ಇಬ್ಬರು ಮುಸ್ಲಿಂ ಯುವಕರನ್ನು ಸುಟ್ಟು ಕೊಂದ ಪ್ರಕರಣದಲ್ಲಿನ ಪ್ರಮುಖ ಆರೋಪಿ ಮೋನು ಮನೇಸರ್ ಯಾರು?
ಹೊಸದಿಲ್ಲಿ: ಹರ್ಯಾಣಾದ ಭಿವಾನಿ ಜಿಲ್ಲೆಯಲ್ಲಿ ಕಳೆದ ಗುರುವಾರ ಎಸ್ಯುವಿ ಒಂದರಲ್ಲಿ ರಾಜಸ್ಥಾನದ ಭರತಪುರ್ ಜಿಲ್ಲೆಯ ಇಬ್ಬರು ಮುಸ್ಲಿಂ ಯುವಕರ ಸುಟ್ಟು ಕರಕಲಾದ ಮೃತದೇಹಗಳು ಪತ್ತೆಯಾದ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ತಿಳಿಯಲಾದ ಬಜರಂಗದಳ ಕಾರ್ಯಕರ್ತ ಮೋಹಿತ್ ಯಾದವ್ ಆಲಿಯಾಸ್ ಮೋನು ಮನೇಸರ್ ಗುರ್ಗಾಂವ್ನಲ್ಲಿ ಹರ್ಯಾಣ ಸರಕಾರದ ಗೋ ರಕ್ಷಣಾ ಕಾರ್ಯಪಡೆಗಳಲ್ಲಿ ಕಳೆದ ಐದು ತಿಂಗಳಲ್ಲಿ ಗುರುತಿಸಿಕೊಂಡಿದ್ದ.
ಮನೇಸರ್ ನಿವಾಸಿಯಾದ ಈತನ ವಯಸ್ಸು 28. ಪಾಲಿಟೆಕ್ನಿಕ್ ಡಿಪ್ಲೋಮಾ ಹೊಂದಿರುವ ಮೋನು ತನ್ನನ್ನು ಗೋರಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾನೆ ಎಂದು indianexpress.com ವರದಿ ಮಾಡಿದೆ.
2011 ರಲ್ಲಿ ಮನೇಸರ್ನಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕನಾಗಿ ಸೇರಿಕೊಂಡಿದ್ದ ಆತ ಮನೇಸರ್ನಲ್ಲಿ ಕಾರ್ಮಿಕರಿಗೆ ಕೊಠಡಿಗಳನ್ನು ನೀಡುವ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾನೆ. ಪ್ರಸ್ತುತ ಈತ ಜಿಲ್ಲಾ ಗೋ ರಕ್ಷಣಾ ಪಡೆಯ ಮುಖ್ಯಸ್ಥನಾಗಿದ್ದು ಮನೇಸರ್ನಲ್ಲಿ ಜಿಲ್ಲಾಡಳಿತದ ನಾಗರಿಕ ರಕ್ಷಣಾ ತಂಡದ ಸದಸ್ಯನೂ ಆಗಿದ್ದಾನೆ.
ಈತ ಮೋನು ಮನೇಸರ್ ಬಜರಂಗದಳ ಎಂಬ ಯುಟ್ಯೂಬ್ ಪೇಜ್ ಅನ್ನೂ ನಡೆಸುತ್ತಿದ್ದು ಇದಕ್ಕೆ 2 ಲಕ್ಷಕ್ಕೂ ಅಧಿಕ ಚಂದಾದಾರರಿದ್ದಾರಲ್ಲದೆ ಸಿಲ್ವರ್ ಪ್ಲೇ ಬಟನ್ ಕೂಡ ಹೊಂದಿದೆ. ಯುಟ್ಯೂಬ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಮೋನು ಮತ್ತಾತನ ಸಹಚರರು ಗೋ ಕಳ್ಳಸಾಗಾಟಗಾರರನ್ನು ಬೆಂಬತ್ತುವ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಅಷ್ಟೇ ಅಲ್ಲದೆ ವಶಕ್ಕೆ ಪಡೆದುಕೊಳ್ಳಲಾದ ಶಂಕಿತರ ಹಾಗೂ ರಕ್ಷಿಸಲ್ಪಟ್ಟ ಗೋವುಗಳ ಫೋಟೋಗಳನ್ನೂ ಅವರು ಶೇರ್ ಮಾಡಿಕೊಳ್ಳುತ್ತಿದ್ದರು.
ಮೃತ ಯುವಕರಾದ ಜುನೈದ್ ಮತ್ತು ನಾಸಿರ್ ಪೈಕಿ, ಜುನೈದ್ ಸೋದರ ಸಂಬಂಧಿ ಇಸ್ಮಾಯಿಲ್ ದಾಖಲಿಸಿದ್ದ ದೂರಿನ ಪ್ರಕಾರ ಮೋನು ಮತ್ತು ಬಜರಂಗದಳದ ಇತರ ಐದು ಸದಸ್ಯರು ಜುನೈದ್ ಮತ್ತು ನಾಸಿರ್ನನ್ನು ಅಪಹರಿಸಿ ಜೀವಂತ ಸುಟ್ಟಿದ್ದರೆಂದು ಆರೋಪಿಸಲಾಗಿದೆ.
ಗುರ್ಗಾಂವ್ನಲ್ಲಿ ಮೋನು ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ ಎಂದು ಹೇಳಲಾಗುತ್ತಿದೆ. 2016 ರಲ್ಲಿ ಶಂಕಿತ ಗೋಕಳ್ಳಸಾಗಣಿಕೆದಾರರು ಆತನ ವಿರುದ್ಧ ಫರೀದಾಬಾದ್ನಲ್ಲಿ ದೂರು ನೀಡಿದ್ದರೂ ದೂರುದಾರ ದೂರು ವಾಪಸ್ ಪಡೆದ ನಂತರ ಪ್ರಕರಣ ರದ್ದುಗೊಂಡಿತ್ತು.
ರಾಜಸ್ಥಾನದ ಪ್ರಕರಣಕ್ಕಿಂತ ಕೆಲವೇ ದಿನಗಳ ಹಿಂದೆ ಮೋನು ಹೆಸರು ಹರ್ಯಾಣಾದ ನುಹ್ ಎಂಬಲ್ಲಿನ ಕೊಲೆ ಪ್ರಕರಣದಲ್ಲೂ ಕೇಳಿ ಬಂದಿತ್ತು. ಇಲ್ಲಿ ಸಂತ್ರಸ್ತ ವಾರಿಸ್ ಖಾನ್ (22) ಅಪಘಾತದಲ್ಲುಂಟಾದ ಗಾಯಗಳಿಂದ ಮೃತಪಟ್ಟಿದ್ದಾನೆಂದು ಪೊಲೀಸರು ಹೇಳಿದ್ದರಿಂದ ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿರಲಿಲ್ಲ.