ಸೂಕ್ಷ್ಮ ಭೂಕಂಪನಗಳು ಭಾರತದಲ್ಲಿ ಬೃಹತ್ ಭೂಕಂಪದ ಅಪಾಯವನ್ನು ತಪ್ಪಿಸುತ್ತಿವೆ: ತಜ್ಞರ ಅನಿಸಿಕೆ
ಹೊಸದಿಲ್ಲಿ, ಫೆ.12: ಭಾರತದಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ಸೂಕ್ಷ ಭೂಕಂಪನಗಳು, ಭೂಪದರದ ಒತ್ತಡವನ್ನು ಬಿಡುಗಡೆಗೊಳಿಸಲು ನೆರವಾಗುತ್ತವೆೆ ಹಾಗೂ ಅತ್ಯಂತ ಭೀಕರವಾದ ಭೂಕಂಪ ಸಂಭವಿಸುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
ಒಂದು ವೇಳೆ ಭಾರತದಲ್ಲೇನಾದರೂ ಬೃಹತ್ ಭೂಕಂಪ ಸಂಭವಿಸಿದಲ್ಲಿ ಅದರಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಭಾರತ ಸರ್ವಸನ್ನದ್ಧವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ರೂಪದಲ್ಲಿ ಸಮರ್ಪಣಾ ಮನೋಭಾವದ, ಅತ್ಯಂತ ಸುಸಜ್ಜಿತ ಹಾಗೂ ತರಬೇತುಪಡೆದ ಪಡೆಯನ್ನು ಅದು ಹೊಂದಿದೆ ಎಂದವರು ಹೇಳಿದ್ದಾರೆ.
ಒಂದು ವೇಳೆ ಜನರು ಹಾಗೂ ಸಂಸ್ಥೆಗಳು ಕಟ್ಟಡ, ಮನೆಗಳನ್ನು ನಿರ್ಮಿಸುವಾಗ ಕಾನೂನುನಿಯಮಗಳು ಹಾಗೂ ಸಂಹಿತೆಗಳನ್ನು ಅನುಸರಿಸಿದಲ್ಲಿ ದೊಡ್ಡ ಪ್ರಮಾಣದ ಭೂಕಂಪಗಳಿಂದ ಆಗಬಹುದಾದ ಹಾನಿಯನ್ನು ಕಡಿಮೆಗೊಳಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ.
ಪಾಕಿಸ್ತಾನಕ್ಕೆ ತಾಗಿಕೊಂಡಿರುವ ಭಾರತದ ಪಶ್ಚಿಮ ಗಡಿಯಲ್ಲಿರುವ ಟ್ರಿಪಲ್ ಜಂಕ್ಷನ್ನಲ್ಲಿ ನಿರಂತರವಾಗಿ ಸಂಭವಿಸುವ ಸೂಕ್ಷ್ಮಮಟ್ಟದ ಭೂಕಂಪನಗಳು ಭೂಪದರ ಮೇಲಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಅಲ್ಲಿ ರಿಕ್ಟರ್ ಮಾಪಕದಲ್ಲಿ 4 ಹಾಗೂ 5 ತೀವ್ರತೆಯ ಕೆಲವು ಭೂಕಂಪನಗಳು ಸಂಭವಿಸಿವೆಯೆಂದು ಭೂಕಂಪನಶಾಸ್ತ್ರ ಕುರಿತ ರಾಷ್ಟ್ರೀಯ ಭೂವಿಜ್ಞಾನ ಕೇಂದ್ರದ ನಿರ್ದೇಶಕ ಓ.ಪಿ.ಮಿಶ್ರಾ ತಿಳಿಸಿದ್ದಾರೆ.
ಮೂರು ಭೂಪದರದ ಫಲಕಗಳು (ಟೆಕ್ಟೋನಿಕ್ ಪ್ಲೇಟ್ಸ್) ಸಂಧಿಸುವ ಕೇಂದ್ರವನ್ನು ಟ್ರಿಪಲ್ ಜಂಕ್ಷನ್ ಎಂದು ಕರೆಯಲಾಗುತ್ತದೆ. ಇವು ಭೂಗರ್ಭದ ಚಟುವಟಿಕೆಯ ಅತ್ಯಂತ ಮಹತ್ವದ ಪ್ರದೇಶಗಳಾಗಿವೆ ಹಾಗೂ ಗಣನೀಯ ಮಟ್ಟದ ಭೂಕಂಪನ ಹಾಗೂ ಜ್ವಾಲಾಮುಖಿ ಚಟುವಟಿಕೆಯ ತಾಣಗಳಾಗಿವೆ. ಭೂಪದರದ ಫಲಕಗಳ ಚಲನೆಯಿಂದಾಗಿ ಭೂಗರ್ಭದಲ್ಲಿ ಉಂಟಾಗುವ ಒತ್ತಡ ಹಾಗೂ ಎಳೆಯುವಿಕೆಯು, ಭೂಕಂಪದ ರೂಪದಲ್ಲಿ ಬಿಡುಗಡೆಗೊಳ್ಳುತ್ತದೆ.
‘‘ಟ್ರಿಪಲ್ ಜಂಕ್ಷನ್ಗಳು ಅತ್ಯಂತ ಜಿಗುಟು ಹಾಗೂ ಸಾಂಧ್ರತೆಯಿಂದ ಕೂಡಿರುತ್ತದೆ. ಒಂದು ವೇಳೆ ಅದು ಮುರಿದು ಹೋದಲ್ಲಿ ಇಡೀ ಒತ್ತಡವು ಬಿಡುಗಡೆಗೊಳ್ಳುತ್ತದೆ. ಇದರಿಂದಾ ಸಾಕಷ್ಟು ಹಾನಿಯಾಗುವುದೆಂದು ಮಿಶ್ರಾ ವಿವರಿಸಿದ್ದಾರೆ.
ಟರ್ಕಿಯಲ್ಲಿ ಅರೇಬಿಯನ್ ಭೂಪದರ, ಆಫ್ರಿಕನ್ ಭೂಪದರ ಆಗೂ ಅನಾಟೊಲಿಯನ್ ಭೂಪದರ ಹೀಗೆ ಮೂರು ಟ್ರಿಪಲ್ ಜಂಕ್ಷನ್ಗಳಿವೆ. ಈ ಜಂಕ್ಷನ್ನಲ್ಲಿ ಉಂಟಾದ ಒಡಕಿನಿಂದಾಗಿ ಫೆ.6ರಂದು ಬೃಹತ್ ಭೂಕಂಪ ಸಂಭವಿಸಿದ್ದು, ಟರ್ಕಿ ಹಾಗೂ ಸಿರಿಯದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆಂದವರು ಹೇಳಿದ್ದಾರೆ.
‘‘ಭಾರತವು ಭೂಕಂಪನ ಚಟುವಟಿಕೆಯು ಸಕ್ರಿಯವಾಗಿರುವ ಪ್ರದೇಶದಲ್ಲಿದೆ. ಅದೃಷ್ಟವಶಾತ್ ಪ್ರತಿದಿನವೂ ಸಾಕಷ್ಟು ಸೂಕ್ಷ್ಮಭೂಕಂಪನಗಳು ಸಂಭವಿಸುತ್ತಿರುತ್ತವೆ. ಇದರಿಂದಾಗಿ ಸಂಗ್ರಹಿತ ಒತ್ತಡವು ಬಿಡುಗಡೆಗೊಳ್ಳುತ್ತದೆ’ ಎಂದು ಭೂಗರ್ಭಶಾಸ್ತ್ರಜ್ಞರೊಬ್ಬರು ತಿಳಿಸಿದ್ದಾರೆ.