ಮುಲಾಯಮ್ ಸಿಂಗ್ ಗೆ ಪದ್ಮ ವಿಭೂಷಣ ಅವರ ಘನತೆಗೆ ಮಾಡಿರುವ ಅಣಕ ಎಂದ ಎಸ್ಪಿ ನಾಯಕ
Update: 2023-01-26 22:30 IST
ಲಕ್ನೋ: ಮಾಜಿ ಕೇಂದ್ರ ಸಚಿವ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪ್ರಕಟಿಸುವ ಮೂಲಕ ಸರಕಾರವು ಅವರ ಘನತೆಯ ಮತ್ತು ಅವರು ದೇಶಕ್ಕೆ ಸಲ್ಲಿಸಿರುವ ಕೊಡುಗೆಗಳ ಅಣಕವಾಡಿದೆ ಎಂದು ಸಮಾಜವಾದಿ ಪಕ್ಷ (ಎಸ್ಪಿ)ದ ನಾಯಕ ಸ್ವಾಮಿಪ್ರಸಾದ ಮೌರ್ಯ ಅವರು ಗುರುವಾರ ಟೀಕಿಸಿದರು.
ಎಸ್ಪಿ ಸ್ಥಾಪಕ ಮುಲಾಯಂ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾಗಿರುವ ಭಾರತ ರತ್ನವನ್ನು ನೀಡುವಂತೆ ಮೌರ್ಯ ಮತ್ತು ಪಕ್ಷದ ಇತರ ನಾಯಕರು ಆಗ್ರಹಿಸಿದ್ದಾರೆ.
‘ಭಾರತ ರತ್ನವನ್ನು ಹೊರತುಪಡಿಸಿ ಇತರ ಯಾವುದೇ ಗೌರವವು ನೇತಾಜಿ (ಮುಲಾಯಂ)ಯವರಿಗೆ ಸೂಕ್ತವಲ್ಲ. ಯಾವುದೇ ವಿಳಂಬವಿಲ್ಲದೆ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರಕಟಿಸಬೇಕು ’ ಎಂದು ಪಕ್ಷದ ವಕ್ತಾರ ಐ.ಪಿ.ಸಿಂಗ್ ಟ್ವೀಟಿಸಿದ್ದಾರೆ.
ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಕಳೆದ ವರ್ಷದ ಅ.10ರಂದು ನಿಧನರಾಗಿದ್ದಾರೆ.