ಯಾವ ಚಮತ್ಕಾರ ಸಂಭವಿಸಿತು?: ಅದಾನಿ ಸಂಪತ್ತಿನ ಅಗಾಧ ಏರಿಕೆ ಬಗ್ಗೆ ರಾಜ್ಯಸಭೆಯಲ್ಲಿ ಖರ್ಗೆ ಉದ್ಗಾರ

Update: 2023-02-08 16:02 GMT

ಹೊಸದಿಲ್ಲಿ, ಫೆ. 8: ನರೇಂದ್ರ ಮೋದಿ ಸರಕಾರವು ಕೈಗಾರಿಕೋದ್ಯಮಿ ಗೌತಮ್ ಅದಾನಿಯೊಂದಿಗೆ ಅಪವಿತ್ರ ಮೈತ್ರಿ ಹೊಂದಿದೆ ಎಂಬ ಆರೋಪಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬುಧವಾರವೂ ಸಂಸತ್ನಲ್ಲಿ ಸರಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಅದಾನಿ ಸಂಪತ್ತಿನಲ್ಲಿ ಆಗಿರುವ ಅಗಾಧ ಏರಿಕೆಯು ಸರಕಾರದಿಂದ ಪಡೆದುಕೊಂಡಿರುವ ಪ್ರಯೋಜನಗಳ ಫಲವೇ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಪ್ರಶ್ನಿಸಿದರು.

‘‘ಪ್ರಧಾನಿ ನರೇಂದ್ರ ಮೋದಿಯ ಅತ್ಯಂತ ಆಪ್ತ ಸ್ನೇಹಿತರಲ್ಲಿ ಒಬ್ಬರ ಸಂಪತ್ತು ಕೇವಲ ಎರಡೂವರೆ ವರ್ಷಗಳಲ್ಲಿ 13 ಪಟ್ಟು ಏರಿದೆ’’ ಎಂದು ಖರ್ಗೆ ಹೇಳಿದರು. ‘‘ಅದಾನಿಯ ಸಂಪತ್ತು 2014ರಲ್ಲಿ 50,000 ಕೋಟಿ ರೂಪಾಯಿ ಆಗಿತ್ತು. 2019ರಲ್ಲಿ ಅದು ಒಂದು ಲಕ್ಷ ಕೋಟಿ ರೂಪಾಯಿಗೆ ಏರಿತು. ಆ ನಂತರದ ಕೇವಲ ಎರಡು ವರ್ಷಗಳಲ್ಲಿ ಅದಾನಿಯ ಸಂಪತ್ತು ಒಮ್ಮೆಲೆ 12 ಲಕ್ಷ ಕೋಟಿ ರೂ.ಗೆ ಏರಿತು. ಏನು ಚಮತ್ಕಾರ ಸಂಭವಿಸಿತು? ಇದು ಸ್ನೇಹದ ಪ್ರತಿಫಲವೇ?’’ ಎಂದು ಖರ್ಗೆ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅದಾನಿ ಗುಂಪಿನ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಆರೋಪಿಸಿದ ಒಂದು ದಿನದ ಬಳಿಕ ಖರ್ಗೆ ಈ ಮಾತುಗಳನ್ನು ಆಡಿದ್ದಾರೆ.

ಅದಾನಿ ಗುಂಪು ಕಾರ್ಪೊರೇಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ವಂಚನೆಯೊಂದನ್ನು ನಡೆಸುತ್ತಿದೆ ಎಂಬುದಾಗಿ ಅಮೆರಿಕದ ಹೂಡಿಕೆ ಮತ್ತು ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ಜನವರಿ 24ರಂದು ಆರೋಪಿಸಿದ ಬಳಿಕ, ಗುಂಪಿನ ಶೇರುಗಳ ವೌಲ್ಯ ಸುಮಾರು ಅರ್ಧದಷ್ಟು ಕುಸಿದಿದೆ. ಅದಾನಿ ಗುಂಪು ದಶಕಗಳಿಂದಲೂ ಶೇರು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ನಡೆಸುತ್ತಾ ಬಂದಿದೆ, ತಪ್ಪು ಲೆಕ್ಕಗಳನ್ನು ಕೊಟ್ಟಿದೆ, ಕಪ್ಪುಹಣ ಬಿಳುಪು ಮಾಡಲು ತೆರಿಗೆರಹಿತ ವಿದೇಶಗಳಲ್ಲಿ ಶೆಲ್ ಕಂಪೆನಿಗಳನ್ನು ಸ್ಥಾಪಿಸಿದೆ ಹಾಗೂ ಶೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗಿರುವ ಕಂಪೆನಿಗಳಿಂದ ಹಣವನ್ನು ಬೇರೆಡೆಗೆ ಸಾಗಿಸಿದೆ ಎಂದು ತನ್ನ ವರದಿಯಲ್ಲಿ ಹಿಂಡನ್ಬರ್ಗ್ ಆರೋಪಿಸಿದೆ.

ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅದಾನಿ ಗುಂಪಿನ ಕಂಪೆನಿಗಳ ವಂಚನೆಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಆದೇಶಿಸುವಂತೆ ಖರ್ಗೆ ಬುಧವಾರ ರಾಜ್ಯಸಭೆಯಲ್ಲಿ ಸಭಾಪತಿ ಜಗದೀಪ್ ಧನ್ಕರ್ರನ್ನು ಒತ್ತಾಯಿಸಿದರು. ‘‘ದ್ವೇಷ ಕಾರದಂತೆ ಪಕ್ಷಿಗರಿಗೆ ಮೋದಿ ಹೇಳುವುದಿಲ್ಲ’’

ದ್ವೇಷ ಕಾರುವ ಮಾತುಗಳ ಮೂಲಕ ವಿಭಜನೆಯನ್ನು ಹರಡುತ್ತಿರುವ ತನ್ನ ಪಕ್ಷದ ಸದಸ್ಯರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಏನೂ ಮಾತನಾಡುವುದಿಲ್ಲ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿರುವ ಖರ್ಗೆ ಹೇಳಿದರು.‘‘ಎಲ್ಲಾ ಕಡೆಗಳಲ್ಲಿ ದ್ವೇಷ ಹರಡಲಾಗುತ್ತಿದೆ. ನಾಗರಿಕರ ಪ್ರತಿನಿಧಿಗಳು ಈ ಕೆಲಸದಲ್ಲಿ ತೊಡಗಿದ್ದಾರೆ’’ ಎಂದು ಖರ್ಗೆ ಹೇಳಿದರು. ‘‘ಅಲ್ಲದಿದ್ದರೆ, ಪ್ರಧಾನಿ ಮೋದಿ ಯಾಕೆ ಸುಮ್ಮನಿದ್ದಾರೆ? ನೀವು ಎಲ್ಲರನ್ನೂ ಬೆದರಿಸುತ್ತೀರಿ. ಹಾಗಾದರೆ ಅವರನ್ನು ಯಾಕೆ ಹೆದರಿಸುವುದಿಲ್ಲ? ನೀವು ಅವರತ್ತ ಒಮ್ಮೆ ಗಮನ ಹರಿಸಿದರೆ, ಟಿಕೆಟ್ ಕೈತಪ್ಪುವ ಭೀತಿಯಿಂದ ಅವರು ಬಾಯಿ ಮುಚ್ಚುತ್ತಾರೆ’’ ಎಂದರು.

Similar News