×
Ad

ಪುತ್ತೂರು BJP ಶಾಸಕರ 'ಅಣಬೆ' ಹೇಳಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ: ಸ್ಪಷ್ಟೀಕರಣಕ್ಕೆ ಕಾರ್ಯಕರ್ತರ ಒತ್ತಾಯ

Update: 2023-02-09 22:16 IST

ಪುತ್ತೂರು: ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಹಿಂದುತ್ವ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ತರಾಟೆಗೈದ ಘಟನೆ ನಗರದ ಬೊಳುವಾರಿನಲ್ಲಿ ಗುರುವಾರ ನಡೆದ ಬಗ್ಗೆ ವರದಿಯಾಗಿದೆ.

ಶಾಸಕ ಸಂಜೀವ ಮಠಂದೂರು ಅವರ ಹೇಳಿಕೆಯೊಂದು ಬಿಜೆಪಿ ಕಾರ್ಯಕರ್ತರು ಮತ್ತು ಪುತ್ತಿಲ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಗಿದ್ದು, ಶಾಸಕ ಸಂಜೀವ ಮಠಂದೂರು ಬುಧವಾರ ಸುದ್ದಿಗೋಷ್ಠಿಯಲ್ಲಿ ಅರುಣ್ ಕುಮಾರ್ ಪುತ್ತಿಲರ ಹೆಸರು ಪ್ರಸ್ತಾಪಿಸದೆ ನೀಡಿದ 'ಮಳೆಗಾಲದ ಅಣಬೆ' ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಶನಿವಾರ ಪುತ್ತೂರಿಗೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸಲಿದ್ದು, ಅದರ ಪ್ರಚಾರಾರ್ಥ ಗುರುವಾರ ಸಂಜೆ ಬಿಜೆಪಿಯಿಂದ ಪುತ್ತೂರು ದರ್ಬೆ ವೃತ್ತದಿಂದ ಪ್ರಚಾರ ಜಾಥಾ ಏರ್ಪಡಿಸಲಾಗಿತ್ತು. ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಜಾಥಾಕ್ಕೆ ಚಾಲನೆ ನೀಡಿದ್ದರು. ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಜತೆಗಿದ್ದು, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತವರ ಬೆಂಬಲಿಗರು ಕೂಡ ಭಾಗವಹಿಸಿದ್ದರು.

ನಗರದ ಮುಖ್ಯ ರಸ್ತೆಯಲ್ಲಿ ಅನ್ಯೋನ್ಯವಾಗಿಯೇ ಇದ್ದ ಕಾರ್ಯಕರ್ತರು ಬೊಳುವಾರು ತಲುಪುತ್ತಲೇ ಕೆರಳಿದರು. ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಶಾಸಕರ ಮುಂದೆ ನಿಂತು, ಬುಧವಾರ ನೀವು ಹೇಳಿದ ಅಣಬೆ ಹೇಳಿಕೆಗೆ ಇನ್ನೂ ಸ್ಪಷ್ಟೀಕರಣ ಕೊಟ್ಟಿಲ್ಲ. ನೀವು ಯಾರನ್ನು ಆ ರೀತಿ ಕರೆದಿದ್ದೀರಿ ಎಂದು ಪ್ರಶ್ನಿಸಿದರು. ಮಠಂದೂರು ಆ ಬಗ್ಗೆ ಸ್ಪಷ್ಟೀಕರಣ ನೀಡಲು ಮುಂದಾಗುತ್ತಿದ್ದಂತೆ ಎರಡೂ ಕಡೆಯ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಶಾಸಕ ಸಂಜೀವ ಮಠಂದೂರು ನಿರ್ಗಮಿಸುತ್ತಿದ್ದಂತೆ, ಪರಿಸರದಲ್ಲಿ ಆತಂಕದ ವಾತಾವರಣ ನೆಲಸಿತ್ತು. ಆಗ ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಬಂದು ಯುವಕರನ್ನು ಸಮಾಧಾನ ಮಾಡಿದರು.

ಬುಧವಾರ ಶಾಸಕ ಸಂಜೀವ ಮಠಂದೂರು ಸುದ್ದಿಗೋಷ್ಠಿ ಕರೆದಿದ್ದು, ಸಿದ್ಧತೆಗಳ ಬಗ್ಗೆ ವಿವರಿಸಿದ್ದರು. ಈ ನಡುವೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ. ಹೊಸ ಹೊಸ ವ್ಯಕ್ತಿಗಳು ಮುನ್ನೆಲೆಗೆ ಬರುತ್ತಾರೆ. ಮಳೆಗಾಲ ಬಂದಾಗ ಅಣಬೆಗಳು ಹುಟ್ಟಿಕೊಳ್ಳುತ್ತವೆ. ಮಳೆ ಹೋದಾಗ ಅಣಬೆ ಕೂಡ ಇರುವುದಿಲ್ಲ. ಯಾರೇ ಬ್ಯಾನರ್ ಹಾಕಲಿ, ಯಾರೇ ಟ್ವಿಟರ್ ಅಭಿಯಾನ ಮಾಡಲಿ ಬಿಜೆಪಿ ಅದನ್ನು ಸ್ವಾಗತಿಸುತ್ತದೆ. ಬಿಜೆಪಿಗೆ ಇದನ್ನೆಲ್ಲ ಜೀರ್ಣಿಸುವ ಶಕ್ತಿ ಇದೆ ಎಂದಿದ್ದರು.

ಈ ಹೇಳಿಕೆಯ ವೀಡಿಯೊ ವೈರಲ್ ಆಗುತ್ತಲೇ ಅರುಣ್ ಕುಮಾರ್ ಬೆಂಬಲಿಗರು ಕೆರಳಿದ್ದರು. ಶಾಸಕರು ಪುತ್ತಿಲರನ್ನು ಉದ್ದೇಶಿಸಿ ಪರೋಕ್ಷ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅನೇಕ ಬೆಂಬಲಿಗರು ಬಿಜೆಪಿ ಮುಖಂಡರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು.

ಪುತ್ತೂರಿನಿಂದ ಈ ಬಾರಿ ಅರುಣ್ ಕುಮಾರ್ ಪುತ್ತಿಲರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಅವರ ಬೆಂಬಲಿಗರು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸುತ್ತಿದ್ದು, ಅಮಿತ್ ಶಾ ಸೇರಿದಂತೆ ಪಕ್ಷದ ಉನ್ನತ ನಾಯಕರಿಗೆ ಟ್ವಿಟರ್ ಅಭಿಯಾನ ನಡೆಸಿದ್ದರು. ಪುತ್ತೂರಿಗೆ ಪುತ್ತಿಲ ಎಂಬ ಹೆಸರಿನಲ್ಲಿ ಈ ಅಭಿಯಾನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅಮಿತ್ ಶಾ ಪುತ್ತೂರು ಭೇಟಿ ನಿಗದಿಯಾಗಿದ್ದು, ಪುತ್ತಿಲ ಬೆಂಬಲಿಗರು ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ನಗರದ ನಾನಾ ಕಡೆ ಅಳವಡಿಸಿದ್ದು, ಅದರಲ್ಲಿ ಶಾಸಕ ಸಂಜೀವ ಮಠಂದೂರು ಅವರ ಭಾವಚಿತ್ರ ಕೈಬಿಟ್ಟಿದ್ದರು.

Full View

Similar News