ಕರ್ನಾಟಕದಲ್ಲಿ ಕೋಮು ಸಮಸ್ಯೆಗಳಿವೆ, ಕೇರಳ ಸೌಹಾರ್ದತೆಯಿಂದ ಜೀವಿಸುತ್ತಿದೆ: ಶಾ ಹೇಳಿಕೆಗೆ ಪಿಣರಾಯಿ ತಿರುಗೇಟು

Update: 2023-02-13 11:28 GMT

ತಿರುವನಂತಪುರಂ: ಕೇರಳದ ಕುರಿತ ಅಪಮಾನಕರ ಹೇಳಿಕೆಗಾಗಿ  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರನ್ನು ಕೇರಳದಲ್ಲಿ ಅವರು ಯಾವ ಅಪಾಯವನ್ನು ಅನುಭವಿಸಿದ್ದಾರೆ ಎಂಬುದನ್ನು ವಿವರಿಸುವಂತೆ ಸವಾಲು ಹಾಕಿದ್ದಾರೆ. 

ಕೊಟ್ಟಾಯಂ ಬಳಿ ಪಕ್ಷದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಪಿಣರಾಯಿ, "ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ, ಆದರೆ ಎಡಪಕ್ಷಗಳ ಆಡಳಿತವಿರುವ ಕೇರಳದಲ್ಲಿ ಅವರು ಶಾಂತಿಯುತವಾಗಿ ಬದುಕುತ್ತಿದ್ದಾರೆ" ಎಂದು ಹೇಳಿದರು.

"ಕೇರಳದ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ಇಲ್ಲಿ ಏನು ತಪ್ಪಾಗಿದೆ ಎಂದು ಅಮಿತ್ ಶಾ ಹೇಳಬೇಕು. ಕರ್ನಾಟಕದಲ್ಲಿ ಅಲ್ಪಸಂಖ್ಯಾತರು ವ್ಯಾಪಕ ದಾಳಿಗಳನ್ನು ಎದುರಿಸುತ್ತಿದ್ದಾರೆ ಆದರೆ ಧಾರ್ಮಿಕ ಅಲ್ಪಸಂಖ್ಯಾತರು ಕೇರಳದಲ್ಲಿ ಸುರಕ್ಷಿತವಾಗಿದ್ದಾರೆ" ಎಂದು ಮುಖ್ಯಮಂತ್ರಿ ಹೇಳಿದರು.

ಶನಿವಾರ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಅಮಿತ್ ಶಾ ಅವರು ಸಾರ್ವಜನಿಕ ಸಭೆಯೊಂದರಲ್ಲಿ "ನಿಮ್ಮ ನೆರೆಹೊರೆಯಲ್ಲಿ ಕೇರಳವಿದೆ" ಎಂದು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಹಲವಾರು ನಾಯಕರನ್ನು ಬಂಧಿಸಿದ ಕುರಿತು ಪರೋಕ್ಷ ಉಲ್ಲೇಖ ಮಾಡಿದ್ದರು.

ಇದಕ್ಕೆ ಸಿಎಂ ವಿಜಯನ್ ಅವರು, "ಕೇರಳವು ದೇಶದಲ್ಲೇ ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೊಂದಿದೆ ಮತ್ತು ರಾಜ್ಯವು ಜಾತ್ಯತೀತತೆಯನ್ನು ಪಾಲಿಸುತ್ತದೆ ಎಂಬುದನ್ನು ವಿವಿಧ ಸೂಚ್ಯಂಕಗಳು ತೋರಿಸುತ್ತವೆ" ಎಂದು ಸೂಚಿಸಿದರು. ಆದಾಗ್ಯೂ, ಸಂಘಪರಿವಾರವು ಕೋಮುವಾದ ಮತ್ತು ಕೋಮುಗಲಭೆಯ ಮುಖಾಂತರ ಬೆಳೆಯುತ್ತಿದೆ. ಅವರು ನೈಜ ಸಮಸ್ಯೆಗಳು ಮತ್ತು ಅವರ ದುರಾಡಳಿತದಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಬಯಸುತ್ತಾರೆ" ಎಂದು ಪಿಣರಾಯಿ ಪ್ರತಿಪಾದಿಸಿದರು.

ಕೇರಳದಲ್ಲಿ ಜನರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ ಎಂದು ಗೃಹ ಸಚಿವರಾಗಿ ಶಾ ಹೇಳಬೇಕಿತ್ತು ಮತ್ತು ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿರುವ ಸ್ಥಳಗಳಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಸಿಎಂ ಹೇಳಿದರು. "ಮಂಗಳೂರು ಸೇರಿದಂತೆ ಕರ್ನಾಟಕದ ನಮ್ಮ ಗಡಿ ಪ್ರದೇಶಗಳು ಸಾಕಷ್ಟು ಕೋಮುಗಲಭೆಗೆ ಸಾಕ್ಷಿಯಾಗಿದೆ. 2021 ರ ಕ್ರಿಸ್‌ಮಸ್ ಸಂದರ್ಣದಲ್ಲಿ ಚಿಕ್ಕಮಗಳೂರಿನ 150 ವರ್ಷಗಳಷ್ಟು ಹಳೆಯ ಚರ್ಚ್‌ನ ಮೇಲೆ ಸಂಘಪರಿವಾರದ ದಾಳಿ ನಡೆಯಿತು. ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರು ಸಂಘ ಪರಿವಾರದಿಂದ ಇಂತಹ ಅನೇಕ ದಾಳಿಗಳನ್ನು ಎದುರಿಸಿದ್ದಾರೆ. ಆದರೆ ಕೇರಳದ ಪರಿಸ್ಥಿತಿ ಹೀಗಿದೆಯೇ? ಕೇರಳದಲ್ಲಿ ಯಾರೂ ತಮ್ಮ ವೈಯಕ್ತಿಕ ನಂಬಿಕೆಯಿಂದ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಪಿಣರಾಯಿ ಹೇಳಿದರು.

Similar News