ಮೈತ್ರಿಕೂಟದ ಪೋಸ್ಟರ್ ನಿಂದ ಬಿಜೆಪಿ ನಾಯಕರ ಚಿತ್ರ ಕೈಬಿಟ್ಟು ಸ್ಪಷ್ಟ ಸಂದೇಶ ನೀಡಿದ ಎಐಎಡಿಎಂಕೆ

Update: 2023-02-02 08:42 GMT

ಚೆನ್ನೈ: ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಡಪ್ಪಾಡಿ ಕೆ. ಪಳನಿಸಾಮಿ (ಇಪಿಎಸ್) (Edappadi K Palanisami) ನೇತೃತ್ವದ ಎಐಎಡಿಎಂಕೆ ಹಾಗೂ  ಅದರ ಮಿತ್ರಪಕ್ಷ ಬಿಜೆಪಿ ನಡುವೆ ಹೆಚ್ಚುತ್ತಿರುವ ಘರ್ಷಣೆಯ ಸ್ಪಷ್ಟ ಸೂಚನೆಯೊಂದು ಲಭಿಸಿದೆ. ಎಐಎಡಿಎಂಕೆ ಪಕ್ಷವು  ಈರೋಡ್ ಪೂರ್ವ ವಿಧಾನಸಭೆಗೆ ಉಪಚುನಾವಣೆಯ ಕೆಲವೇ ದಿನಗಳ ಮೊದಲು  ತನ್ನ ಮಿತ್ರ ಪಕ್ಷವಾದ ಬಿಜೆಪಿಯನ್ನು ಸದ್ದಿಲ್ಲದೆ ಪೋಸ್ಟರ್ ನಿಂದ ಹೊರ ಹಾಕಿತು. ಫೆಬ್ರವರಿ 27ಕ್ಕೆ  ಉಪ ಚುನಾವಣೆ  ನಿಗದಿಯಾಗಿದೆ.

ಬುಧವಾರ ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ಹಾಕಲಾದ ಪೋಸ್ಟರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಯಾವುದೇ ಚಿತ್ರಗಳಿರಲಿಲ್ಲ. ಮೈತ್ರಿಕೂಟದ ಹೆಸರನ್ನು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ)ಬದಲು  'ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಅಲೈಯನ್ಸ್' (ಎನ್ಡಿಪಿಎ) ಎಂದು ಬದಲಾಯಿಸಲಾಗಿತ್ತು.  ಆದರೆ, ಕೆಲವೇ ಗಂಟೆಗಳ ನಂತರ  ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ , "ಸೂಕ್ತ ಉತ್ತರ ನೀಡಲಾಗುವುದು.  ಮೈತ್ರಿಯ ಹೆಸರನ್ನು ಮರುಸ್ಥಾಪಿಸಲಾಗಿದೆ'' ಎಂದರು.

"ಪಳನಿಸ್ವಾಮಿ ಅವರು ಬಿಜೆಪಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದಾರೆ.  ಆ ಪಕ್ಷ  ತಮಿಳುನಾಡಿನಲ್ಲಿ ತನ್ನ ಸ್ಥಾನವನ್ನು ತಿಳಿದುಕೊಳ್ಳಬೇಕು" ಎಂದು ಹೆಸರು ಹೇಳಲಿಚ್ಛಿಸದ ಎಐಎಡಿಎಂಕೆ ನಾಯಕರೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಜಯಲಲಿತಾ ನಿಧನದ ನಂತರ ಪಳನಿಸ್ವಾಮಿ ಹಾಗೂ ಒ.ಪನ್ನೀರ್ ಸೆಲ್ವಂ ನಡುವೆ ನಾಯಕತ್ವದ ಕಿತ್ತಾಟದ ಲಾಭ ಪಡೆಯಲು 234 ಸದಸ್ಯ ಬಲದ ವಿಧಾನಸಭೆಯಲ್ಲಿ ನಾಲ್ವರು ಶಾಸಕರೊಂದಿಗೆ ರಾಜ್ಯದಲ್ಲಿ ಅಲ್ಪ ಅಸ್ತಿತ್ವವನ್ನು ಹೊಂದಿರುವ ಬಿಜೆಪಿ, ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷ ಎಂದು ಬಿಂಬಿಸಿಕೊಳ್ಳಲು ಆರಂಭಿಸಿದ ನಂತರ ಎನ್ ಡಿಎ ಮೈತ್ರಿಯಲ್ಲಿ ಸಮಸ್ಯೆ ಉಂಟಾಗಿದೆ.  

Similar News