ನೂತನ ಐಟಿ ನಿಯಮಗಳನ್ನು ಸಂಸತ್ ಸಮಿತಿಗಳು ಚರ್ಚಿಸಿಲ್ಲ,ಆದರೂ ಸರಕಾರ ಅವುಗಳನ್ನು ಬಳಸಿದೆ!: ವರದಿ

ಆರ್ಟಿಐ ಉತ್ತರದಲ್ಲಿ ಬಹಿರಂಗ

Update: 2023-01-24 18:27 GMT

ಹೊಸದಿಲ್ಲಿ,ಜ.24: ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಾನು ರೂಪಿಸಿರುವ ಹೊಸ ನಿಯಮಗಳು ಸಂಸತ್ತಿನಲ್ಲಿ ಚರ್ಚೆಯಾಗಿರದಿದ್ದರೂ ಸರಕಾರವು ಕಳೆದೆರಡು ವರ್ಷಗಳಿಂದ ಅವುಗಳನ್ನು ಸಕ್ರಿಯವಾಗಿ ಬಳಸುತ್ತಿದೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿಯ ಅಧೀನ ಶಾಸನ ಸಮಿತಿಗಳು ಹೊಸ ನಿಯಮಗಳನ್ನು ಚರ್ಚೆಗೆತ್ತಿಕೊಂಡಿಲ್ಲ ಎನ್ನುವುದನ್ನು ಆರ್ಟಿಐ ಉತ್ತರವೊಂದು ಬಹಿರಂಗಗೊಳಿಸಿದೆ ಎಂದು thewire.in ವರದಿ ಮಾಡಿದೆ  

ಸಾಮಾಜಿಕ ಮಾಧ್ಯಮಗಳು,ಒಟಿಟಿ ವೇದಿಕೆಗಳು ಮತ್ತು ಡಿಜಿಟಲ್ ಸುದ್ದಿಸಂಸ್ಥೆಗಳನ್ನು ಕಾಯ್ದೆಯ ವ್ಯಾಪ್ತಿಗೊಳಪಡಿಸಲು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು,2021ನ್ನು ಫೆ.25,2021ರಂದು ಅಧಿಸೂಚಿಸಲಾಗಿತ್ತು. ಸಾಮಾನ್ಯವಾಗಿ ಈ ರೀತಿಯ ನಿಯಮಗಳನ್ನು ಚರ್ಚೆಗಾಗಿ 15 ದಿನಗಳಲ್ಲಿ ಸಂಸತ್ತಿನಲ್ಲಿ ಮಂಡಿಸಬೇಕು. ಆದರೆ ಆರ್ಟಿಐ ಕಾರ್ಯಕರ್ತ ವೆಂಕಟೇಶ ನಾಯಕ್ ಅವರು ಸಲ್ಲಿಸಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ಲೋಕಸಭಾ ಸಚಿವಾಲಯವು, ಈ ನಿಯಮಗಳನ್ನು ಈವರೆಗೆ ಸಂಸತ್ತಿನಲ್ಲಿ ಮಂಡಿಸಲಾಗಿರುವ ಬಗ್ಗೆ ತನ್ನ ಬುಲೆಟಿನ್ನಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ತಿಳಿಸಿದೆ.

ಸಂಬಂಧಿತ ಸಚಿವಾಲಯ,ಅಂದರೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಧಿಸೂಚನೆಯು ಅಧಿಕೃತ ಗೆಜೆಟ್ನಲ್ಲಿ ಪ್ರಕಟಗೊಂಡ 15 ದಿನಗಳಲ್ಲಿ ಅದನ್ನು ಸದನದಲ್ಲಿ ಮಂಡಿಸಲು ರವಾನಿಸಿರಲಿಲ್ಲ ಎಂಬಂತೆ ತೋರುತ್ತಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ಇಂತಹ ಎಲ್ಲ ಅಧಿಸೂಚನೆಗಳು ತನ್ನ ವೆಬ್ಸೈಟ್ನಲ್ಲಿ ಸಾರ್ವಜನಿಕವಾಗಿ ಲಭ್ಯವಿವೆ ಎಂದು ರಾಜ್ಯಸಭಾ ಸಚಿವಾಲಯವು ತಿಳಿಸಿದೆ. ನಿಯಮಗಳನ್ನು 2021,ಮಾ.25ರಂದು ರಾಜ್ಯಸಭೆಯಲ್ಲಿ ಮಂಡಿಸಿರುವುದನ್ನು ಅದರ ಬುಲೆಟಿನ್ ತೋರಿಸಿದೆ.

