ಅಮರ್ತ್ಯ ಸೇನ್ ವಿರುದ್ಧ ಶಾಂತಿನಿಕೇತನದಲ್ಲಿ ನಡೆಯುತ್ತಿರುವುದೇನು?

Update: 2023-02-01 08:26 GMT

2020ರಿಂದ ಶುರುವಾಗಿರುವ ಈ ಕಿರುಕುಳ ಈಗ ತೀವ್ರ ಸ್ವರೂಪ ಪಡೆದಿದ್ದು, ಹೆಚ್ಚುವರಿ ಜಾಗವನ್ನು ಶೀಘ್ರ ಮರಳಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ವಿವಿ ಆರೋಪದಲ್ಲಿ ಯಾವುದೇ ವಿವೇಚನೆ ಕಾಣುತ್ತಿಲ್ಲ ಎಂದಿರುವ ಸೇನ್ ಪ್ರಶ್ನೆಯೇನೆಂದರೆ, ತನ್ನನ್ನು ಹೊರಹಾಕಲು ವಿಶ್ವಭಾರತಿ ವಿಶ್ವವಿದ್ಯಾನಿಲಯ ಪ್ರಯತ್ನಿಸುತ್ತಿರುವುದಾದರೂ ಏಕೆ ಎಂಬುದು.

ವ್ಯವಸ್ಥೆಯನ್ನು ಟೀಕಿಸುವವರನ್ನು ಸಹಿಸದ, ಅವರನ್ನು ಬಗ್ಗುಬಡಿಯುವ ನಡೆಯೊಂದು ಕಣ್ಣಿಗೆ ರಾಚುವಷ್ಟು ದೊಡ್ಡ ಮಟ್ಟದಲ್ಲಿದೆ. ಟೀಕಿಸುವವರು ರಾಜಕಾರಣಿಗಳಾಗಿದ್ದರೆ ಅವರನ್ನು ಹೆದರಿಸಿ ಬೆದರಿಸಿ ಇಲ್ಲವೇ ಹಣ ಅಥವಾ ಅಧಿಕಾರದ ಆಮಿಷ ತೋರಿಸಿ ಅವರು ದನಿಯೆತ್ತದಂತೆ ಮಾಡಲಾಗುತ್ತದೆ. ಟೀಕಾಕಾರರು ವಿಶ್ವವಿಖ್ಯಾತರಾಗಿದ್ದರೆ ಅಂಥವರ ಚಾರಿತ್ರ್ಯವಧೆಗೆ ಪ್ರಯತ್ನ ನಡೆಯುತ್ತದೆ.

ಶ್ರೇಷ್ಠ ಅರ್ಥಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರ ವಿರುದ್ಧವೂ ಈಗ ಇಂತಹದೇ ಹುನ್ನಾರವೊಂದು ನಡೆದಿದೆಯೆಂಬಂತೆ ಭಾಸವಾಗುತ್ತಿದೆ. ಅವರ ವಿರುದ್ಧ ಶಾಂತಿನಿಕೇತನದ ಜಾಗ ಒತ್ತುವರಿ ಆರೋಪವನ್ನು ಹೊರಿಸಲಾಗಿದೆ. ಅಷ್ಟು ಮಾತ್ರವಲ್ಲ, ಅವರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿದ್ದೇ ಸುಳ್ಳು ಎನ್ನುವಲ್ಲಿಯವರೆಗೆ ಈಗ ಮಾತನಾಡಲಾಗುತ್ತಿದೆ.

