ಲಡಾಖ್‌ನ ಎಲ್‌ಎಸಿಯಲ್ಲಿ ಯಾವುದೇ ಆಕ್ರಮಣಕ್ಕೆ ಸೂಕ್ತ ಉತ್ತರ ನೀಡುತ್ತೇವೆ:ಲೆ.ಜ.ಉಪೇಂದ್ರ ದ್ವಿವೇದಿ

Update: 2023-02-07 18:13 GMT

ಶ್ರೀನಗರ,ಫೆ.7: ಲಡಾಖ್ ವಿಭಾಗದಲ್ಲಿ ಚೀನಾದ ಯಾವುದೇ ಆಕ್ರಮಣಕ್ಕೆ ಸೂಕ್ತ ಉತ್ತರವನ್ನು ನೀಡಲು ಭಾರತೀಯ ಸೇನೆಯು ಸನ್ನದ್ಧವಾಗಿದೆ ಎಂದು ಸೇನೆಯ ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆ.ಜ.ಉಪೇಂದ್ರ ದ್ವಿವೇದಿ ಅವರು ಮಂಗಳವಾರ ಇಲ್ಲಿ ಹೇಳಿದರು.

ಶ್ರೀನಗರದ ಬಾದಾಮಿಬಾಗ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸುವ ಚೀನಾದ ಪ್ರಯತ್ನಗಳಿಗೆ ಭಾರತೀಯ ಸಶಸ್ತ್ರ ಪಡೆಗಳು ತ್ವರಿತ ,ನಿರ್ಭೀತ ಮತ್ತು ಸಮನ್ವಯದ ಉತ್ತರವನ್ನು ನೀಡಿವೆ ಎಂದು ಹೇಳಿದರು.

ಎಲ್‌ಎಸಿಯಲ್ಲಿನ ಬಿಕ್ಕಟ್ಟನ್ನು ಬಗೆಹರಿಸಲು ರಾಜತಾಂತ್ರಿಕ ಮತ್ತು ಕಾರ್ಯಾಚರಣೆ ಹಂತಗಳಲ್ಲಿ ಕ್ರಮಗಳು ಪ್ರಗತಿಯಲ್ಲಿವೆ ಎಂದ ಅವರು,‘ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಕಟ್ಟುನಿಟ್ಟಿನ ಗಸ್ತು ಕಾರ್ಯ ಹಾಗೂ ತಾಂತ್ರಿಕ ಮಾರ್ಗಗಳ ಮೂಲಕ ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಕಾಯ್ದುಕೊಳ್ಳಲಾಗುತ್ತದೆ ’ಎಂದು ಭರವಸೆ ನೀಡಿದರು.

Similar News