ತೀರ ಇತ್ತೀಚಿಗೆ ಕೇಂದ್ರ ಸರಕಾರವು 2002ರ ಗುಜರಾತ್ ಗಲಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವಿತ್ತು ಎಂದು ಹೇಳಿರುವ ಬಿಬಿಸಿ ಸಾಕ್ಷಚಿತ್ರದ ಲಿಂಕ್ಗಳನ್ನು ಹೊಂದಿರುವ ಪೋಸ್ಟ್ ಗಳನ್ನು ತೆಗೆದುಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟರ್ ಗೆ ನಿರ್ದೇಶನ ನೀಡಲು ಈ ನಿಯಮಗಳನ್ನು ಬಳಸಿಕೊಂಡಿದೆ.

ಪೋಸ್ಟ್ಗಳನ್ನು ತೆಗೆದುಹಾಕಲು ಕಾರಣಗಳನ್ನು ವಿವರಿಸುವ ಸಾಕ್ಷಚಿತ್ರ ನಿರ್ಬಂಧ ಆದೇಶಗಳನ್ನು ಸರಕಾರವು ಹಂಚಿಕೊಂಡಿಲ್ಲ ಎಂದು ನಾಯಕ್ ಎತ್ತಿ ತೋರಿಸಿದರು. ಐಟಿ ನಿಯಮಗಳಡಿ ಸರಕಾರವು ಈ ಕಾರಣಗಳನ್ನು ಲಿಖಿತ ರೂಪದಲ್ಲಿ ನೀಡಬೇಕು. ಈ ಹಿಂದೆಯೂ ಆರ್ಟಿಐ ಕಾಯ್ದೆಯಡಿ ತಾನು ಇತರ ಪ್ರಕರಣಗಳಲ್ಲಿ ನಿರ್ಬಂಧಕ ಆದೇಶಗಳನ್ನು ಕೋರಿದ್ದೆ. ಆದರೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆರ್ಟಿಐ ಕಾಯ್ದೆಯ ಕಲಂ 8(1)(ಎ) ಅಡಿ ರಾಷ್ಟ್ರೀಯ ಭದ್ರತಾ ವಿನಾಯಿತಿಯ ಕಾರಣದಿಂದ ಉತ್ತರವನ್ನು ನೀಡಲು ನಿರಾಕರಿಸಿತ್ತು ಎಂದು ಅವರು ಹೇಳಿದರು.

ಬಿಬಿಸಿ ಸಾಕ್ಷಚಿತ್ರದ ವಿರುದ್ಧದ ಇತ್ತೀಚಿನ ಕ್ರಮ ಸೇರಿದಂತೆ ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ವಿಷಯಗಳನ್ನು ನಿರ್ಬಂಧಿಸುವಾಗ ಮತ್ತು ನಂತರದಲ್ಲಿ ತನ್ನ ಕ್ರಮಗಳ ಕುರಿತು ಹೆಚ್ಚು ಪಾರದರ್ಶಕವಾಗಿರಲು ಕೇಂದ್ರ ಸರಕಾರದ ಹಿಂಜರಿಯುವಿಕೆಯು ಅದರ ಉದ್ದೇಶಗಳ ಬಗ್ಗೆ ಶಂಕೆಯನ್ನು ಹುಟ್ಟಿಸುತ್ತದೆಯಷ್ಟೇ ಎಂದು ಹೇಳಿದ ನಾಯಕ್,ಇಂತಹ ವಿಷಯಗಳನ್ನು ನಿರ್ಬಂಧಿಸಲು 2021ರ ನಿಯಮಗಳಡಿ ತನ್ನ ಅಧಿಕಾರವನ್ನು ಚಲಾಯಿಸಲು ಬಲವಾದ ಪ್ರಕರಣವಿದೆ ಎಂದು ಸರಕಾರವು ನಂಬಿದ್ದರೆ ಅದು ಇಂತಹ ಆದೇಶಗಳನ್ನು ಮತ್ತು ಎಲ್ಲ ದಾಖಲೆಗಳನ್ನು ಬಹಿರಂಗಗೊಳಿಸಬೇಕು ಎಂದರು.

Similar News