ಸಂವಿಧಾನವೆಂದರೆ ಮೀಸಲಾತಿಯಲ್ಲ: ಜಯನ್ ಮಲ್ಪೆ

Update: 2023-01-26 16:05 GMT

ಮಲ್ಪೆ: ಸಂವಿಧಾನ ಎಂದರೆ ಮೀಸಲಾತಿ ಮತ್ತು ದಲಿತರ ವಿಶೇಷ ಸೌಲಭ್ಯಗಳು ಅಂತ ಬಹುತೇಕ ಜನರು ತಿಳಿದುಕೊಂಡಿದ್ದಾರೆ. ಇದು ತಪ್ಪು ಕಲ್ಪನೆ. ಸಂವಿಧಾನದಲ್ಲಿ ಸಾಮಾಜಿಕ,ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲರಿಗೂ ಸೌಲಭ್ಯಗಳು ನೀಡಿದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿದ 74ನೇ ಗಣರಾಜ್ಯೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂವಿಧಾನ ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಘನತೆಯನ್ನು ತಂದು ಕೊಟ್ಟಿದ್ದು, ನಮ್ಮ ಸಂವಿಧಾನ ಉಳಿದರೆ ನಮ್ಮ ದೇಶದ ಸಮಗ್ರತೆ, ಸಂಸ್ಕೃತಿ ಮತ್ತು ಜನರ ಬದುಕು ಉಳಿಯುತ್ತದೆ. ನಾವು ಭಾರತೀಯರು ಎಂಬ ಒಗ್ಗಟ್ಟಿನ ಆಶಯಕ್ಕೆ ಅಡ್ಡಗಾಲಾಗಿ ನಿಂತಿರುವ ಜಾತಿ, ಧರ್ಮ, ಮೌಢ್ಯ ಕಿತ್ತು ಮನುಷ್ಯತ್ವವನ್ನು ಪ್ರೀತಿಸಬೇಕು ಎಂದರು.

ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ ಸಂವಿಧಾನ ರಚನೆ ಕರಡು ಸಮಿತಿಯಲ್ಲಿ ಒಟ್ಟು ಏಳು ಜನ ಇರುತ್ತಾರೆ. ಈ ಏಳು ಜನರಲ್ಲಿ ಇಬ್ಬರು ಅಕಾಲಿಕವಾಗಿ ಮರಣ ಹೊಂದುತ್ತಾರೆ. ಇನ್ನೊಬ್ಬರು ರಾಜೀನಾಮೆ ನೀಡುತ್ತಾರೆ. ಒಬ್ಬರು ಅಮೇರಿಕದಲ್ಲಿ ನೆಲೆಸುತ್ತಾರೆ. ಒಬ್ಬರು ಅನಾರೋಗ್ಯದಿಂದ ಬಳಲುತ್ತಾರೆ. ಇಬ್ಬರು ದೆಹಲಿಯ ರಾಜಕೀಯದಲ್ಲಿ ತೊಡಗಿಸಿಕೊಂಡು ಇರುತ್ತಾರೆ. ಇಂತಹ ಸಂದರ್ದಲ್ಲಿ ಅಂಬೇಡ್ಕರ್ ಒಬ್ಬರೇ ನಮ್ಮ ಭಾರತದ ಸಂವಿಧಾನವನ್ನು ಬರೆದಿದ್ದಾರೆ ಎಂದರು.

ಇನ್ನೊಬ್ಬ ಅಥಿತಿಯಾಗಿ ಮಾಧವ ಕರ್ಕೆರ ಪಾಳೇಕಟ್ಟೆ ಮಾತನಾಡಿ, ಅಸಮಾನತೆಗಳ ಕುರಿತು ಧ್ವನಿ ಎತ್ತಬೇಕಿರುವ ಮನಸ್ಸುಗಳು ಸಂವಿಧಾನ ಬದ ಲಾವಣೆಯ ಬಗ್ಗೆ ಗಮನ ಹರಿಸಿವೆ. ಈ ನೆಲದ ದಲಿತರು ಸಂವಿಧಾನ ರಕ್ಷಸಿ ದೇಶ ಉಳಿಸಬೇಕಾಗಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಯುವಸೇನೆ ನಾಯಕರಾದ ಶಶಿಕಲಾ ತೊಟ್ಟಂ, ಸಂಧ್ಯಾ ಕೃಷ್ಣ ನೆರ್ಗಿ, ಪ್ರಮೀಳ ಹರೀಶ್ ಸಲ್ಯಾನ್, ವಸಂತಿ, ರಾಮೋಜಿ ಅಮೀನ್, ಕೃಷ್ಣ ಶ್ರೀಯಾನ್, ಭಗವಾನ್ ಮಲ್ಪೆ, ಗುಣವಂತ ಪಾಲನ್ ತೊಟ್ಟಂ, ಪ್ರಶಾಂತ್ ಬಿ.ಎನ್., ಮಂಜುನಾಥ ಕಪ್ಪೆಟ್ಟು, ಪ್ರಸಾದ್ ಮಲ್ಪೆ, ಅರುಣ್ ಸಾಲ್ಯಾನ್, ಸುಕೇಶ್ ಪುತ್ತೂರು, ಅನಿಲ್ ಕದಿಕೆ, ದೀಪಕ್ ಕೊಡವೂರು, ಸುಧಾಕರ್ ನೆರ್ಗಿ, ಈಶ್ವರ್ ಬಿ.ಲಂಬಾನಿ, ಗ್ಯಾಬ್ರಿಯಲ್ ನೆರ್ಗಿ ಮೊದಲಾದವರು ಭಾಗವಹಿಸಿ ದ್ದರು. ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಸ್ವಾಗತಿಸಿ, ಸುಶೀಲ್ ಕುಮಾರ್ ಕೊಡವೂರು ವಂದಿಸಿದರು. ಅಶೋಕ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

Similar News