ಇಂದೋರ್‌ನಲ್ಲಿ 'ಪಠಾಣ್' ಚಿತ್ರ ಪ್ರದರ್ಶನವನ್ನು ನಿಲ್ಲಿಸಿದ ಬಜರಂಗದಳ ಕಾರ್ಯಕರ್ತರು: ಹನುಮಾನ್ ಚಾಲೀಸ ಪಠಣ

Update: 2023-01-25 10:30 GMT

ಇಂದೋರ್: ಶಾರೂಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಾಯಕತ್ವದ 'ಪಠಾಣ್' ಚಿತ್ರ ಬುಧವಾರ ದೇಶಾದ್ಯಂತ ಬಿಡುಗಡೆಯಾಗಿದ್ದು, ಇದರ ಬೆನ್ನಿಗೇ ಬಜರಂಗ ದಳ ಕಾರ್ಯಕರ್ತರು ಇಂದೋರ್ ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ನಡೆಸಿ, ಹಲವಾರು ಚಿತ್ರಮಂದಿರಗಳ ಪ್ರದರ್ಶನವನ್ನು ಬಲವಂತವಾಗಿ ರದ್ದುಗೊಳಿಸಿದ್ದಾರೆ ಎಂದು freepressjournal.in ವರದಿ ಮಾಡಿದೆ.

ಇಂದೋರ್ ಚಿತ್ರಮಂದಿರಗಳ ಮುಂದೆ ಬಜರಂಗ ದಳ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯ ಹಲವಾರು ವಿಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಬಜರಂಗ ದಳ ಕಾರ್ಯಕರ್ತರು ಪ್ರೇಕ್ಷಕರಿಗೆ ಚಿತ್ರಮಂದಿರದ ಒಳ ಹೋಗಲು ಅವಕಾಶ ನೀಡದೆ ಬಲವಂತವಾಗಿ 'ಪಠಾಣ್' ಚಿತ್ರ ಪ್ರದರ್ಶನಗಳನ್ನು ರದ್ದುಗೊಳಿಸುತ್ತಿರುವುದು ಆ ವಿಡಿಯೊಗಳಲ್ಲಿ ಕಂಡು ಬಂದಿದೆ. ಇದಲ್ಲದೆ 'ಜೈ ಶ್ರೀರಾಮ್' ಘೋಷಣೆ ಕೂಗಿರುವ ಬಜರಂಗ ದಳ ಕಾರ್ಯಕರ್ತರು, 'ಪಠಾಣ್' ಚಿತ್ರ ಬಹಿಷ್ಕರಿಸುವಂತೆಯೂ ಕರೆ ನೀಡಿದ್ದಾರೆ.

ಈ ಪೈಕಿ ಒಂದು ವಿಡಿಯೊದಲ್ಲಿ ಇಂದೋರ್‌ನ ಸಪ್ನ ಸಂಗೀತ ಮಾಲ್‌ನ ಇನಾಕ್ಸ್ ಚಿತ್ರಮಂದಿರದ ಎದುರು ಧರಣಿ ನಡೆಸುತ್ತಿರುವ ಬಜರಂಗ ದಳ ಕಾರ್ಯಕರ್ತರು, ಧ್ವನಿವರ್ಧಕದ ಮೂಲಕ ಹನುಮಾನ್ ಚಾಲೀಸ್ ಅನ್ನು ಏಕಕಾಲಕ್ಕೆ ಹಾಡುತ್ತಾ, ಪಠಿಸುತ್ತಾ 'ಪಠಾಣ್' ಚಿತ್ರದ ವಿರುದ್ಧ ಪ್ರತಿಭಟಿಸುತ್ತಿರುವುದು ದಾಖಲಾಗಿದೆ. ಇದಲ್ಲದೆ ಇಂದೋರ್‌ನ ಕಸ್ತೂರ್ ಚಿತ್ರಮಂದಿರದ ಎದುರು ಕೇಸರಿ ವಸ್ತ್ರ ತೊಟ್ಟುಕೊಂಡು ಬಜರಂಗ ದಳದ ಕಾರ್ಯಕರ್ತರು ಘೋಷಣೆ ಕೂಗುತ್ತಿರುವುದು ಮತ್ತೊಂದು ವಿಡಿಯೊದಲ್ಲಿ ಸೆರೆಯಾಗಿದೆ.

Similar News