ತೀರಾ ಈಚೆಗೆ ಅಮರ್ತ್ಯ ಸೇನ್ ಅವರು ‘‘ಪ್ರಧಾನಿಯಾಗಲು ಮಮತಾ ಬ್ಯಾನರ್ಜಿ ಅವರಿಗೆ ಎಲ್ಲಾ ಅರ್ಹತೆ ಇದೆ, ಆದರೆ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಸಾಮರ್ಥ್ಯ ಅವರಿಗಿಲ್ಲ. ಪ್ರತಿಪಕ್ಷಗಳನ್ನು ಒಡೆಯಲು ಮಮತಾ ಅವರನ್ನು ಮೋದಿ ಬಳಸಿಕೊಳ್ಳುತ್ತಿದ್ದಾರೆ’’ ಎಂದಿದ್ದರು. ಇದೇ ಹೊತ್ತಲ್ಲಿಯೇ, ‘‘ಮೋದಿ ಸರಕಾರ ವಿಶ್ವದಲ್ಲೇ ಅತ್ಯಂತ ಭಯಾನಕ ಸರಕಾರವಾಗಿದೆ’’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಕಳೆದ ವರ್ಷ ಜುಲೈನಲ್ಲಿ ಸೇನ್ ಅವರು ‘‘ಭಯ ಹುಟ್ಟಿಸುವಂತಹ ವಾತಾವರಣ ದೇಶದಲ್ಲಿದೆ. ಧಾರ್ಮಿಕ ನೆಲೆಯಲ್ಲಿ ಮತ್ತೊಮ್ಮೆ ದೇಶ ವಿಭಜನೆಯಾಗಲು ಅವಕಾಶ ಕೊಡಬಾರದು’’ ಎಂದು, ಮೋದಿ ಸರಕಾರದ ನಡೆಯನ್ನು ಸ್ಪಷ್ಟವಾಗಿಯೇ ಟೀಕಿಸಿದ್ದರು. ಇತಿಹಾಸವನ್ನು ಬದಲಿಸಲು ಮತ್ತು ಮುಸ್ಲಿಮ್ ಪ್ರಭಾವವನ್ನು ತೆಗೆದುಹಾಕಲು ಯತ್ನಿಸಿದರೂ ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದರು. ದೇಶದಲ್ಲಿ ಕೋವಿಡ್ ತೀವ್ರ ಏರಿಕೆ ಸಂದರ್ಭದಲ್ಲಿ 2021ರಲ್ಲಿ ಪ್ರತಿಕ್ರಿಯಿಸಿದ್ದ ಅಮರ್ತ್ಯ ಸೇನ್, ‘‘ಗೊಂದಲಗೊಂಡಿರುವ ಸರಕಾರ ಕೋವಿಡ್ ಹರಡುವಿಕೆ ನಿರ್ಬಂಧಿಸುವ ಕೆಲಸದ ಬದಲು ತನ್ನ ಕಾರ್ಯಗಳಿಗೆ ಕ್ರೆಡಿಟ್ ತೆಗೆದುಕೊಳ್ಳುವತ್ತ ಗಮನಹರಿಸಿತು’’ ಎಂದು ಟೀಕಿಸಿದ್ದರು. ಇದೆಲ್ಲದಕ್ಕೂ ಮೊದಲು, ‘‘ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ, ಮೋದಿ ಪ್ರಧಾನಿಯಾಗುವುದನ್ನು ನೋಡಬಯಸುವುದಿಲ್ಲ’’ ಎಂದಿದ್ದರು ಅಮರ್ತ್ಯ ಸೇನ್. ಇವೆಲ್ಲದರ ವಿರುದ್ಧ ಯಾವಾಗ ಉತ್ತರ ಕೊಡುವುದು ಎಂದೇ ಎದುರು ನೋಡುತ್ತಿದ್ದವರು ಈಗ ಒಂದು ಕಾರಣ ಹುಡುಕಿದ್ದಾರೆ ಎನ್ನುತ್ತಿದ್ದಾರೆ ದೇಶದ ಚಿಂತಕರು. ಅದು ಅವರು ಶಾಂತಿನಿಕೇತನದ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು. ಜಾಗ ಮರಳಿಸಿ ಎಂದು ವಿವಿ ಆಡಳಿತ ಮಂಡಳಿ ಅವರ ಬೆನ್ನುಬಿದ್ದಿದೆ.

