ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶೆಯಾಗಿ ಗೌರಿ ಪ್ರಮಾಣ ವಚನ ಸ್ವೀಕಾರ
ಚೆನ್ನೈ: ವಕೀಲೆ ಎಲ್. ವಿಕ್ಟೋರಿಯಾ ಗೌರಿ ಅವರು ಮಂಗಳವಾರ ಮದ್ರಾಸ್ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸುಪ್ರೀಂ ಕೋರ್ಟ್ ಕೊಲಿಜಿಯಂ ಗೌರಿ ಅವರನ್ನು ಹೈಕೋರ್ಟ್ಗೆ ಪದೋನ್ನತಿ ನೀಡಿರುವ ಶಿಫಾರಸನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಮದ್ರಾಸ್ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ. ರಾಜಾ ಅವರು ಪಿ.ಬಿ. ಬಾಲಾಜಿ, ಕಂದಸಾಮಿ ಕುಳಂದೈವೇಲು ರಾಮಕೃಷ್ಣನ್, ರಾಮಚಂದ್ರನ್ ಕಲೈಮತಿ ಮತ್ತು ಕೆ. ಗೋವಿಂದರಾಜನ್ ತಿಲಕವಾಡಿ ಸೇರಿದಂತೆ ನಾಲ್ವರು ವಕೀಲರಿಗೆ ಪ್ರಮಾಣ ವಚನ ಬೋಧಿಸಿದರು.
ಜನವರಿ 17 ರಂದು ಗೌರಿ ಅವರ ನೇಮಕಾತಿಗಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸು ಮಾಡಿದ ನಂತರ ತಮಿಳುನಾಡಿನ ವಕೀಲರ ಒಂದು ವಿಭಾಗದಿಂದ ಪ್ರತಿಭಟನೆ ವ್ಯಕ್ತವಾಯಿತು. ಬಿಜೆಪಿಯೊಂದಿಗಿನ ಗೌರಿ ಅವರ ಹಿಂದಿನ ಒಡನಾಟವನ್ನು ಬೆಟ್ಟು ಮಾಡಿದ ವಕೀಲರ ಗುಂಪು ಗೌರಿ ಅವರು ದ್ವೇಷದ ಭಾಷಣವನ್ನು ಮಾಡಿದ್ದರು ಎಂದು ಆರೋಪಿಸಿದರು.