ಸರಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲು: ಎಸ್.ವಿ. ನಾಗರಾಜ್

ಉಚಿತ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳಹಕ್ಕು ಕಾಯಿದೆ ಮಾಹಿತಿ ಕಾರ್ಯಾಗಾರ

Update: 2023-02-06 11:42 GMT

ಕುಂದಾಪುರ: ಶಿಕ್ಷಣದ ವ್ಯಾಪಾರೀಕರಣ, ಆಂಗ್ಲ ಭಾಷಾ ವ್ಯಾಮೋಹ, ಖಾಸಗಿ ಶಾಲೆಗಳ ಆಟಾಟೋಪ ಹಾಗೂ ನಮ್ಮನ್ನಾಳುವ ಜನಪ್ರತಿನಿಧಿಗಳ ಬದ್ಧತೆಯ ಕೊರತೆಯಿಂದಾಗಿ ಸರ್ವಧರ್ಮದ ದೇಗುಲ, ಸಂವಿಧಾನದ ತೊಟ್ಟಿಲಾಗಿರುವ ಸರಕಾರಿ ಶಾಲೆಗಳು ಸೊರಗುತ್ತಿವೆ. ನಾವೆಲ್ಲರೂ ಎಚ್ಚೆತ್ತು ಕೊಂಡು ಒಗ್ಗಟ್ಟಿನ ಹೋರಾಟ ನಡೆಸಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅನಿವಾರ್ತೆ ಇದೆ ಎಂದು ಎಸ್.ಡಿ.ಎಂ.ಸಿ.ಸಿ.ಎಫ್ ಕುಂದಾಪುರ ವಲಯದ ತಾಲೂಕು ಅಧ್ಯಕ್ಷ ಎಸ್.ವಿ.ನಾಗರಾಜ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ, ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳ ತಾಲೂಕು ಸಮಿತಿ ಹಾಗೂ ಕುಂದಾಪುರ ರೋಟರಿ ಕ್ಲಬ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ, ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ ಇವುಗಳ ಸಹಯೋಗದಲ್ಲಿ ಸೋಮವಾರ ಕುಂದಾಪುರ ರೋಟರಿ ಭವನದಲ್ಲಿ ’ಸರಕಾರಿ ಶಾಲೆ ಉಳಿಯಲಿ ಬೆಳೆಯಲಿ- ನೆರೆಹೊರೆಯ ಸಮಾನ ಶಾಲೆಯಾಗಲಿ’ ಧ್ಯೇವವಾಕ್ಯದೊಂದಿಗೆ ಆಯೋಜಿಸ ಲಾದ ’ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009’ ಮಾಹಿತಿ ಕಾರ್ಯಗಾರದಲ್ಲಿ ಅವರು ಮಾತನಾಡುತ್ತಿದ್ದರು.

ಕರ್ನಾಟಕ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿನ 47 ಸಾವಿರ ಸರಕಾರಿ ಶಾಲೆಗಳಲ್ಲಿ 8.5 ಲಕ್ಷ ಹಾಗೂ ಉಡುಪಿ ಜಿಲ್ಲೆಯ 5 ಶೈಕ್ಷಣಿಕ ವಲಯದಲ್ಲಿನ 680ಕ್ಕೂ ಅಧಿಕ ಸರಕಾರಿ ಶಾಲೆಗಳಲ್ಲಿ 11,500 ಎಸ್‌ಡಿಎಂಸಿ ಸದಸ್ಯರಿದ್ದು ಒಂದೇ ದಿನ ಬೀದಿಗಿಳಿದು ಹೋರಾಟ ಮಾಡಿದರೆ ನಮ್ಮನ್ನಾಳುವ ಜನಪ್ರತಿನಿಧಿ ಗಳ ಹಾಗೂ ಸರಕಾರದ ಕಥೆ ಏನಾಗಬಹುದೆಂದು ಆಲೋಚಿಸಲಿ ಎಂದರು.

