ಶಿವಸೇನೆ ಹೆಸರು, ಚಿಹ್ನೆ ಕುರಿತ ಚುನಾವಣಾ ಆಯೋಗದ ಆದೇಶ ವಿರುದ್ಧ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಉದ್ಧವ್ ಠಾಕ್ರೆ
ಹೊಸದಿಲ್ಲಿ, ಫೆ. 20: ಏಕನಾಥ್ ಶಿಂದೆ ನೇತೃತ್ವದ ಬಣ ನಿಜವಾದ ಶಿವಸೇನೆ ಎಂದು ಚುನಾವಣಾ ಆಯೋಗ ನೀಡಿದ ಆದೇಶ ಪ್ರಶ್ನಿಸಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸೋಮವಾರ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದಾರೆ.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಕರಣವನ್ನು ಶೀಘ್ರ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರಲ್ಲಿ ಮನವಿ ಮಾಡಿದರು. ಆದರೆ, ಈ ವಿಷಯ ಉಲ್ಲೇಖಿಸಲಾದ ಪಟ್ಟಿಯ ಭಾಗವಲ್ಲದೇ ಇರುವುದರಿಂದ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
‘‘ಎಡ, ಬಲ ಅಥವಾ ಕೇಂದ್ರ, ಯಾವುದೇ ಆಗಿದ್ದರೂ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಸೂಕ್ತ ಪ್ರಕ್ರಿಯೆಯೆ ಮೂಲಕ ನಾಳೆ ಬನ್ನಿ’’ ಎಂದು ಅವರು ಹೇಳಿದರು.
ಕಳೆದ ವರ್ಷ ಜೂನ್ನಲ್ಲಿ ಶಿಂಧೆ ನೇತೃತ್ವದ ಶಾಸಕರ ಗುಂಪು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿತ್ತು. ಶಿವಸೇನೆ ಎರಡು ಹೋಳಾಗಿತ್ತು. ಇದರಿಂದ ಈ ಹಿಂದಿನ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ನೇತೃತ್ವದ ಆಡಳಿತಾರೂಢ ಮಹಾರಾಷ್ಟ್ರ ಸರಕಾರ ಕುಸಿದು ಬಿದ್ದಿತ್ತು.