ತಾಂತ್ರಿಕ ದೋಷ : ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ ಜಗನ್ ರೆಡ್ಡಿ ಪ್ರಯಾಣಿಸುತ್ತಿದ್ದ ವಿಮಾನ
Update: 2023-01-30 17:27 GMT
ಅಮರಾವತಿ, ಜ. 30: ಆಂಧ್ರಪ್ರದೇಶದ (Andhra Pradesh) ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರು ಪ್ರಯಾಣಿಸುತ್ತಿದ್ದ ರಾಜ್ಯ ಸರಕಾರದ ವಿಮಾನದಲ್ಲಿ ಸಂಚಾರ ಆರಂಭಿಸಿದ ಸುಮಾರು 24 ನಿಮಿಷಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇಲ್ಲಿನ ಗನ್ನಾವರಂ ವಿಮಾನ ನಿಲ್ದಾಣಕ್ಕೆ (Gannavaram airport) ಹಿಂದಿರುಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಜಾಗತಿಕ ಹೂಡಿಕೆದಾರರ ಸಮಾವೇಶದ ಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ವಿಮಾನದಲ್ಲಿ ಹೊಸದಿಲ್ಲಿಗೆ ಪ್ರಯಾಣಿಸುತ್ತಿರುವ ಸಂದರ್ಭ ಈ ಘಟನೆ ಸಂಭವಿಸಿದೆ. ಜಗನ್ ಮೋಹನ್ ರೆಡ್ಡಿ ಹಾಗೂ ಅವರ ಅಧಿಕಾರಿಗಳ ತಂಡವಿದ್ದ ವಿಮಾನ ಸಂಜೆ 5.03ಕ್ಕೆ ಹೊಸದಿಲ್ಲಿಗೆ ಹಾರಾಟ ಆರಂಭಿಸಿತು. ಆದರೆ, ವಿಮಾನದ ಎಂಜಿನ್ ನಲ್ಲಿ ತಾಂತ್ರಿಕ ದೋಷ ಇರುವುದನ್ನು ಪೈಲಟ್ ಗಮನಿಸಿದರು. ಕೂಡಲೇ ವಿಮಾನವನ್ನು ವಿಮಾನ ನಿಲ್ದಾಣಕ್ಕೆ ಹಿಂದೆ ತಂದರು ಎಂದು ಹೇಳಿಕೆ ತಿಳಿಸಿದೆ.