ಪ್ರಜಾಪ್ರಭುತ್ವ ಮಾದರಿಯಲ್ಲಿ ಎಸ್‌ಡಿಎಂಸಿ ಸದಸ್ಯರು ಆಯ್ಕೆಯಾಗಿದ್ದು ಆರ್.ಟಿ.ಇ ಕಾಯ್ದೆಯಡಿ ಕಾನೂನು ಬಲ ಕೂಡ ಹೊಂದಿದೆ. ನಾವು ಸರಕಾರಿ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಸಿದ್ದರಿದ್ದೇವೆ. ಜಾತಿ ರಹಿತ, ರಾಜಕೀಯ ಹಾಗೂ ಸ್ವಹಿತಾಸಕ್ತಿ ರಹಿತವಾಗಿ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಕೆಲಸ ಮಾಡುತ್ತಿದ್ದು ಯಾವುದೇ ಆರ್ಥಿಕ ವಹಿವಾಟು ನಡೆಸದೆ ಸಂಪಾದನೆ ಒಂದು ಭಾಗವನ್ನು ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಮೀಸಲಿಟ್ಟಿದ್ದೇವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಯಮಿ, ಮುಂಬಯಿನ ಎಸ್‌ಒಎಸ್ ಇಂಟರ್ ನ್ಯಾಶನಲ್ ಆಡಳಿತ ನಿರ್ದೇಶಕ ಅಬ್ದುಲ್ ಸಿರಾಜುದ್ದಿನ್ ಭಟ್ಕಳ  ಉದ್ಘಾಟಿಸಿ ದರು. ಸಮನ್ವಯ ವೇದಿಕೆಯ ಮಹಾಪೋಷಕರು ಹಾಗೂ ಅಭಿವೃದ್ಧಿ ಶಿಕ್ಷಣ ತಜ್ಞ ಪ್ರೊ.ಡಾ.ನಿರಂಜನಾರಾಧ್ಯ ವಿ.ಪಿ. ವಿಷಯ ಮಂಡಿಸಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಎಸ್‌ಡಿಎಂಸಿಸಿಎಫ್ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ವಹಿಸಿದ್ದರು.

ಎಸ್‌ಡಿಎಂಸಿಸಿಎಫ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕುಂದಾಪುರ ಪುರಸಭಾ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್, ಕುಂದಾಪುರ ತಾಲೂಕು ಕಾರ್ಯದರ್ಶಿ ಪ್ರಮೋದಾ ಕುಶಲ ಶೆಟ್ಟಿ, ಬ್ರಹ್ಮಾವರ ತಾಲೂಕು ಪ್ರಭಾರ ಕಾರ್ಯದರ್ಶಿ ಆರತಿ ಮೆಲಾಂಟ, ಕುಂದಾಪುರ ಬಿಆರ್‌ಪಿ ಸಂತೋಷ್ ಕುಮಾರ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.

ಎಸ್‌ಡಿಎಂಸಿಸಿಎಫ್ ಬೈಂದೂರು ತಾಲೂಕು ಅಧ್ಯಕ್ಷ ಅವನೀಶ್ ಹೊಳ್ಳ ಸ್ವಾಗತಿಸಿದರು. ಕುಂದಾಪುರ ತಾಲೂಕು ಉಪಾಧ್ಯಕ್ಷ ರಾಜಶೇಖರ್, ಎಸ್‌ಡಿ ಎಂಸಿ ಕುಂಭಾಸಿ ಗ್ರಾಪಂ ಘಟಕಾಧ್ಯಕ್ಷೆ ದೀಪಿಕಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕಾ ಕಾರ್ಯದರ್ಶಿ ಶಶಿ ಬಳ್ಕೂರು ಕಾರ್ಯಕ್ರಮ ನಿರೂಪಿಸಿ ದರು. ರವಿ ಮರವಂತೆ ವಂದಿಸಿದರು.

ಖಾಸಗಿ ಶಾಲೆಗಳಿಗೆ ಪರವಾನಿಗೆ ನೀಡಬಾರದು. ಸರಕಾರಿ ಶಾಲೆಗಳನ್ನು ಮುಚ್ಚುವ ಕಾರ್ಯವಾಗಬಾರದೆಂಬ ಹಕ್ಕೊತ್ತಾಯವನ್ನು ಸರಕಾರದ ಮುಂದೆ ಮಾಡಲಿದ್ದೇವೆ. ಜನಪ್ರತಿನಿಧಿಗಳು ಹಾಗೂ ಸರಕಾರಿ ನೌಕರರ ಮಕ್ಕಳು ಸರಕಾರಿ ಶಾಲೆಗೆ ಬರಬೇಕು. ದುಬಾರಿ ಶುಲ್ಕ ನೀಡಿ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುವ ಪೋಷಕರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವಲ್ಲಿ ಕ್ರಮವಹಿಸಿದರೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವುದರಲ್ಲಿ ಸಂದೇಹವಿಲ್ಲ.
-ಎಸ್.ವಿ.ನಾಗರಾಜ್, ಅಧ್ಯಕ್ಷರು, ಎಸ್‌ಡಿಎಂಸಿಸಿಎಫ್ ಕುಂದಾಪುರ ತಾಲೂಕು

Similar News