ಗೆಳೆಯನನ್ನು ಕೊಂದು ಮೃತದೇಹ ಎಸೆಯಲು ಹೋದಾತ ಕಂದಕಕ್ಕೆ ಬಿದ್ದು ಸಾವು

Update: 2023-02-03 14:46 GMT

ಮುಂಬೈ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕೊಲೆ ಮಾಡಿ ಶವ ವಿಲೇವಾರಿ ಮಾಡುವಾಗ ಕಂದಕಕ್ಕೆ ಬಿದ್ದು ಪ್ರಾಣ ಬಿಟ್ಟಿದ್ದಾನೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಡ್‌ನ ನಿವಾಸಿ ಭೌಸೋ ಮಾನೆ ಎಂಬಾತ ತನ್ನ ಸ್ನೇಹಿತನ ಶವವನ್ನು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿರುವಾಗ ಅಂಬೋಲಿ ಘಾಟ್‌ನಲ್ಲಿ ಕಡಿದಾದ ಬೆಟ್ಟದ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾನೆ.

ಪೊಲೀಸರ ಪ್ರಕಾರ, ಮೃತ ದೇಹವನ್ನು ಎಸೆಯಲು ಸಹಾಯ ಮಾಡಿದ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಸಹ ಆರೋಪಿಯನ್ನು ತುಷಾರ್ ಪವಾರ್ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯನ್ನು ಕರಾಡ ನಿವಾಸಿ ಸುಶಾಂತ್ ಖಿಲ್ಲರೆ ಎಂದು ಗುರುತಿಸಲಾಗಿದೆ.

ರವಿವಾರ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೂವರ ನಡುವೆ ಜಗಳವಾಗಿತ್ತು. ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಆ ಶವವನ್ನು ಅಂಬೋಲಿ ಘಾಟ್‌ನಲ್ಲಿ ಎಸೆಯಲು ಆರೋಪಿಗಳು ನಿರ್ಧರಿಸಿದ್ದಾರೆ. ಆ ಶವವನ್ನು ಎಸೆಯುವಾಗ, ಮಾನೆ ತನ್ನ ಸಮತೋಲನವನ್ನು ಕಳೆದುಕೊಂಡು ಶವದ ಜೊತೆಗೆ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಘಟನೆಯ ಬಳಿಕ ಗಾಬರಿ ಬಿದ್ದ ಪವಾರ್ ಅವರು ತನ್ನ ಅಪರಾಧವನ್ನು ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿ ಬಳಿಕ ನಾಪತ್ತೆಯಾಗಿದ್ದಾರೆ.  ಸ್ಥಳೀಯರೊಬ್ಬರು ಮೃತದೇಹವನ್ನು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪರಿಶೀಲನೆಗೆ ಬಂದ ಪೊಲೀಸರಿಗೆ 10 ಅಡಿ ಅಂತರದಲ್ಲಿ ಶವಗಳು ಪತ್ತೆಯಾಗಿವೆ.

Similar News