವ ಮುದೂರು, ಆನಂದ ಬ್ರಹ್ಮಾವರ, ವಿಶ್ವನಾಥ ಬೆಳ್ಳಂಪಳ್ಳಿ, ಹರೀಶ್ ಸಾಲ್ಯಾನ್, ರಮೇಶ್ ಕೋಟ್ಯಾನ್, ಪರಮೇಶ್ವರ ಉಪ್ಪೂರು ಉಪಸ್ಥಿತರಿದ್ದರು.

Similar News