ಆದರೆ, ಅಮರ್ತ್ಯ ಸೇನ್ ಅವರ ಎಸ್ಟೇಟ್ ಅವರಿಗೆ ಅಜ್ಜನಿಂದ ಬಂದಿರುವುದಾಗಿ ಹೇಳುತ್ತಿದ್ದಾರೆೆ. ರವೀಂದ್ರನಾಥ್ ಟಾಗೋರರು ವಿಶ್ವಭಾರತಿ ವಿವಿಯನ್ನು ಸ್ಥಾಪಿಸಿದಾಗ ಅವರೊಂದಿಗೆ ಕೈಜೋಡಿಸಿದ್ದವರು ಕ್ಷಿತಿಮೋಹನ್ ಸೇನ್. ಅವರು ಅಮರ್ತ್ಯ ಸೇನರ ಅಜ್ಜ. ಅಂದರೆ ತಾಯಿಯ ತಂದೆ. ವಿಶ್ವಭಾರತಿ ವಿವಿ ಸಂಸ್ಥಾಪಕರಲ್ಲಿ ಒಬ್ಬರು ಎಂದೇ ಅವರನ್ನು ಗುರುತಿಸಲಾಗುತ್ತದೆ. 1952ರಲ್ಲಿ ಟಾಗೋರ್ ಅವರು ತಮ್ಮ ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪಿಸಿದ ‘ದೇಶಿಕೋತ್ತಮ’ ಎಂಬ ಗೌರವ ಡಾಕ್ಟರೇಟ್ ಪದವಿಯನ್ನು ಕ್ಷಿತಿಮೋಹನ್ ಸೇನ್‌ರಿಗೆ ನೀಡಿ ಗೌರವಿಸಿದ್ದಾರೆ.

ಇಂದಿನ ಶಾಂತಿನಿಕೇತನದಲ್ಲಿ ರವೀಂದ್ರನಾಥ ಟಾಗೋರ್ ನಿವಾಸವಿರುವ ರಸ್ತೆಯ ಕೊನೆಯಲ್ಲಿ ‘ಸೇನ್ ಹೌಸ್’ ಎಂಬ ಹೆಸರಿನ ಕ್ಷಿತಿಮೋಹನ್ ಸೇನ್‌ರ ನಿವಾಸವಿದೆ. ವಿವಿ ನಿಯಮಾವಳಿ ಪ್ರಕಾರ 99 ವರ್ಷಗಳ ಗುತ್ತಿಗೆ ಆಧಾರದ ಮೇಲೆ ವಸತಿ ನಿರ್ಮಾಣಕ್ಕೆ ನೀಡಲಾಗಿರುವ ಭೂಮಿ ಅದು. ತಮ್ಮ ತಾಯಿ ಕೂಡ ಕೊನೆಯವರೆಗೂ ಇದೇ ನಿವಾಸದಲ್ಲಿ ಇದ್ದುದರಿಂದ ಅಮರ್ತ್ಯ ಸೇನರಿಗೆ ಈ ಮನೆಯ ಮೇಲೆ ಪ್ರೀತಿ. ಈಗ ವಿವಿಯ ಅರ್ಥಶಾಸ್ತ್ರ ಅಧ್ಯಯನ ಕೇಂದ್ರವಾಗಿರುವ ಈ ನಿವಾಸದಲ್ಲಿ ಭಾರತಕ್ಕೆ ಬಂದಾಗೆಲ್ಲ ಉಳಿದುಕೊಳ್ಳುತ್ತಾರೆ ಸೇನ್.

