ಇಹ್ಸಾನ್ ಫೌಂಡೇಶನ್ ವತಿಯಿಂದ ಸರಳ ವಿವಾಹ ಕಾರ್ಯಕ್ರಮ

Update: 2023-02-03 18:15 GMT

ಪುತ್ತೂರು: ಕಳೆದ 5 ವರ್ಷಗಳಿಂದ ಪುತ್ತೂರು ತಾಲೂಕಿನಲ್ಲಿ ಇಹ್ಸಾನ್ ಫೌಂಡೇಶನ್(ರಿ)  ನಡೆಸಿಕೊಂಡು ಬರುತ್ತಿರುವ “ಸಾಂತ್ವಾನ ಜಾಗೃತಿ ಸರಳ ವಿವಾಹ ಕಾರ್ಯಕ್ರಮ” ಈ ಬಾರಿ ಬದ್ರಿಯಾ ಜುಮಾ ಮಸ್ಜಿದ್ ಕೆಮ್ಮಾಯಿಯಲ್ಲಿ ಇತ್ತೀಚೆಗೆ ನಡೆಯಿತು. 

ಸೈಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರ ಗೌರವಾಧ್ಯಕ್ಷತೆಯಲ್ಲಿ ನಿಖಾಹ್ ನಡೆಸಿ ನಂತರ ದುಆ ನೆರವೇರಿಸಿದರು. ದುಆ ನೆರವೇರಿಸಿ ನಂತರ ಮಾತನಾಡಿದ ತಂಙಳ್, "ಇಹ್ಸಾನ್ ಫೌಂಡೇಶನ್ ಕಳೆದ 5 ವರ್ಷಗಳಿಂದ ನಡೆಸುತ್ತಿರುವ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದ ಬೆನ್ನೆಲುಬು ದಾನಿಗಳಾಗಿದ್ದಾರೆ. ಮುಂದೆಯೂ ಈ ಕಾರ್ಯಕ್ಕೆ ಹೆಚ್ಚಿನ ನೆರವನ್ನು ನೀಡಿ ಸಹಕರಿಸಬೇಕು" ಎಂದು ಹೇಳಿದರು. 

ಉದ್ಘಾಟನಾ ಭಾಷಣ ಮಾಡಿದ ಕೆಮ್ಮಾಯಿ ಖತೀಬರಾದ ಇರ್ಷಾದ್ ಸಖಾಫಿ ಉಸ್ತಾದ್, "ಇಹ್ಸಾನ್ ಫೌಂಡೇಶನ್ ಕಳೆದ 5 ವರ್ಷಗಳಲ್ಲಿ 27 ಜೋಡಿ ಸಾಮೂಹಿಕ ವಿವಾಹ ಕಾರ್ಯ ಮಾಡಿದೆ. ಅದಲ್ಲದೆ ಬಹಳ ಸರಳವಾಗಿ ಪ್ರತಿವರ್ಷ ಒಂದೊಂದು ಮಸೀದಿಗಳಲ್ಲಿ ಈ ಮದುವೆ ನಡೆಸುತ್ತಿದೆ ಇದೊಂದು ಮಾದರಿ ಯೋಜನೆ ಎಂದು ಶ್ಲಾಘಿಸಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಕೂರ್ನಡ್ಕ ಖತೀಬರಾದ V.M ಉನೈಸ್ ಫೈಝಿ ಉಸ್ತಾದ್, "ಸತ್ಯವಿಶ್ವಾಸಿಯ ಮನಸ್ಸನ್ನು ಸಂತೋಷ ಗೊಳಿಸುವುದಾಗಿದೆ ಸತ್ಕಾರ್ಯಗಳಲ್ಲಿ ಶ್ರೇಷ್ಠವಾದ ಸತ್ಕರ್ಮ ಎಂದು ಹೇಳಿದರು.       

ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಎ.ಕೆ‌. ಬಷೀರ್ ಹಾಜಿ ಮಾತನಾಡಿ, ಇಹ್ಸಾನ್ ಫೌಂಡೇಶನ್ ಮಾಡುತ್ತಿರುವ ಈ ಕಾರ್ಯ ಮಹತ್ತರವಾದದ್ದು, ಇನ್ನು ಮುಂದೆಯೂ ನಮ್ಮ ಜಮಾಅತ್ ಇಂತಹ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.

ಈ ಸಾಮೂಹಿಕ ಮದುವೆ ಕಾರ್ಯಕ್ಕೆ ಸಂಪೂರ್ಣ ಸಹಕಾರ, ಊಟದ ವ್ಯವಸ್ಥೆ, ಸ್ವಯಂ ಸೇವಕರು  ಹೀಗೆ ಎಲ್ಲಾ ರೀತಿಯಲ್ಲಿ ನೆರವಾದ ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿ ಆಡಳಿತ ಕಮಿಟಿ ಮತ್ತು ಖಿದ್ಮತುಲ್ ಇಸ್ಲಾಮ್ ಯಂಗ್ಮೆನ್ಸ್  ಅಸೋಸಿಯೇಷನ್ ಕಾರ್ಯವನ್ನು ಇಹ್ಸಾನ್ ಫೌಂಡೇಶನ್ ಅಧ್ಯಕ್ಷ ಹಮೀದ್ ಸೋಂಪಾಡಿ ಕೃತಜ್ಞತೆ ಸಲ್ಲಿಸಿದರು. 

ಊಟೋಪಚಾರ ಮತ್ತಿತರ ಉಸ್ತುವಾರಿಯನ್ನು ಜಮಾತ್ ಕಮೀಟಿಯ ಲತೀಫ್ ಹಾಜಿ, ಹಸನ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ ಅರಮನೆ, ಮಸ್ತಾಮ್ ಉಮ್ಮರ್ ಹಾಜಿ, ಅಶ್ರಫ್ ಹಾಜಿ, ಯಂಗ್ ಮೆನ್ಸ್ ಅಧ್ಯಕ್ಷ ಇಸ್ಮಾಯಿಲ್ ಕೆಮ್ಮಾಯಿ, ಅಝೀಜ್ ಟೋಪ್ಕೋ, ಸಂಶುದ್ದೀನ್, ಹಕೀಂ ಡಿ.ಕೆ. ವಹಿಸಿದ್ದರು. ಮಹಿಳೆಯರ ಭಾಗದಲ್ಲಿ ಕೆಮ್ಮಾಯಿ ಮದ್ರಸ ವಿದ್ಯಾರ್ಥಿನಿಯರು ಸ್ವಯಂ ಸೇವಕರಾಗಿ ಸಹಕರಿಸಿದರು. ಇಹ್ಸಾನ್ ಫೌಂಡೇಶನ್ ನ ಪಿ.ಬಿ. ಅಬ್ದುಲ್ಲಾ ಹಾಜಿ, ಆರಿಫ್ ಸಾಲ್ಮರ, ರಝಾಕ್ R.P, ಸಿರಾಜುದ್ದೀನ್ ಹಾಜಿ, ಹಂಝಾ ಹಾಜಿ ಚೊಯ್ಸ್, ಡಾಃ ಸರ್ಫ್ರಾಜ್ ಇಸ್ಮಾಯಿಲ್, ಶಾಫಿ ಹಾಜಿ, ಶಮೀರ್, ಶುಕೂರ್, ಇಕ್ಬಾಲ್ ಸ್ವಾಗತಿಸಿ, ಹನೀಫ್ ಹಾಜಿ ಉದಯ ಮತ್ತು ಇಮ್ತಿಯಾಝ್ ಪಾರ್ಲೆ ಕಾರ್ಯಕ್ರಮ ನಿರೂಪಿಸಿದರು.

Similar News