ನಾವು ಸ್ಪಷ್ಟ ಆದೇಶ ನೀಡಿದ್ದರೂ, ದ್ವೇಷ ಭಾಷಣದ ವಿರುದ್ಧ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ: ಸುಪ್ರೀಂ ಕೋರ್ಟ್ ಅಸಮಾಧಾನ
ಹೊಸದಿಲ್ಲಿ: ನ್ಯಾಯಾಲಯ ಹಲವು ಆದೇಶಗಳನ್ನು ನೀಡಿದ್ದರೂ ಯಾರೂ ದ್ವೇಷ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಫೆಬ್ರವರಿ 5 ರಂದು ಮುಂಬೈನಲ್ಲಿ ನಡೆಯಲಿರುವ ಹಿಂದೂ ಜನ ಆಕ್ರೋಶ ಮೋರ್ಚಾದ ವಿರುದ್ಧ ತುರ್ತು ವಿಚಾರಣೆಯನ್ನು ನಡೆಸುವಂತೆ ಮಾಡಿದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಕೆ .ಎಂ. ಜೋಸೆಫ್, ಅನಿರುದ್ಧ ಬೋಸ್ ಮತ್ತು ಹೃಷಿಕೇಶ್ ರಾಯ್ ಅವರ ಪೀಠವು, "ಈ ವಿಷಯದಲ್ಲಿ ನಾವು ನಿಮ್ಮೊಂದಿಗಿದ್ದೇವೆ, ಆದರೆ ಪ್ರತಿ ಬಾರಿ ರ್ಯಾಲಿ ನಡೆಯುವಾಗ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಸಾಧ್ಯವಿಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಾವು ಈಗಾಗಲೇ ಸಾಕಷ್ಟು ಸ್ಪಷ್ಟವಾದ ಆದೇಶವನ್ನು ರವಾನಿಸಿದ್ದೇವೆ. ದೇಶದಾದ್ಯಂತ ನಡೆಯುವ ರ್ಯಾಲಿಗಳನ್ನು ಊಹಿಸಿಕೊಳ್ಳಿ. ಪ್ರತಿ ಬಾರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗುತ್ತದೆ. ಅದು ಹೇಗೆ ಕಾರ್ಯಸಾಧ್ಯವಾಗಬಲ್ಲದು?” ಎಂದು ಕೇಳಿದೆ.
ಜನವರಿ 29 ರಂದು ನಗರದಲ್ಲಿ ನಡೆದ ಇದೇ ರೀತಿಯ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಮತ್ತು ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು ಎಂದು ವಕೀಲರು ನ್ಯಾಯಾಲಯದ ಗಮನ ಸೆಳೆದರು.
“ನೀವು ಪದೇ ಪದೇ ಮನವಿ ಮಾಡುವ ಮೂಲಕ ನಮ್ಮನ್ನು ಮತ್ತೆ ಮತ್ತೆ ಮುಜುಗರಕ್ಕೊಳಗಾಗುವಂತೆ ಮಾಡುತ್ತಿದ್ದೀರಿ. ನಾವು ಹಲವು ಆದೇಶಗಳನ್ನು ನೀಡಿದ್ದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಈವೆಂಟ್-ಟು-ಈವೆಂಟ್ ಆಧಾರದ ಮೇಲೆ ಆದೇಶವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಅನ್ನು ಕೇಳಬಾರದು” ಎಂದು ಪೀಠವು ಹೇಳಿದೆ.
ಇದನ್ನೂ ಓದಿ: ಜಪ್ಪಿನಮೊಗರು: ಗ್ಯಾರೇಜ್ನಲ್ಲಿ ಬೆಂಕಿ ಆಕಸ್ಮಿಕ; ಬಸ್ ಸಹಿತ ಕೆಲವು ವಾಹನಗಳು ಬೆಂಕಿಗೆ ಆಹುತಿ