ಆದರೆ, ಅವರು ಹೆಚ್ಚುವರಿಯಾಗಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಅವರು ಎದೆಗುಂದುವಂತೆ ಮಾಡುವ ಕೆಲಸವೊಂದು ಈಗ ನಡೆದಿದೆ ಎನ್ನುವುದು ಅವರ ಅಭಿಮಾನಿಗಳ ಆರೋಪ. ಅವರಿಂದ ಅಕ್ರಮ ಭೂ ಒತ್ತುವರಿಯಾಗಿದೆ ಎಂದು ವಿವಿ ಆಡಳಿತ ಮಂಡಳಿ ಆರೋಪಿಸಿದೆ. ವಿಶ್ವಭಾರತಿ ಉಪಕುಲಪತಿ ವಿದ್ಯುತ್ ಚಕ್ರವರ್ತಿ ಕೂಡ ಇದನ್ನೇ ಮತ್ತೆ ಹೇಳಿದ್ದು, ‘‘ಹಿಂದೆಯೂ ಅವರಿಗೆ ಈ ವಿಚಾರವಾಗಿ ಬರೆದಿದ್ದೆವು. ಆದರೆ ವಿಶ್ವವಿದ್ಯಾನಿಲಯದ ಭೂಮಿ ಹಿಂಪಡೆಯವುದು ನನ್ನ ಜವಾಬ್ದಾರಿ’’ ಎಂದಿದ್ದಾರೆ.

ಅಷ್ಟಕ್ಕೇ ನಿಲ್ಲದೆ ಅವರು, ‘‘ಅಮರ್ತ್ಯ ಸೇನ್ ಅವರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿಲ್ಲ. ನೊಬೆಲ್ ಪ್ರಶಸ್ತಿ ವಿಜೇತ’’ ಎಂದು ಅವರು ಹೇಳಿಕೊಳ್ಳುತ್ತಾರೆ ಎಂದಿದ್ದಾರೆ.

ವಿವಿ ಆಡಳಿತ ಮಂಡಳಿ ತಮ್ಮ ವಿರುದ್ಧ ಇಂಥ ಅಕ್ರಮದ ಆರೋಪ ಹೊರಿಸಿರುವುದರ ಹಿಂದಿನ ರಾಜಕೀಯ ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಸೇನ್. 2020ರಿಂದ ಶುರುವಾಗಿರುವ ಈ ಕಿರುಕುಳ ಈಗ ತೀವ್ರ ಸ್ವರೂಪ ಪಡೆದಿದ್ದು, ಹೆಚ್ಚುವರಿ ಜಾಗವನ್ನು ಶೀಘ್ರ ಮರಳಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ವಿವಿ ಆರೋಪದಲ್ಲಿ ಯಾವುದೇ ವಿವೇಚನೆ ಕಾಣುತ್ತಿಲ್ಲ ಎಂದಿರುವ ಸೇನ್ ಪ್ರಶ್ನೆಯೇನೆಂದರೆ, ತನ್ನನ್ನು ಹೊರಹಾಕಲು ವಿಶ್ವಭಾರತಿ ವಿಶ್ವವಿದ್ಯಾನಿಲಯ ಪ್ರಯತ್ನಿಸುತ್ತಿರುವುದಾದರೂ ಏಕೆ ಎಂಬುದು.

ಮಹಿಳೆಯರು ಮತ್ತು ಮಕ್ಕಳ ಒಳಿತಿಗಾಗಿ ತಮ್ಮ ಪ್ರಾಚಿ ಟ್ರಸ್ಟ್ ಮೂಲಕ ಲಕ್ಷಾಂತರ ಖರ್ಚು ಮಾಡುತ್ತಿರುವ ಸೇನ್ ತಾವೇ ಕಟ್ಟಿದ್ದ ವಿವಿಯಲ್ಲಿನ ತುಂಡು ಭೂಮಿಗೆ ಅಸೆಪಡಬಲ್ಲರೇ ಎಂಬ ಒಂದು ಪ್ರಶ್ನೆಯನ್ನೂ ತಮಗೆ ತಾವೇ ಕೇಳಿಕೊಳ್ಳದ ಮಾಧ್ಯಮಗಳು, ಅವರ ವಿರುದ್ಧದ ಆರೋಪವನ್ನು ದೊಡ್ಡ ಜಾಗ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ.

Similar News